ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಸ್ಟೀವ್ ಜಾಬ್ಸ್ !

ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಸಾಧನೆ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

ಐಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಸ್ಟೀವ್ ಜಾಬ್ಸ್ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ, ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ “Reality Distortion” ಎಂದು ದೂರುತ್ತಾರೆ. ಆದರೇನಂತೆ ಹುಚ್ಚುಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

“Think Different”The people who are crazy enough to think they can change the world are the ones who do!!

ಈ ರೀತಿ ಸಾಗುವ “ಆಪಲ್” ಕಂಪನಿಯ ಜಾಹೀರಾತು ಆತನ ಮನೋಬಲದ ಪ್ರತಿಬಿಂಬವೇ ಆಗಿದೆ. 1997ರಲ್ಲಿ ಆತ ರೂಪಿಸಿದ `ಐ-ಮ್ಯಾಕ್’ ಕಂಪ್ಯೂಟರ್ ಜಗತ್ತಿನ ಅತ್ಯಂತ ಹಗುರವಾದ ಪಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, 2001ರಲ್ಲಿ ಹೊರತಂದ “ಐ-ಪಾಡ್” ಸಂಗೀತವನ್ನು ಆಲಿಸುವ ಪ್ರಕ್ರಿಯೆಗೇ ಹೊಸ ಅರ್ಥ ನೀಡಿತು. ಇದುವರೆಗೂ 11 ಕೋಟಿ ಐ-ಪಾಡ್‌ಗಳು ಖರ್ಚಾಗಿವೆ. ಅದರ ಬೆನ್ನಲ್ಲೇ ಪ್ರಾರಂಭವಾದ “ಐ-ಟ್ಯೂನ್ಸ್ ಸ್ಟೋರ್”ಗಳಿಂದ 400 ಕೋಟಿ ಹಾಡುಗಳು ಖರೀದಿಯಾಗಿವೆ!! 2007ರಲ್ಲಿ ದೂರಸಂಪರ್ಕ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ “ಐ-ಫೋನ್”(ಮೊಬೈಲ್) ಖರೀದಿಸಲು ಅಮೆರಿಕನ್ನರು ಹಿಂದಿನ ದಿನದಿಂದಲೇ ಸಾಲುಗಟ್ಟಿ ನಿಂತಿದ್ದರು. ಅಂದು 599 ಡಾಲರ್‌ಗೆ ನೀಡಿದ್ದ ಫೋನ್‌ಗಳನ್ನು ಮೊನ್ನೆ ಜೂನ್ 10ರಂದು 199 ಡಾಲರ್‌ಗೆ ಮಾರುಕಟ್ಟೆಗೆ ಬಿಟ್ಟಿದ್ದಾನೆ. ಭಾರತದಲ್ಲೂ ಅತ್ಯಂತ ಕಾತರದಿಂದ ಕಾಯುತ್ತಿರುವ ಮೊಬೈಲ್ ಎಂದರೆ ಐ-ಫೋನ್. ಬರುವ ಆಗಸ್ಟ್‌ನಲ್ಲಿ ಐ-ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದ್ದು ನಮ್ಮಲ್ಲಿನ ಮುಂಚೂಣಿ ಮೊಬೈಲ್ ಕಂಪನಿಗಳಾದ ನೋಕಿಯಾ, ಸೋನಿ ಎರಿಕ್‌ಸನ್ ಹಾಗೂ ಮೋಟೊರೊಲಾ ಕಂಪನಿಗಳು ಮಳೆಗಾಲದಲ್ಲೂ ಬೆವರಲು ಆರಂಭಿಸಿವೆ!

ಇದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಾರಂಭದಲ್ಲಿ ದುಬಾರಿ ಎನಿಸಿದ್ದ ಐ-ಪೋನ್‌ನ ಬೆಲೆಯನ್ನು ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಿರುವುದರಿಂದ ಸಾಮಾನ್ಯ ಜನರೂ ಖರೀದಿಸಬಹುದಾಗಿದೆ. “3ಜಿ ನೆಟ್‌ವರ್ಕ್”ನಿಂದಾಗಿ ಇಂಟರ್‌ನೆಟ್ ಅನ್ನು ಜಾಲಾಡುವುದು ತೀರಾ ಸರಳ ಹಾಗೂ ಸುಲಭವಾಗಲಿದೆ. ಐ-ಫೋನ್‌ನಲ್ಲೇ ಐ-ಪಾಡ್ ಕೂಡ ಇರುವುದರಿಂದ ಸಂಗೀತವನ್ನು ಉತ್ಕೃಷ್ಟ ಸ್ತರದಲ್ಲಿ ಕೇಳಬಹುದು. ಇಂತಹ ಸಾಧನೆಯನ್ನು ಗುರುತಿಸಿರುವ ಖ್ಯಾತ “ಬ್ಲೆಂಡರ್” ಮ್ಯಾಗಝಿನ್, ಜಾಬ್ಸ್ ಅವರನ್ನು ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿ ಎಂದಿದೆ. ಎಪ್ಪತ್ತೈದು ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಅಂತಹ ಬಿರುದು ನೀಡಿದೆ. ‘The undisputed king of the online music revolution’, ‘Technology trendsetter’ ಎಂದು ಮ್ಯಾಗಝಿನ್‌ನ ಸಂಪಾದಕ ಕ್ರೇಗ್ ಮಾರ್ಕ್ಸ್ ಶ್ಲಾಘಿಸಿದ್ದಾರೆ. “MySpace”ನ ಸ್ಥಾಪಕ ಟಾಮ್ ಆಂಡರ್‌ಸನ್, “YouTube” ಸೃಷ್ಟಿಕರ್ತರಾದ ಚಾಡ್ ಹರ್ಲೆ ಮತ್ತು ಸ್ಟೀವ್ ಚೆನ್ ಅವರು ನಂತರದ ಸ್ಥಾನದಲ್ಲಿದ್ದಾರೆ ಎಂದರೆ ಜಾಬ್ಸ್ ಎಂತಹ ಸಾಧಕನಿರಬಹುದು?!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ
ಎನಬೇಡಮೃತ್ಯುವೆನ್ನುವುದೊಂದು ತೆರೆ ಇಳಿತ..!
ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ…

ಇಂದು ಸ್ಟೀವ್ ಜಾಬ್ಸ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಈ ಮೇಲಿನ ಡಿವಿಜಿ ಕವನ ನೆನಪಾಗುತ್ತದೆ. ಅವನ ಹುಟ್ಟೇ ಒಂದು ದುರಂತ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡುಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಆದರೇನಂತೆ ಜಸ್ಟಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. ಹದಿನೇಳನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್‌ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೇನಂತೆ ಭಾನುವಾರ ಮಾತ್ರ `ಫುಲ್ ಮೀಲ್ಸ್’ ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್, ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್‌ನಲ್ಲಿ ಪಂಟ.ಇವರಿಬ್ಬರೂ ಸೇರಿ 1976, ಏಪ್ರಿಲ್ 1ರಂದು ಆರಂಭಿಸಿದ್ದೇ “ಆಪಲ್ ಕಂಪ್ಯೂಟರ್”!

ಆಗ ಜಾಬ್ಸ್‌ಗೆ ಕೇವಲ 21 ವರ್ಷ. ಆಪಲ್ ಪ್ರಾರಂಭವಾಗಿದ್ದು ಜಾಬ್ಸ್‌ನ ಮನೆಯ ಗ್ಯಾರೇಜ್‌ನಲ್ಲಿ. ಆದರೇನಂತೆ ಯಶಸ್ಸು ಅರಸಿಕೊಂಡು ಬಂತು. ಆಪಲ್ ರೂಪಿಸಿದ ಆಪಲ್-1, ಆಪಲ್-2 ಕಂಪ್ಯೂಟರ್‌ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ(ಸಿಇಓ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್‌ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಓ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆಪಲ್‌ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water, or do you want a chance to change the world? ಎಂಬ ಜಾಬ್ಸ್‌ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆಪಲ್ ಸೇರಿಬಿಟ್ಟ. 1984ರಲ್ಲಿ ಆಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ 1984, ಜನವರಿ 24ರಂದು ನಡೆದ ಆಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್ `ಮ್ಯಾಕಿಂತೋಷ್’ (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ `ಮೌಸ್’ ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್‌ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್‌ನನ್ನೇ ಹೊರಹಾಕಲಾಯಿತು!

ಅವನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸಿಟ್ಟಿಗೆದ್ದು ಯಾರನ್ನಾದರೂ ಕೊಲ್ಲುತ್ತಿದ್ದರು, ಇಲ್ಲವೇ ಹುಚ್ಚರಾಗುತ್ತಿದ್ದರು. ಆದರೆ ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ “ನೆಕ್ಸ್ಟ್”ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವವರಿಂದ “ಪಿಕ್ಸರ್” ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ `ಡಿಸ್ನಿ’ ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು `ಪಿಕ್ಸರ್’ ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್‌ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್‌ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ `ಆಪರೇಟಿಂಗ್ ಸಿಸ್ಟಮ್’ಗಳನ್ನು ಹೊರತರಲಾಗದೆ ಆಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು. ಮತ್ತೆ ಆಪಲ್ ತಲೆಯೆತ್ತಬೇಕಾದರೆ ಜಾಬ್ಸ್‌ನ `ನೆಕ್ಸ್ಟ್’ ಕಂಪನಿಯ ಜತೆ ಕೈಜೋಡಿಸುವುದು ಮಾತ್ರವಲ್ಲ, ಜಾಬ್ಸ್‌ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!! 1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆಪಲ್‌ಗೆ ಹಿಂದಿರುಗಿದ ಜಾಬ್ಸ್ “Mac OS X” ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಆನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್‌ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ. ಅಲ್ಲದೆ ಈಚೆಗೆ ಆತ ಹೊರತಂದ ಐಫೋನ್ ವರ್ಷ ತುಂಬುವುದಕ್ಕೂ ಮೊದಲೇ ಜಗತ್ತಿನ ಮೆಚ್ಚುಗೆ ಗಳಿಸಿದೆ, ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ. ಇವತ್ತು ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್‌ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವೂ ಒಂದು. 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್, “ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ಸಂದ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ….”

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

“ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್‌ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಅಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of Life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ. ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ. ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ “The Whole Earth Catalog” ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯ ಭಾಗದಲ್ಲಿ “The Whole Earth Catalog”ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೊ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು- Stay Hungry, Stay Foolish! ನಾನು ನಿಮಗೆ ಹಾರೈಸುವುದೂ ಅದನ್ನೇ – Stay Hungry, Stay Foolish! ಮನದ ತುಂಬ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ”.

ಜಾಬ್ಸ್ ಭಾಷಣದಲ್ಲಿ ನಮಗೂ ಒಂದು ಕಿವಿಮಾತಿದೆ. ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಜಾಬ್ಸ್‌ನಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕನ್ನು ಬದಲಾಯಿಸಲಾಗದಿದ್ದರೂ ಕನಿಷ್ಠ ನಮ್ಮ ಬದುಕು ಮತ್ತು ಭವಿಷ್ಯವನ್ನಾದರೂ ಹಸನಾಗಿಸಿಕೊಳ್ಳಬಹುದಲ್ಲವೆ? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

http://pratapsimha.com/wp-content/uploads/2011/09/apple.jpg

ಐ ಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್, ಈಗ ಐ ಪ್ಯಾಡ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ಸ್ಟೀವ್ ಜಾಬ್ಸ್. ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ “Reality Distortion” ಎಂದು ದೂರುತ್ತಾರೆ. ಆದರೇನಂತೆ ಹುಚ್ಚು ಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

ಇಂದು ಸ್ಟೀವ್ ಜಾಬ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಅವನ ಹುಟ್ಟೇ ಒಂದು ಆಕಸ್ಮಿಕವೆಂಬುದು ತಿಳಿಯುತ್ತದೆ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡು ಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಈ ಮಧ್ಯೆ ಜಸ್ಪಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. 17ನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್್ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೂ ಭಾನುವಾರ ಮಾತ್ರ”ಫುಲ್ ಮೀಲ್ಸ್ ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆ ತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್ ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್್ನಲ್ಲಿ ಪಂಟ.

ಇವರಿಬ್ಬರೂ ಸೇರಿ 1976, ಏಪ್ರಿಲ್ 1 ರಂದು ಆರಂಭಿಸಿದ್ದೇ “ಆ್ಯಪಲ್ ಕಂಪ್ಯೂಟರ್್”!

ಆಗ ಜಾಬ್ಸ್್ಗೆ ಕೇವಲ 21 ವರ್ಷ. ಆ್ಯಪಲ್ ಪ್ರಾರಂಭವಾಗಿದ್ದು ಜಾಬ್ಸ್್ನ ಮನೆಯ ಗ್ಯಾರೇಜ್್ನಲ್ಲಿ. ಆ್ಯಪಲ್-1, ಆ್ಯಪಲ್-2 ಕಂಪ್ಯೂಟರ್್ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್್ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಒ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆ್ಯಪಲ್್ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water, or do you want a chance to change the world? ಎಂಬ ಜಾಬ್ಸ್್ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆ್ಯಪಲ್ ಸೇರಿಬಿಟ್ಟ. 1984ರಲ್ಲಿ ಆ್ಯಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ1984, ಜನವರಿ 24 ರಂದು ನಡೆದ ಆ್ಯಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್”ಮ್ಯಾಕಿಂತೋಷ್್’ (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ”ಮೌಸ್್’ ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್್ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆ್ಯಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು.  ಅದು ಯಾವ ಮಟ್ಟಕ್ಕೆ  ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್್ನನ್ನೇ ಹೊರಹಾಕಲಾಯಿತು!

ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ “ನೆಕ್ಸ್ಟ್್” ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವರಿಂದ “ಪಿಕ್ಸರ್್” ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆ್ಯನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ”ಡಿಸ್ನಿ’ ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು”ಪಿಕ್ಸರ್್’ ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್್ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್್ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ”ಆಪರೇಟಿಂಗ್ ಸಿಸ್ಟಮ್್’ ಗಳನ್ನು ಹೊರತರಲಾಗದೆ ಆ್ಯಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು.

ಮತ್ತೆ ಆ್ಯಪಲ್ ತಲೆಯೆತ್ತಬೇಕಾದರೆ ಜಾಬ್ಸ್್ನ”ನೆಕ್ಸ್ಟ್್’ ಕಂಪನಿಯ ಜತೆ ಕೈ ಜೋಡಿಸುವುದು ಮಾತ್ರವಲ್ಲ ಜಾಬ್ಸ್್ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!

1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆ್ಯಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆ್ಯಪಲ್್ಗೆ ಹಿಂದಿರುಗಿದ ಜಾಬ್ಸ್ “Mac OS X” ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಅನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್್ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ ಐಫೋನ್ ಜಗತ್ತಿನ ಮೆಚ್ಚುಗೆ ಗಳಿಸಿದೆ. ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯಿತು. ಇವತ್ತು ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್್ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್್ಪೋರ್ಡ್ ವಿಶ್ವವಿದ್ಯಾಲಯವೂ ಒಂದು 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್ “ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್ ಫೋರ್ಡ್್ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ, ಬರೀ ಮೂರು ಕಥೆಗಳಷ್ಟೇ…..”

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ, ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು, ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

“ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಅನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು  ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೆ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿ ಬಿಡು ಎಂದು ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು  ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್್ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು!

ಅಂದು ನಾನು ಸಾವನ್ನು ಸ್ಪರ್ಷಿಸಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಇಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ ಹೊಸಬರಿಗೆ ಅವಕಾಶ ಮಾಡಿ ಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ  ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ.  ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ “The Whole Earth Catalog” ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯಭಾಗದಲ್ಲಿ The Whole Earth Catal

ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೋ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು – Stay Hungry, Stay Foolish ! ನಾನು ನಿಮಗೆ ಹಾರೈಸುವುದೂ ಅದನ್ನೇ – Stay Hungry, Stay Foolish ! ಮನದ ತುಂಬಾ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ”.

ಇಂತಹ ಪ್ರೇರಣಾದಾಯಿಕ ಭಾಷಣ ಮಾಡಿದ್ದ, ಸಾಧನೆಯಲ್ಲೂ ಪ್ರೇರಕ ಶಕ್ತಿಯಾಗಿರುವ ಸ್ಟೀವ್್ಜಾಬ್ಸ್ ಆ್ಯಪಲ್ ಕಂಪನಿಯ ಸಿಇಒ ಸ್ಥಾನಕ್ಕೆ ಆಗಸ್ಟ್ 24ರಂದು ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಮಸ್ಯೆಯೇ ಅದಕ್ಕೆ ಮುಖ್ಯ ಕಾರಣವೆಂಬ ಗುಮಾನಿಯಿದೆ. 2008ರಲ್ಲಿ ಬ್ಲೂಮ್್ಬರ್ಗ್ ಟೀವಿಯಂತೂ ಜಾಬ್ಸ್ ತೀರಿಕೊಂಡಿದ್ದಾರೆ ಎಂದು ಶ್ರದ್ಧಾಂಜಲಿ ಸುದ್ದಿಯನ್ನು ಪ್ರಕಟಿಸಿಬಿಟ್ಟಿತ್ತು. ಇದೇನೇ ಇರಲಿ, ಹಾಲಿವುಡ್್ನಲ್ಲಿ ಜೇಮ್ಸ್ ಕ್ಯಾಮರಾನ್ ಹೇಗೆ ನಮ್ಮ ಕಲ್ಪನೆಗಳ ಹರವನ್ನೇ ವಿಸ್ತಾರ ಮಾಡುವ ನಿರ್ದೇಶಕರೋ, ಕಂಪ್ಯೂಟರ್ ಮತ್ತು ಮೊಬೈಲ್ ಕ್ಷೇತ್ರದಲ್ಲಿ ನಮ್ಮ ಕಲ್ಪನೆಗೂ ನಿಲುಕದ ಅದ್ಭುತ ಲೋಕವನ್ನು ವಾಸ್ತವಕ್ಕಿಳಿಸುವ ಮಾಂತ್ರಿಕ ಸ್ಟೀವ್್ಜಾಬ್ಸ್. ಅವರಿಲ್ಲದ ಆ್ಯಪಲ್ ಅನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ, ಅಲ್ಲವೇ?

ಗಾದೆ

“ಕರ್ಕರೆ ದೇವ್ರಿಗೆ ಮರನ್ ಜಾಗಂಟಿ”

“ಆಡಿ ಪೊಂಕ್ ಅನ್ಸ್ ಕಂಬುದಕ್ಕಿಂತ ಆಡದೇ ಮೂಕ್ ಅನ್ಸ್ ಕಂಬುದ್ ಲೇಸು”

“ಊರಿಗ್ ಬುದ್ಧಿ ಹೇಳುದ್ ಒಲಿಗೆ ಉಚ್ಚಿ ಹೊಯ್ಯುದ್”

“ಕುಪ್ಳನ್ ನಂಬ್ಕಂಡ್ ಕೊಳ್ಕಿ ನಟ್ರಂಬ್ರ್”

“ಹೆಡ್ದನ್ನ ಕಂಡ್ರೆ ಹೆಡ್ಗೆಗ್ ನೀರ್ ಹೊರ್ಸ್ತ್ರು”

“ಆಡಿ ತಪ್ಪುಕಾಗ ಓಡಿ ಸಿಕ್ಕುಕಾಗ”

“ಸಾರು ಉಕ್ಕಬಾರದು ಹೆಣ್ಣು ಸೊಕ್ಕಬಾರದು”.

ಅರಸನ ಅಂಕೆ ಇಲ್ಲ .ದೈಯ್ಯದ ಕಾಟವಿಲ್ಲ..

“ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ.!!”

“ಅಗಿದು ಉಣ್ಣು.ನಿಗಿದು ಮಲಗು”

“ಕತ್ತೆಯನ್ನು ಮದುವೆಗೆ ಕರೆದರೂ ಭಾರ ಹೊರಲೆಂದೇ”

“ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು”.

“ಊರು ಸುಟ್ಟರೂ ಹನುಮಪ್ಪ ಹೊರಗೆ”

ನಾನು ನುಜೂದ್, ವಯಸ್ಸು 10 ಹಾಗೂ ವಿಚ್ಛೇದಿತೆ!

Nujood Ali (Pic : Digital Journal)
ಕಳೆದ ಒಂದು ವಾರದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರಾ, ಇಲ್ಲವಾ ಎಂಬ ಪ್ರಶ್ನೆ ದೇಶದಾದ್ಯಂತ ಚರ್ಚೆಯಾಗುತ್ತಿದ್ದರೆ, ನಾನು ನನ್ನ ಐಪ್ಯಾಡ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡ ಒಂದು ಅದ್ಭುತ ಪುಸ್ತಕದೊಳಗೆ ತೂರಿಕೊಂಡಿದ್ದೆ. I am Nujood, Age 10 and Divorced! ಹಾಗಂತ ಪುಸ್ತಕದ ಹೆಸರು. ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸಿತ್ತು. ಆದರೆ ಮನಸ್ಸಿನಲ್ಲಿ ನುಜೂದ್ ಎಂಬ ಬಾಲೆ ದೊಡ್ಡ ನಾಯಕಿಯಂತೆ ಕಂಗೊಳಿಸುತ್ತಿದ್ದಳು. ಅವಳ ಹೋರಾಟ ಸ್ಥಾಯಿಯಾಗಿ ನಿಂತಿತ್ತು. ಅವಳ ಹೋರಾಟ ಲಕ್ಷಾಂತರ ಅಪ್ರಾಪ್ತ, ಮುಗ್ಧ ಹೆಣ್ಣುಮಕ್ಕಳಿಗೆ ಭರವಸೆಯ ಜೀವಸೆಲೆಯಾಗಿತ್ತು. ಹತ್ತು ವರ್ಷದ ಬಾಲಕಿ, ಇನ್ನೂ ಜಗತ್ತನ್ನೇ ನೋಡದ ಅಮಾಯಕಿ ಅಂದು ತನ್ನ ದಿಟ್ಟತನ, ಕೆಚ್ಚು, ಕಿಚ್ಚಿನಿಂದ ಇಡೀ ವಿಶ್ವಕ್ಕೆ ಒಂದು ಅಮರ, ಅಮೋಘ ಸಂದೇಶ ಸಾರಿದ್ದಳು.ನುಜೂದ್‌ಳ ಕರುಳು ಹಿಂಡುವ, ಕರುಣಾಜನಕ ಕತೆ ಹೀಗೆ ಸಾಗುತ್ತದೆ.ಕೋರ್ಟ್ ದೃಶ್ಯ: `ನಾನು ನ್ಯಾಯಾಧೀಶರನ್ನು ಭೇಟಿ ಮಾಡಬೇಕು. ದಯವಿಟ್ಟು ನನಗೆ ಅವಕಾಶ ಮಾಡಿಕೊಡಿ. ಕೈ ಮುಗೀತಿನಿ. ಯಾರೂ ಇಲ್ಲ ಎನ್ನಬೇಡಿ’ ಎಂದು ಹತ್ತು ವರ್ಷದ ಬಾಲಕಿ ನುಜೂದ್ ಕಿರುಚುತ್ತಾ ಓಡಿ ಬಂದಾಗ ಇಡೀ ಕೋರ್ಟ್‌ಹಾಲ್ ದಂಗುಬಡಿದಿತ್ತು. ಆ ಪುಟ್ಟ ಮುದ್ದು ಹುಡುಗಿಯ ಕೂದಲು ಕೆದರಿದ್ದವು. ಕಣ್ಣಿನ ಗುಳಿಂಪು ನಿದ್ದೆಯಿಲ್ಲದೇ ಕಪ್ಪಾಗಿತ್ತು. ಯಾವುದೋ ಭಾರೀ ತೊಂದರೆಯಲ್ಲಿ ಆಕೆ ಸಿಲುಕಿಕೊಂಡಿದ್ದಾಳೆಂದು ಯಾರು ಬೇಕಾದರೂ ಹೇಳಬಹುದಿತ್ತು. ಆಕೆಯ ಕೂಗಿಗೆ ಎಲ್ಲರೂ ಅವಳತ್ತಲೇ ದಿಟ್ಟಿಸಿದರು. `ಯಾವ ನ್ಯಾಯಾಧೀಶರು ಬೇಕು? ಏನಾಗಬೇಕು? ನಿನ್ನ ಸಂಕಷ್ಟಗಳೇನು? ಯಾಕೆ ಕಿರುಚುತ್ತಿದ್ದೀಯಾ?’ ಎಂದು ಅಲ್ಲಿದ್ದ ಕೆಲವು ವಕೀಲರು ಆಕೆಯನ್ನು ಕೇಳಿದರು. ಅದಕ್ಕೆ ಆಕೆ `ನಾನು ನ್ಯಾಯಾಧೀಶರನ್ನು ಭೇಟಿ ಮಾಡಬೇಕು. ದಯವಿಟ್ಟು ಸಹಾಯ ಮಾಡಿ’ ಎಂದು ಹೇಳುತ್ತಾ ಅಳಲಾರಂಭಿಸಿದಳು. ಅಲ್ಲಿದ್ದವರೆಲ್ಲ ಕಕ್ಕಾಬಿಕ್ಕಿ. ಹತ್ತು ವರ್ಷದ ಬಾಲಕಿಗೆ ನ್ಯಾಯಾಧೀಶರನ್ನು ಭೇಟಿ ಮಾಡುವಂಥ ಜರೂರತ್ತೇನಿದೆ? ಅವಳ ಸಂಕಟವೇನೋ? ಏನೇ ಇರಲಿ, ನ್ಯಾಯಾಧೀಶರ ಬಳಿ ಕರೆದುಕೊಂಡು ಹೋದರು.

ಎಲ್ಲರ ಗಮನವೂ ಆ ಪುಟ್ಟ ಹುಡುಗಿಯ ಮೇಲೆ ಇತ್ತು. ನ್ಯಾಯಾಧೀಶರು ಪೀಠದಲ್ಲಿ ಆಸೀನರಾಗುತ್ತಿದ್ದಂತೆ ಇಡೀ ಹಾಲ್‌ನಲ್ಲಿ ಮೌನ. ನ್ಯಾಯಾಧೀಶರು `ಏನಮ್ಮಾ, ಏನು ಬೇಕು ನಿನಗೆ?’ ಎಂದು ಕೇಳಿದರು. ನುಜೂದ್ ಹೇಳಿದಳು- `ಡೈವೋರ್ಸ್!’ ನ್ಯಾಯಾಧೀಶರ ಬಾಯಿಂದ ಮಾತೇ ಹೊರಡಲಿಲ್ಲ. ಇಡೀ ಕೋರ್ಟ್ ಹಾಲ್ ಸ್ತಂಭೀಭೂತ. ಒಂದು ನಿಮಿಷ ಸಾವರಿಸಿಕೊಂಡ ನ್ಯಾಯಾಧೀಶರು, `ಏನು ಡೈವೋರ್ಸಾ?’ ಎಂದು ಕೇಳಿದ್ದಕ್ಕೆ ನುಜೂದ್ ಹೌದೆಂಬಂತೆ ತಲೆಯಾಡಿಸಿದಳು. ಅದಕ್ಕೆ ನ್ಯಾಯಾಧೀಶರು `ಹಾಗಂದ್ರೆ ನಿನಗೆ ಮದುವೆ ಆಗಿದೆ ಅಂದಂತಾಯಿತು’ ಎಂದರು ಅಚ್ಚರಿಯಿಂದ. ಆಗ ನುಜೂದ್ ಜೋರಾಗಿ ಅಳಲಾರಂಭಿಸಿದಳು. `ನನ್ನ ಮದುವೆಯಾಗಿ ಮೂರು ತಿಂಗಳಾಯಿತು. ನಾನು ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ. ಈ ಮದುವೆ ನನಗೆ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ’ ಎಂದು ಗೋಳಿಡಲಾರಂಭಿಸಿದಳು.

ಕಲ್ಲವಿಲಗೊಂಡ ನ್ಯಾಯಾಧೀಶರು ಆಕೆಯನ್ನು ಸಂತೈಸಲು ಮುಂದಾದರು. ಆದರೆ ಅವರಿಗೆ ಕರ್ತವ್ಯಪ್ರಜ್ಞೆ ಕಟ್ಟಿಹಾಕಿತು. `ನಿನ್ನ ವಕೀಲರ ಜತೆ ಬಾ. ನಿನ್ನ ಸಂಕಷ್ಟಗಳನ್ನು ಅವರು ವಿವರಿಸಲಿ. ಆಗ ನಿನ್ನ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ’ ಎಂದರು ನ್ಯಾಯಾಧೀಶರು.

ನುಜೂದ್ ಕುಟುಂಬದ ದೃಶ್ಯ: ಯಮನ್ ದೇಶದ ಸಾನಾ ಎಂಬ ನಗರದ ಕೊಳೆಗೇರಿಯಂಥ ಪ್ರದೇಶದಲ್ಲಿ ಅಲಿ ಮಹಮದ್ ಅಲ್ ಅಹ್ದೇಲ್ ಒಬ್ಬ ಬೇಜವಾಬ್ದಾರಿ ಮನುಷ್ಯನಿದ್ದ. ಅವನಿಗೆ ಒಂದು ನೌಕರಿಯಿತ್ತಾದರೂ ಸರಿಯಾಗಿ ಅದನ್ನು ಮಾಡದ್ದರಿಂದ ಕೆಲಸದಿಂದ ಕಿತ್ತು ಹಾಕಿದ್ದರು. ಮನೆಯಲ್ಲಿ ಸದಾ ಕುಡಿಯುವುದು, ತಿನ್ನುವುದೇ ಅವನ ಕೆಲಸ. ಆತ ಶೋಯಾ ಎಂಬುವವಳನ್ನು ಮದುವೆಯಾದಾಗ ಅವನಿಗೆ ಇಪ್ಪತ್ತೆಂಟು ವರ್ಷ. ಶೋಯಾಗೆ ಹದಿನಾರು ವರ್ಷ. ನಾಲ್ಕು ವರ್ಷಗಳ ಬಳಿಕ ಅಹ್ದೇಲ್ ಎರಡನೆಯ ಮದುವೆಯಾದ. ಮದುವೆಯಾದ ಹದಿನೆಂಟು ವರ್ಷಗಳಲ್ಲಿ ಶೋಯಾ ಹದಿನಾರು ಮಕ್ಕಳಿಗೆ ಜನ್ಮ ನೀಡಿದಳು! ಆ ಪೈಕಿ ಒಬ್ಬಳು ನುಜೂದ್. ಈ ಅವಧಿಯಲ್ಲಿ ಶೋಯಾಗೆ ಎರಡು ಸಲ ಗರ್ಭಪಾತವಾಯಿತು. ಒಂದು ಮಗು ಹುಟ್ಟುವಾಗಲೇ ಸತ್ತು ಹೋಯಿತು. ನುಜೂದ್ ಹುಟ್ಟಿದಾಗ ಮನೆಯಲ್ಲಿ ಅದೆಂಥ ಬಡತನವೆಂದರೆ ಅವಳ ತಾಯಿಗೆ ಎರಡು ಹೊತ್ತು ತಿನ್ನಲು ಗತಿಯಿರಲಿಲ್ಲ. ಶೀತದ ಹೊಡೆತಕ್ಕೆ ನುಜೂದ್ ನಡುಗುತ್ತಿದ್ದರೆ ತಂದೆ ಅಹ್ದೇಲ್ ಗಡಂಗಿನಲ್ಲಿ ಕುಳಿತು ಕುಡಿಯುತ್ತಿದ್ದ. ಕೊನೆಕೊನೆಗೆ ಆತನಿಗೆ ಮಾಡಲು ಬೇರೇನೂ ಕೆಲಸವಿಲ್ಲದೇ ಎಂಟು ಕುರಿ ಹಾಗೂ ನಾಲ್ಕು ದನ ಕರುಗಳನ್ನು ಮೇಯಿಸಿಕೊಂಡಿರುತ್ತಿದ್ದ. ಅವುಗಳ ಹಾಲು ಹಿಂಡಿ ಮಾರಿದ ಹಣದಿಂದ ಇಪ್ಪತ್ನಾಲ್ಕು ಮಂದಿಯ ಕುಟುಂಬ ಸಾಗಬೇಕಿತ್ತು ಅಂದ್ರೆ ಆ ಕುಟುಂಬದ ದಾರಿದ್ರ್ಯವೇನೆಂಬುದನ್ನು ಊಹಿಸಬಹುದು.

ಮಕ್ಕಳಿಗೆ ಏಳು ವರ್ಷ ತುಂಬಿದರೆ ಸಾಕು, ಅಹ್ದೇಲ್ ಅವರನ್ನೆಲ್ಲ ಕೆಲಸಕ್ಕೆ ಅಟ್ಟುತ್ತಿದ್ದ. ತನ್ನ ಮಕ್ಕಳನ್ನೇ ಜೀತಕ್ಕಿಟ್ಟುಕೊಂಡವರಂತೆ ಗೇಯಿಸುತ್ತಿದ್ದ. ಮಕ್ಕಳು ದುಡಿದು ಹಣ ಕೊಡದಿದ್ದರೆ ಬಡಿಯುತ್ತಿದ್ದ. ಶಾಲೆಗೆ ಹೋಗುವ ಮಾತಾಡಿದರೆ ಲತ್ತೆ ಗ್ಯಾರಂಟಿ. ಗಂಡನ ಕ್ರೌರ್ಯಕ್ಕೆ ಹೆಂಡತಿಯರಿಬ್ಬರು ಗುಮ್ಮನಗುಸುಕನಂತಿರುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳ ಅಪಹರಣವಾದಾಗ ಅವರನ್ನು ಹುಡುಕುವ ಗೋಜಿಗೂ ಹೋಗದ ನಿರ್ದಯಿ ತಂದೆ ಆತ.

ಮದುವೆಯ ದೃಶ್ಯ: ಅಹ್ದೇಲ್‌ಗೆ ಅವನ ಮಕ್ಕಳೇ ಭಾರವಾಗಿದ್ದರು. ಒಂದು ದಿನವೂ ಆತ ಅವರನ್ನು ಪ್ರೀತಿ ಮಾಡಿದ್ದಿಲ್ಲ, ಅಪ್ಪಿ ಮುದ್ದಾಡಿದ್ದಿಲ್ಲ. ಅಂಥ ಮನೆಯಲ್ಲಿ ಬೆಳೆಯುವ ಮಕ್ಕಳು ಹೇಗಿದ್ದಾರು? ಆದರೆ ನುಜೂದ್ ಮಾತ್ರ ಭಿನ್ನವಾಗಿದ್ದಳು. ಆಕೆ ತಂದೆಯ ಕಣ್ತಪ್ಪಿಸಿ, ಕೆಲಸಕ್ಕೆ ಹೋಗುವ ನೆಪದಲ್ಲಿ ಸ್ಕೂಲ್‌ಗೆ ಹೋಗುತ್ತಿದ್ದಳು. ತಂದೆಯ ಎರಡನೆ ಹೆಂಡತಿ ಆಕೆ ಸ್ಕೂಲಿಗೆ ಹೋಗಲು ಪರೋಕ್ಷ ನೆರವಾಗಿದ್ದಳು. ಒಂದು ದಿನ ಅದು ಹೇಗೋ ಅಹ್ದೇಲ್‌ಗೆ ಈ ಸಂಗತಿ ಗೊತ್ತಾಯಿತು. ಆ ದಿನ ಅವಳನ್ನು ಆತ ಜೀವಸಹಿತ ಬಿಟ್ಟಿದ್ದೇ ದೊಡ್ಡದು. ಅಂದೇ ಅವನಿಗೆ ಅನಿಸಿತು ಇವಳನ್ನು ಮದುವೆ ಮಾಡಬೇಕು ಎಂದು. ಅದೇ ಸಮಯಕ್ಕೆ ಒಬ್ಬ ಬಂದ. ಅವನ ಹೆಸರು ಫೈಯಜ್ ಅಲಿ ತಾಮೆರ್. ಆತ ಮೋಟರ್‌ಸೈಕಲ್ ಇಟ್ಟುಕೊಂಡಿದ್ದ. ಅದರ ಮೇಲೆ ಪಾರ್ಸೆಲ್, ಪೊಟ್ಟಣಗಳನ್ನು ಇಟ್ಟುಕೊಂಡು ಮನೆಮನೆಗೆ ಬಟವಾಡೆ ಮಾಡುವ ಕೆಲಸ. ಆತನಿಗೆ ನುಜೂದ್‌ಗಿಂತ ಮೂರು ಪಟ್ಟು ಜಾಸ್ತಿ ವರ್ಷ. ಮೂವತ್ತರ ಹರೆಯದ ಹಲ್ಲುಗೊಗ್ಗ. ಆತ ಹುಡುಗಿಯನ್ನು ನೋಡಿದವನೇ ಮದುವೆಗೆ ಒಪ್ಪಿದ. ಯಮನ್ ದೇಶದ ಕಾನೂನಿನ ಪ್ರಕಾರ, ಒಂಬತ್ತು ವರ್ಷವಾದ ಬಳಿಕ ಹೆಣ್ಣು ಮಕ್ಕಳನ್ನು ಮದುವೆಯಾಗಬಹುದು. ಆದರೆ ಅವರ ಜತೆ ಲೈಂಗಿಕ ಸಂಬಂಧ ಹೊಂದುವಂತಿಲ್ಲ, ಆಕೆ ಋತುಮತಿಯಾಗುವ ತನಕ. ಆದರೆ ಈ ಫೈಯಜ್ ಅಲಿ ತಾಮೆರ್ ನುಜೂದ್‌ಳನ್ನು ಮದುವೆಯಾದ ದಿನವೇ ತನ್ನ ಲೈಂಗಿಕ ವಾಂಛೆಯನ್ನು ಪ್ರದರ್ಶಿಸಿದ. ಮದುವೆ, ಗಂಡ, ಸಂಸಾರ, ಸೆಕ್ಸ್ ಅಂದ್ರೆ ಎನೇನೂ ಗೊತ್ತಿಲ್ಲದ ಆಕೆಯ ಪಾಡು ಹೇಗಿದ್ದಿರಬಹುದು?

ಗಂಡನ ಮನೆಯ ದೃಶ್ಯ: ನುಜೂದ್‌ಗೆ ಗಂಡನೆಂದರೆ ಒಂಥರಾ ತಿರಸ್ಕಾರ. ಆತ ಕರೆದರೆ ಸಾಕು ಷಾಕ್ ಹೊಡೆದ ಅನುಭವ. ತಾನೇಕೆ ಅವನ ಜತೆಗಿರಬೇಕು ಎಂದು ಕೇಳಿದ ಪ್ರಶ್ನೆಗೇ ಉತ್ತರ ಸಿಕ್ಕಿರಲಿಲ್ಲ. ಈ ಮಧ್ಯೆ ತಾಮೆರ್ ರಾತ್ರಿಯಾಗುತ್ತಿದ್ದಂತೆ ನುಜೂದ್ ಮೇಲೆ ಎರಗುತ್ತಿದ್ದ. ಗಂಡನ ಕಾಮತೃಷೆ ಅರ್ಥವಾಗದೇ ಜೋರಾಗಿ ಕಿರುಚಿಕೊಂಡರೆ ಬಾಯಿಗೆ ಬಟ್ಟೆ ತುರುಕುತ್ತಿದ್ದ. ತಾನು ಹೇಳಿದಂತೆ ಕೇಳದಿದ್ದರೆ ಹೊಡೆಯುತ್ತಿದ್ದ. ಸಿಗರೇಟಿನ ತುದಿಯಿಂದ ಸುಡುತ್ತಿದ್ದ. ನುಜೂದ್ ರೌದ್ರಾವತಾರದಿಂದ ಕಿರುಚಿದರೆ ಅದನ್ನು ನೋಡಿ ಸಂಭ್ರಮಿಸುತ್ತಿದ್ದ. ಅತ್ತೆಯ ಕಾಟವೂ ಸಹಿಸಲು ಅಸಾಧ್ಯವಾಗಿತ್ತು. ಮಾತೆತ್ತಿದರೆ `ನಿನ್ನನ್ನು ನನ್ನ ಮಗ ಸುಮ್ಮನೆ ಮದುವೆಯಾಗಿಲ್ಲ, ನಿನ್ನ ಅಪ್ಪನಿಗೆ ಹಣಕೊಟ್ಟು ಮದುವೆಯಾಗಿದ್ದಾನೆ. ಆತ ಹೇಳಿದಂತೆ ಕೇಳದಿದ್ದರೆ ಬಡಿಯುತ್ತೇನೆ ‘. ಎಂದು ಗದರುತ್ತಿದ್ದಳು. ಮದವೆಯಾದ ಎರಡು ತಿಂಗಳೊಳಗೆ ನುಜೂದ್ ಮಾನಸಿಕವಾಗಿ ಜರ್ಝರಿತಳಾಗಿ ಹೋದಳು. ಈ ಅವಧಿಯಲ್ಲಿ ಹತ್ತಾರು ಬಾರಿ ಅತ್ಯಾಚಾರಕ್ಕೊಳಗಾದಳು. ಗಂಡನೆಂದರೆ ರಾಕ್ಷಸನ ಪ್ರತಿರೂಪ ಅವಳ ಕಣ್ಣೆದುರು ಧುತ್ತೆಂದು ಪ್ರತ್ಯಕ್ಷವಾಗಿ ಕುಂತಲ್ಲಿ ನಿಂತಲ್ಲಿ ಕಿಟಾರನೆ ಕಿರುಚುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ಭಯ, ನಡುಕ. ಗಂಡ ಹತ್ತಿರ ಬಂದರೆ ಹಾವು ಸಮೀಪಿಸಿದ ಅನುಭವ.

ತವರಿನ ದೃಶ್ಯ: ತವರಿಗೆ ಬಂದು ತಾಯಿಯ ಮುಂದೆ ತನ್ನ ಗೋಳನ್ನೆಲ್ಲ ತೋಡಿಕೊಂಡರೆ, `ಅಪ್ಪನಿಗೆ ಗೊತ್ತಾದರೆ ನಿನಗೇ ಬಡಿಯುತ್ತಾನೆ. ಸಂಸಾರವೆಂದ ಮೇಲೆ ಗಂಡ ಹೇಳಿದಂತೆ ಕೇಳಬೇಕಾದುದು ಹೆಂಡತಿ ಕರ್ತವ್ಯ. ಮದುವೆ ಆರಂಭದಲ್ಲಿ ಇವೆಲ್ಲ ಸಾಮಾನ್ಯ. ಕ್ರಮೇಣ ಎಲ್ಲ ಸರಿಹೋಗುತ್ತದೆ. ಅಲ್ಲಿ ತನಕ ಗಂಡನ ಜತೆಗೆ ಹೊಂದಿಕೊಂಡು ಹೋಗಬೇಕು’ ಎಂದು ಮಗಳಿಗೇ ಬುದ್ಧಿಮಾತು ಹೇಳಿ ಕಳಿಸಿದಳು. ಗಂಡನ ಮನೆಗೆ ಹೋದರೆ ಅದೇ ಪೈಶಾಚಿಕ ವರ್ತನೆ. ತವರಿಗೆ ಬಂದರೆ ತಂದೆ-ತಾಯಿ ಬೆದರಿಕೆ.

ಒಂದು ಸಲ ಗಂಡನ ಮನೆಯಿಂದ ತವರಿಗೆ ಬಂದಾಗ, ಎರಡು ದಿನ ಸಹ ಆಗಿರಲಿಲ್ಲ, ತಂದೆ ಜಬರ್‌ದಸ್ತಿ ಮಾಡಿ ಮಗಳನ್ನು ಗಂಡನ ಮನೆ ತನಕ ಹೋಗಿ ಬಿಟ್ಟು ಬಂದಿದ್ದ. ಮದುವೆ ಮಾಡಿಕೊಟ್ಟ ಬಳಿಕ ತವರಿಗೇಕೆ ಬರುತ್ತೀಯಾ? ಎಂದು ಗದರಿದ್ದ. ಇನ್ನೊಂದು ಸಲ ಬಂದರೆ ಹುಷಾರ್ ಎಂದು ಗದರಿದ್ದ. ಕೊನೆಗೆ ಬೇರೆ ದಾರಿ ಕಾಣದೇ ನುಜೂದ್ ತನ್ನೆಲ್ಲ ತಾಪತ್ರಯಗಳ ಕಟ್ಟನ್ನು ತನ್ನ ಮಲತಾಯಿ (ಅಪ್ಪನ ಎರಡನೇ ಹೆಂಡತಿ) ಮುಂದೆ ಬಿಚ್ಚಿಟ್ಟಳು. ನುಜೂದ್ ಮೈಮೇಲೆ ಕಂಡ ಸುಟ್ಟ ಗಾಯ, ಬಾಸುಂಡೆ, ಕನ್ನೆತ್ತರಗಟ್ಟಿದ ಹುಬ್ಬುಗಳು, ಹರಿದಬಟ್ಟೆಯನ್ನು ನೋಡಿದ ಮಲ ತಾಯಿಗೆ ಆಕೆಯ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂಬುದು ಗೊತ್ತಾಯಿತು. ಗಂಡನ ಮನೆಯಿಂದ ಓಡಿ ಬರಲು ಸೂಚಿಸಿದಳು. ಹಾಗೆಂದು ತವರಿನಲ್ಲಿ ಇರುವಂತಿರಲಿಲ್ಲ. ಹತ್ತು ವರ್ಷದ ಬಾಲೆ ಎಲ್ಲಿಗೆ ಹೋದಾಳು?

ಆದರೆ ನುಜೂದ್ ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಳು. ಏನೇ ಆದರೂ ಗಂಡನ ಮನೆಗೆ ಪುನಃ ಹೋಗದಿರುವಂತೆ ತೀರ್‍ಮಾನಿಸಿದಳು. ಆದರೆ ಗಂಡ ಬಿಡಬೇಕಲ್ಲ. ನುಜೂದ್ ಹುಡುಕಿಕೊಂಡು ಬಂದ. ಬಿಲ್‌ಕುಲ್ ಬರುವುದಿಲ್ಲ ಎಂದು ಬಿಟ್ಟಳು. ಚೋಟುದ್ದ ಹುಡುಗಿ ತನಗೆ ತಿರುಗೇಟು ಕೊಡುವಷ್ಟರ ಮಟ್ಟಿಗೆ ಬೆಳೆದಳಾ ಎಂದ ಗಂಡ, ಹೆಂಡತಿಗೆ ಹೊಡೆಯಲು ಕೈಯೆತ್ತಿದ. ಅದೇ ಬಾಲೆ ಗಂಡನ ವಿರುದ್ಧ ತಿರುಗಿ ಬಿದ್ದಳು. ಹೆಂಡತಿಯ ಆಟಾಟೋಪಕ್ಕೆ ಆತ ಒಂದು ಕ್ಷಣ ಪೆಕರನಂತಾಗಿ ಹೋದ. ಬಲಾತ್ಕಾರವಾಗಿ ತನ್ನ ಮನೆಗೆ ಕೆರೆದೊಯ್ಯಲು ಪ್ರಯತ್ನಿಸಿದ. ಆ ಹೊತ್ತಿಗೆ ನುಜೂದ್ ಕಲ್ಲಿನಂತಾಗಿ ಹೋಗಿದ್ದಳು. ಗಂಡ ಅವಳಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿ ಎಳೆದುಕೊಂಡು ಹೋಗಲು ಹುನ್ನಾರ ನಡೆಸಿದಾಗ…… ಆಕೆ ಡೈವೋರ್ಸ್ ಭಿಕ್ಷೆ ಬೇಡಿ ನ್ಯಾಯಾಧೀಶರ ಮುಂದೆ ನಿಂತಿದ್ದಳು!

ಕೋರ್ಟ್ ದೃಶ್ಯ: ನ್ಯಾಯಾಧೀಶರ ಕೋರಿಕೆಯಂತೆ ನುಜೂದ್ ವಕೀಲರ ಹುಡುಕಾಟದಲ್ಲಿದ್ದಾಗ ಆಕೆಗೆ ಆಕಸ್ಮಿಕವಾಗಿ ಸಿಕ್ಕವಳು ಶಾದಾನಸೀರ್. ಅಪ್ರಾಪ್ತವಯಸ್ಸಿನ ಹುಡುಗಿಯರು ವೃದ್ಧ ಶ್ರೀಮಂತರ ಕಾಮದಾಹಕ್ಕೆ ಬಲಿಯಾಗುವುದರ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ದಿಟ್ಟ ಕಾನೂನು ಹೋರಾಟಗಾರ್ತಿ. ಡೈವೋರ್ಸ್ ಬಯಸಿ ಜಡ್ಜ್ ಮುಂದೆ ಅಂಗಲಾಚಿದ ನುಜೂದ್‌ಳ ದೈನೇಸಿ ಸ್ಥಿತಿ ಶಾದಾ ಗಮನಕ್ಕೆ ಬಂತು. ಅವಳು ತಕ್ಷಣ ನುಜೂದ್‌ಳನ್ನು ಸಂಪರ್ಕಿಸಿ ತಾನು ನಿನ್ನ ಪರವಾಗಿ ಕೋರ್ಟಿನಲ್ಲಿ ವಾದಿಸುವುದಾಗಿ ಹೇಳಿದಳು. ಈ ಹೊತ್ತಿಗೆ ನುಜೂದ್‌ಳಲ್ಲಿ ಅದೆಂಥ ದಿಟ್ಟತನ ಮನೆಮಾಡಿತ್ತೆಂದರೆ ತಾನು ಕೈಹಿಡಿದ ಗಂಡನ ವಿರುದ್ಧವೇ ಕಾನೂನು ಹೋರಾಟಕ್ಕೆ ನಿಂತಳು.

ಹೇಳಿಕೇಳಿ ಹತ್ತು ವರ್ಷದ, ಜಗತ್ತಿನ ಕ್ರೂರತನ, ಕರಾಮತ್ತು ಗೊತ್ತಿಲ್ಲದ ಬಾಲಕಿ! ಯೆಮೆನಿ ಕಾನೂನು ಪ್ರಕಾರ ಮದುವೆ ಆಗಿದ್ದರೂ, ಮೈನೆರೆಯುವ ಮುನ್ನವೇ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಶಾದಾ ವಾದಿಸಿದಳು. `ಋತುಮತಿಯಾದ ಬಳಿಕ ಗಂಡನ ಮನೆಗೆ ಹೋಗಬಹುದು, ಅಲ್ಲಿಯ ತನಕ ತವರಿನಲ್ಲಿರಬಹುದು’ ಎಂದು ನ್ಯಾಯಾಧೀಶರು ಸಮಾಧಾನಪಡಿಸಿದರೆ, `ಸಾಧ್ಯವೇ ಇಲ್ಲ. ನನಗೆ ಡೈವೋರ್ಸ್ ಬೇಕೇ ಬೇಕು’ ಎಂದು ಹಟ ಹಿಡಿದಳು. 2008ರ ಏಪ್ರಿಲ್ 15 ರಂದು, ಅಂದರೆ ಮದುವೆಯಾದ ಸುಮಾರು ಮೂರು ತಿಂಗಳ ಬಳಿಕ ನ್ಯಾಯಾಲಯ ಅವಳಿಗೆ ಡೈವೋರ್ಸ್ ನೀಡಿತು.

ಆನಂತರದ ದೃಶ್ಯಗಳು: ರಾತ್ರಿ ಬೇಳಗಾಗುವುದರೊಳಗೆ ನುಜೂದ್ ವಿಶ್ವದ ಗಮನಸೆಳೆದಳು. ನಿನ್ನ ಮುಂದಿನ ಹೆಜ್ಜೆಯೇನು ಎಂದು ಪತ್ರಕರ್ತರು ಕೇಳಿದಾಗ ನಾನು ಸ್ವಂತ ದುಡಿದು, ವಿದ್ಯಾಭ್ಯಾಸ ಮುಗಿಸಿ ಲಾಯರ್ ಆಗುತ್ತೇನೆ. ನನ್ನ ತಂದೆ-ತಾಯಿಯನ್ನು ಸಾಕುತ್ತೇನೆ’ ಎಂದಳು. ಆ ಕಂದಮ್ಮನ ಮಾತು, ಕೇಳಿ ಇಡೀ ವಿಶ್ವವೇ ನಿಬ್ಬೆರಗಾಯಿತು. ಯೆಮನ್‌ನಲ್ಲಿ ಆಚರಣೆಯಲ್ಲಿರುವ ಅಮಾನವೀಯ ಕಾನೂನಿನ ವಿರುದ್ಧ ವಿಶ್ವವ್ಯಾಪಿ ವ್ಯಾಪಕ ಟೀಕೆ ವ್ಯಕ್ತವಾಯಿತು. 2009ರ ಫೆಬ್ರವರಿಯಲ್ಲಿ ಅಲ್ಲಿನ ಪಾರ್ಲಿಮೆಂಟ್ ಸಭೆ ಸೇರಿ ವಿವಾಹಕಾಯ್ದೆಗೆ ತಿದ್ದುಪಡಿ ತಂದಿತು. ಹುಡುಗ-ಹುಡುಗಿಗೆ ಹದಿನೇಳು ತುಂಬಿದ ನಂತರವೇ ಮದುವೆಯಾಗತಕ್ಕದ್ದು ಎಂದು ಹೇಳಿತು. ತಾನು ಸಾಕಷ್ಟು ಆರ್ಥಿಕವಾಗಿ ಸಬಲನಾಗಿದ್ದೇನೆ ಎಂಬುದನ್ನು ಖಾತ್ರಿಪಡಿಸಿದ ನಂತರ ಎರಡನೇ ಮದುವೆಯಾಗಬಹುದು ಎಂಬ ಕಾನೂನು ಸಹ ಜಾರಿಗೆ ಬಂತು. ಒಬ್ಬ ನುಜೂದ್, ಅಫಘಾನಿಸ್ತಾನ, ಇರಾನ್, ಇರಾಕ್, ಈಜಿಪ್ತ್, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ನುಜೂದ್‌ಳ ಹಾಗೆ ಬದುಕುತ್ತಿರುವ ಅಸಂಖ್ಯ ಹೆಣ್ಣು ಮಕ್ಕಳಿಗೆ ಆಶಾಕಿರಣವಾಗಿ ಗೋಚರಿಸಿದಳು. ನುಜೂದ್ ಪ್ರದರ್ಶಿಸಿದ ಅಸಾಧಾರಣ ಧೈರ್ಯ, ಸಾಹಸ ಹಾಗೂ ಹೋರಾಟ ಮನೋಭಾವ ಕಂಡು ಅದೇ ವರ್ಷದ (2008) ನವೆಂಬರ್‌ನಲ್ಲಿ ಅಮೆರಿಕದ `ಗ್ಲಾಮರ್ ‘ ಪತ್ರಿಕೆ `ವರ್ಷದ ಮಹಿಳೆ’ ಪ್ರಶಸ್ತಿ ನೀಡಿತು. ಸ್ವತಃ ಹಿಲರಿ ಕ್ಲಿಂಟನ್, ಕಾಂಡೊಲಿಸಾರೈಸ್ ಅವಳ ದಿಟ್ಟತನವನ್ನು ಕೊಂಡಾಡಿದರು. ನುಜೂದ್‌ಳ ವಿದ್ಯಾಭ್ಯಾಸಕ್ಕಾಗಿ ಜಗತ್ತಿನೆಲ್ಲೆಡೆಯಿಂದ ಹಣ ಹರಿದುಬಂತು.

ಸದ್ಯದ ದೃಶ್ಯ: ಗಂಡನಿಂದ ಎಲ್ಲ ಸಂಪರ್ಕ ಕಡಿದುಕೊಂಡ ನುಜೂದ್, ಆತ್ಮಕತೆ ಬರೆದಿದ್ದರಿಂದ ಬಂದ ಹಣದಿಂದ ಒಂದು ಅಪಾರ್ಟಮೆಂಟ್ ನಲ್ಲಿ ತನ್ನ ತಂದೆ-ತಾಯಿಯೊಂದಿಗೆ ನೆಮ್ಮದಿ ಬದುಕು ಸಾಗಿಸುತ್ತಿದ್ದಾಳೆ. ಅಣ್ಣ, ತಮ್ಮ, ಅಕ್ಕಂದಿರನ್ನೆಲ್ಲ ಓದಿಸುತ್ತಿದ್ದಾಳೆ. ತಾನೂ ಹೆಗಲಿಗೆ ಬ್ಯಾಗನ್ನೇರಿಸಿಕೊಂಡು ನಿತ್ಯ ಶಾಲೆಗೆ ಹೋಗುತ್ತಿದ್ದಾಳೆ. ದಿಟ್ಟೆ! ಕ್ಷಮಿಸಿ, ರಾಜ್ಯ ರಾಜಕೀಯಕ್ಕಿಂತ ಈಕೆಯ ಕತೆಯೇ ಹೆಚ್ಚು ಸ್ಫೂರ್ತಿ ನೀಡಬಹುದೆಂದು ಇವನ್ನೆಲ್ಲ ಬರೆಯಬೇಕಾಯಿತು.

ಜೆಆರ್‌ಡಿ ಪರಿಚಯ ಬೇಕೆಂದರೆ ಈ ಪತ್ರಗಳನ್ನು ಓದಿ

J R D Tata

ಎಲ್ಲರೂ ಓದುವ ಸಾಹಿತ್ಯ ಅಂದ್ರೆ ಪತ್ರ ಸಾಹಿತ್ಯ! ಯಾರೂ ಓದದ, ಪೂರ್ತಿ ಓದದ ಪುಸ್ತಕಗಳು ಸಿಗಬಹುದು, ಆದರೆ ಪತ್ರಗಳು ಮಾತ್ರ ಸಿಗಲಿಕ್ಕಿಲ್ಲ. ಪತ್ರವನ್ನು ಓದುವುದೆಂದರೆ ಎಲ್ಲರಿಗೂ ಅಷ್ಟೊಂದು ಇಷ್ಟ. ಈ ವಿಷಯದಲ್ಲಿ ಪ್ರತಿಯೊಬ್ಬರೂ Man of letters. ಅದರಲ್ಲೂ ಬೇರೆಯವರಿಗೆ ಬಂದ ಪತ್ರಗಳನ್ನು ಓದುವುದೆಂದರೆ ಬಲು ಇಷ್ಟ. ಅದು ಲವ್ ಲೆಟರ್‌ಗಳಾಗಿದ್ದರೆ ಇನ್ನೂ ಇಷ್ಟ. ಅಲ್ಲದೇ ಪತ್ರಗಳನ್ನು ಯಾರೂ ಅರ್ಧ ಓದಿ ನಿಲ್ಲಿಸುವುದಿಲ್ಲ. ಕೆಲವರು ಒಂದೆರಡು ಬಾರಿ, ಪುನಃ ಪುನಃ ಓದುವುದುಂಟು. ಪತ್ರಗಳ ಮಹಿಮೆ ಅಂಥದು. ನನ್ನ ಬಳಿ ಪತ್ರಗಳ ಕಟ್ಟು, ಇವನ್ನೆಲ್ಲ ಸಂಗ್ರಹಿಸಿ ಸಂಕಲನವಾಗಿ ಪ್ರಕಟಿಸಿದ ಪುಸ್ತಕಗಳಿವೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ, ಬೇರೆ ಊರುಗಳಿಗೆ ಹೋದಾಗ ತಮ್ಮ ಪತ್ನಿಯರಿಗೆ ಬರೆದ ಪತ್ರಗಳನ್ನೆಲ್ಲ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದನ್ನು ಸ್ನೇಹಿತರೊಬ್ಬರು ಕಳಿಸಿಕೊಟ್ಟಿದ್ದರು.

ಗಂಡ-ಹೆಂಡತಿಗೆ, ಹೆಂಡತಿ-ಗಂಡನಿಗೆ ಬರೆದ ಪತ್ರಗಳೆಂದ ಮೇಲೆ ಅವು ಸ್ವಾರಸ್ಯವಾಗಿರಲೇಬೇಕು. ಈ ಪುಸ್ತಕವನ್ನು ಸಂಪಾದಿಸಿದ ಪುಣ್ಯಾತ್ಮ ಪತ್ರಗಳ ಅತ್ಯಂತ ಕುತೂಹಲದ ಭಾಗಗಳನ್ನೇ ಎಡಿಟ್ ಮಾಡಿ, ಕತ್ತರಿಸಿ `ಮಾನವಕುಲಕ್ಕೇ ದ್ರೋಹ’ ಎಂದು ಬಣ್ಣಿಸುವಂಥ ಅಪಚಾರ ಮಾಡಿದ್ದಾನೆಂಬುದು ನನ್ನ ಆರೋಪ. ಎಡಿಟ್ ಮಾಡದೇ ಹೋಗಿದ್ದರೆ ಇನ್ನೆಂಥ `ದ್ರೋಹ’ವಾಗುತ್ತಿತ್ತೋ ಗೊತ್ತಿಲ್ಲ. ಅಂತೂ ಆ ಪತ್ರಗಳ ಕಟ್ಟು ಸ್ವಾರಸ್ಯವಾಗಿದೆ. ಇತ್ತೀಚೆಗೆ ಟಾಟಾ ಕಂಪನಿಯ ಮಹಾನ್ ವ್ಯಕ್ತಿಗಳಲ್ಲೊಬ್ಬರಾದ ಜೆ.ಆರ್.ಡಿ. ಟಾಟಾ ಅವರ ಪತ್ರಗಳ ಸಂಕಲನವನ್ನು ಎರಡನೇ ಬಾರಿ (ಮರುಓದು) ಓದುತ್ತಿದ್ದೆ. ನಾಲ್ಕೈದು ವರ್ಷಗಳ ಹಿಂದೆ ಅವರ ಕೆಲವು ಪತ್ರಗಳನ್ನು ಪ್ರಸ್ತಾಪಿಸಿದ್ದೆ. ಈ ಸಲ ಮತ್ತಷ್ಟು ಪತ್ರಗಳು ಸಿಕ್ಕವು- ನಿಮಗೆ ಗೊತ್ತಿರಬಹುದು ಜೆಆರ್‌ಡಿ ಟಾಟಾ ಪ್ರತಿದಿನ ಕನಿಷ್ಠ 50 ಪತ್ರಗಳನ್ನಾದರೂ ಬರೆಯುತ್ತಿದ್ದರು. ಅವರಿಗೆ ಯಾರೇ ಬರೆದರೂ ಉತ್ತರಿಸದೇ ಹೋಗುತ್ತಿರಲಿಲ್ಲ. ಪತ್ರಗಳಿಂದ ಅದನ್ನು ಬರೆದ ವ್ಯಕ್ತಿ ಯಾರು, ಹೇಗೆ ಎಂಬುದನ್ನು ಅರಿಯಬಹುದು. ಜೆಆರ್‌ಡಿ ಹೇಗಿದ್ದರು? ಅವರ ಪತ್ರಗಳನ್ನೇ ಓದಿ, ಬೇರೆಯವರ ಪತ್ರಗಳನ್ನು ಓದುವುದು ಒಳ್ಳೆಯ ಅಭ್ಯಾಸ ಅಲ್ಲ ಎಂಬ ಸಂಗತಿ ಗೊತ್ತಿದ್ದರೂ!

***

ಜನ ಜೆಆರ್‌ಡಿ ಅವರಂಥ ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ ಹಾಗೂ ಜೆಆರ್‌ಡಿ ಅಂಥವರು ಅಂಥ ಚಿಕ್ಕ ಅಪೇಕ್ಷೆ ಹಾಗೂ ಚಿಕ್ಕ ಸಂಗತಿಗಳಿಗೂ ಪ್ರತಿಕ್ರಿಯಿಸಿ ಹೇಗೆ ದೊಡ್ಡವರೆನಿಸಿಕೊಳ್ಳುತ್ತಾರೆ ಎಂಬುದಕ್ಕೆ ತಮ್ಮ ಆ ಕ್ಷಣದ ಸಿಟ್ಟಿಗೆ ತುತ್ತಾದ ಗಗನಸಖಿಯೊಬ್ಬರಿಗೆ ಅವರು ಕ್ಷಮೆ ಕೇಳಿದ ಘಟನೆಯೊಂದು ತಿಳಿಸಿ ಕೊಡುತ್ತದೆ. ಪತ್ರ ವ್ಯವಹಾರದಲ್ಲೇ ಬಿಚ್ಚಿಕೊಳ್ಳುವ ಆ ಘಟನೆಯನ್ನು ಓಲೆಯ ಒಕ್ಕಣೆಯಲ್ಲೇ ಸವಿದರೆ ಚೆಂದ.

ಗೌರವಾನ್ವಿತ ಟಾಟಾ ಅವರೇ,

ಈ ಪತ್ರದ ಮೂಲಕ ನಿಮಗೆ ಒಂದು ವಿವರಣೆಯನ್ನು ಕೊಡಲಿಕ್ಕಿದೆ ಹಾಗೂ ಕ್ಷಮೆಯನ್ನೂ ಕೇಳಬೇಕಿದೆ. ಮಾರ್ಚ್ 18ರ ಸೋಮವಾರ ಸಂಜೆ 8 ಗಂಟೆಯ ಸಮಯದಲ್ಲಿ ನಾನು ಸ್ಟರ್ಲಿಂಗ್ ರಸ್ತೆಯಿಂದ ಹೊರಬಿದ್ದು ಪೆದ್ದಾರ್ ರೋಡ್ ಕಡೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದೆ. ಉಲ್ಟಾ ತಿರುವು ಪಡೆದುಕೊಳ್ಳುವುದಕ್ಕೆ ಯಾವಾಗಲೂ ಎಡಬದಿ ಸಾಲಿನ ತುದಿಯಲ್ಲೇ ಇರುತ್ತಿದ್ದ ನಾನು ಆ ದಿನ ಹಾಗೆ ಮಾಡಲಿಕ್ಕೆ ಆಗದೇ ಹೋಯಿತು. ಆ ಸಂದರ್ಭದಲ್ಲಿ ಹಸಿರು ಸಿಗ್ನಲ್ ಬಿದ್ದೊಡನೆ ನನ್ನಿಂದಾಗಿ ಮುಂದೆ ಹೋಗಲಿಕ್ಕಾಗುತ್ತಿಲ್ಲ ಎಂದು ನಿಮ್ಮ ಕಾರಿನ ಚಾಲಕ ಅಸಹನೆ ವ್ಯಕ್ತಪಡಿಸಲು ಶುರು ಮಾಡಿದ. ಸುಮಾರು ಐದು ಸೆಕೆಂಡ್‌ಗಳ ನಿಮ್ಮ ಸಮಯ ಇದರಿಂದ ವ್ಯಯವಾಯಿತು. ಮನೆಗೆ ಹೋಗಲು ತಡವಾಗುತ್ತಿದೆ ಎಂಬ ಅಸಹನೆಯಿಂದಲೋ ಏನೋ ಆ ಅವಧಿಯಲ್ಲಿ ನೀವು ನಿಮ್ಮ ಕಾರಿನಿಂದ ಹೊರಗೆ ಮುಖ ಹಾಕಿ ಅಸಭ್ಯವಾಗಿ ಕೂಗಿದಿರಿ.

ತಪ್ಪು ಸಾಲಿನಲ್ಲಿ ನಿಂತು ನಿಮ್ಮ ಅಮೂಲ್ಯ ಐದು ಸೆಕೆಂಡ್‌ಗಳನ್ನು ವ್ಯಯಿಸಿದ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಟಾಟಾ ಅವರೇ ಆ ಸಮಯದಲ್ಲಿ ನಿಮ್ಮಿಂದ ವ್ಯಕ್ತವಾದ ವರ್ತನೆ ಇದೆಯಲ್ಲ, ಅದು ನನ್ನನ್ನು ಸಿಟ್ಟಿಗೇಳಿಸಿತು ಅನ್ನುವುದಕ್ಕಿಂತ ಅಚ್ಚರಿಯ ಮಡುವಿಗೆ ತಳ್ಳಿತು. ಚಾಲಕನನ್ನು ಹೊಂದಿರುವ ಐಷಾರಾಮಿ ಕಾರಿನಲ್ಲಿ ಕುಳಿತ ನೀವೇ ಅಷ್ಟೊಂದು ರೊಚ್ಚಿಗೇಳುತ್ತೀರಿ ಎಂದಾದರೆ, ಮುಂಬೈನಂಥ ಕೆಟ್ಟ ಸಂಚಾರ ವ್ಯವಸ್ಥೆಯ ನಗರದಲ್ಲಿ ನೌಕರಿ ಮಾಡುವ ಗೃಹಿಣಿಯ ಪರಿಸ್ಥಿತಿ ಏನಿರಬಹುದು ಹಾಗೂ ಅಸಹನೆಯಲ್ಲಿ ಆಕೆಯಿಂದ ಆಗುವ ತಪ್ಪುಗಳು ಸಹಜವೇ ಆಗಿರುತ್ತವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ.

ನಿಮ್ಮ ಕಾರಿಗೆ ಅಡ್ಡಿಯಾಗಿದ್ದಕ್ಕೆ ನಾನು ಖಂಡಿತ ಕ್ಷಮೆಯಾಚಿಸುತ್ತೇನಾದರೂ ನನ್ನ ಕಡೆಯಿಂದ ಈ ವಿವರಣೆಯನ್ನೂ ಮುಂದಿಡುತ್ತಿದ್ದೇನೆ. ನಿಮ್ಮಿಂದ ವ್ಯಕ್ತವಾದ ಸಹ್ಯವಲ್ಲದ ನಡವಳಿಕೆಗೆ ವಿಷಾದವಿದೆ. ಏಕೆಂದರೆ ನಿಮ್ಮನ್ನು ಯಾವತ್ತೂ ಒಬ್ಬ ಅತ್ಯಂತ ಸಭ್ಯಸ್ತ ಎಂದೇ ಭಾವಿಸಿಕೊಂಡು ಬಂದವಳು ನಾನು.

ಇತಿ, ಶ್ರೀಮತಿ ಆರ್. ಲಾಲ್ವಾನಿ

ಇದಕ್ಕೆ ಜೆಆರ್‌ಡಿ ಟಾಟಾ ಕೊಟ್ಟ ಉತ್ತರ ಹೀಗಿತ್ತು-
ಆತ್ಮೀಯ ಶ್ರೀಮತಿ ಲಾಲ್ವಾನಿ, ನಿಮ್ಮ ಪತ್ರ ತಲುಪುತ್ತಲೇ ನನ್ನಲ್ಲಿ ಆಶ್ಚರ್ಯ ಹಾಗೂ ಪಶ್ಚಾತ್ತಾಪಗಳು ಒಮ್ಮೆಗೇ ಹುಟ್ಟಿದವು. ನನಗೆ ಇದನ್ನು ಬರೆಯುವ ಶ್ರಮ ತೆಗೆದುಕೊಂಡ ನಿಮ್ಮನ್ನು ಅಭಿನಂದಿಸುತ್ತೇನೆ. ನಾನು ಈಗಷ್ಟೇ ವಿದೇಶದಿಂದ ಹಿಂತಿರುಗಿದ್ದರಿಂದ ಹಾಗೂ ಅದುವರೆಗೂ ನಿಮ್ಮ ಪತ್ರ ನನ್ನ ಮನೆಯಲ್ಲಿ ವಾರಗಟ್ಟಲೇ ಹಾಗೆ ತೆರೆಯದ ಸ್ಥಿತಿಯಲ್ಲಿ ಇದ್ದಿದ್ದರಿಂದ ಉತ್ತರಿಸಲು ತಡವಾಗುತ್ತಿರುವುದಕ್ಕೆ ವಿಷಾದಿಸುತ್ತೇನೆ.

ನನಗೆ ಆಶ್ಚರ್‍ಯವಾಗಿದ್ದೇಕೆಂದರೆ ನೀವು ವಿವರಿಸಿದ ಘಟನೆ ನನಗೆ ನೆನಪಿನಲ್ಲಿಲ್ಲ. ಪಶ್ಚಾತ್ತಾಪ ಏಕೆಂದರೆ ನೀವು ಹೇಳಿರುವ ಪ್ರಕಾರ ನಾನು ಹಾಗೆ ಅಸಭ್ಯವಾಗಿ ಕೂಗಿಕೊಂಡಿದ್ದೆ ಎನ್ನುವುದಕ್ಕೆ. ಮಹಿಳೆಯರ ಬಗ್ಗೆ ನಾನು ರಜಪೂತರು ಹೊಂದಿದ್ದಂಥ ಅಭಿಮಾನಪೂರ್ವಕ ಗೌರವವನ್ನು ಹೊಂದಿರುವವನು. ಅಂಥದ್ದರಲ್ಲಿ ಅದ್ಯಾಕೆ ಒಬ್ಬರ ವಿಷಯದಲ್ಲಿ ಹಾಗೆ ಸಭ್ಯತೆಯಿಲ್ಲದೇ ನಡೆದುಕೊಳ್ಳಬೇಕಾದ ಪರಿಸ್ಥಿತಿ ಬಂತು ಎಂದು ಅರ್ಥವಾಗುತ್ತಿಲ್ಲ. ಅದೇನೇ ಪ್ರಚೋದನೆ ಉಂಟಾಗಿದ್ದರೂ ಆ ವರ್ತನೆ ಸಮರ್ಥನೀಯವಲ್ಲ. ಈಗ ನಾನು ಮಾಡಬಹುದ್ದಾಗಿದ್ದೇನೆಂದರೆ ನಿಮಗೆ ನನ್ನ ತಪ್ಪೊಪ್ಪಿಗೆ ತಿಳಿಸುತ್ತ ಕ್ಷಮೆಯಾಚಿಸುವುದು. ಇದರೊಂದಿಗೆ ಕಳುಹಿಸಿಕೊಡುತ್ತಿರುವ ಹೂಗುಚ್ಛವನ್ನು ಸ್ವೀಕರಿಸಿ ನೀವು ನನ್ನನ್ನು ಮನ್ನಿಸುತ್ತೀರಿ ಹಾಗೂ ಈ ಘಟನೆಗೂ ಮೊದಲು ನನ್ನ ವಿಷಯದಲ್ಲಿ ಯಾವ ಭಾವನೆ ಹೊಂದಿದ್ದಿರೋ ಅದನ್ನೇ ಇಟ್ಟುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ.

ನಿಮ್ಮ ವಿಶ್ವಾಸಿ,
ಜೆಆರ್‌ಡಿ ಟಾಟಾ

***

ಜೆಆರ್‌ಡಿಯವರು ಜಿ.ಡಿ. ಬಿರ್ಲಾ ಅವರಿಗೆ ಬರೆದ ತುಂಬ ಚಿಕ್ಕ ಪತ್ರವೊಂದು ಆತ್ಮೀಯತೆಯ ದೊಡ್ಡ ಅಧ್ಯಾಯವೊಂದನ್ನೇ ನಮ್ಮೆದುರು ತೆರೆದಿಟ್ಟಂತೆ ಭಾಸವಾಗುತ್ತದೆ. ಓದಿ.

ನನ್ನ ಪ್ರೀತಿಯ ಘನಶ್ಯಾಮದಾಸ್,
ನನಗೊಂದು ಲೇಖನ ಕಳುಹಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ. ಅದನ್ನು ತುಂಬ ಆಸಕ್ತಿಯಿಂದ ಓದಿಕೊಂಡು ಹಿಂತಿರುಗಿಸುತ್ತಿದ್ದೇನೆ. ನಾನು ನಿಕೋಟಿನ್ ಬಿಟ್ಟಾಗಿದೆ. ಕಾಫಿ ಇಲ್ಲವೇ ಮದ್ಯವನ್ನು ಸೇವಿಸುವುದೂ ತುಂಬ ಅಪರೂಪ. ಬೇರೆಯವರು ಹೇಳುವ ಪ್ರಕಾರ ನಾನು ಮಾಂಸವನ್ನೂ ತ್ಯಜಿಸಬೇಕು. ಆದರೆ ನಾನು ಬಿಡಬೇಕು ಎಂದುಕೊಳ್ಳುವುದು ಕೆಲಸವನ್ನು!…
ನಿಮ್ಮ ವಿಶ್ವಾಸಿ,
ಜೇ

ಟಾಟಾ ಅವರ ಮತ್ತೊಂದಿಷ್ಟು ಪತ್ರಗಳ ನಮೂನೆ

J R D Tata

ಆಗಿನ ಬಾಂಬೆಯಿಂದ ಪ್ರಕಟಗೊಳ್ಳುತ್ತಿದ್ದ `ಕರೆಂಟ್’ ವಾರಪತ್ರಿಕೆಯ ಸಂಪಾದಕ ಡಿ.ಎಫ್. ಕಾರಕರಿಗೆ ಬರೆದ ಪತ್ರದಲ್ಲಿ ಭಾಷೆಗೆ ಸಂಬಂಧಿಸಿದಂತೆ ಕಾಯ್ದುಕೊಳ್ಳಬೇಕಾದ ಸಭ್ಯತೆಯ ಬಗ್ಗೆ ಟಾಟಾ ಅವರಿಗಿದ್ದ ಕಾಳಜಿ ವ್ಯಕ್ತವಾಗಿದೆ.

ಪ್ರಿಯ ದೊಸೋ,
`ನೌ ಲೆಟ್ ದೆಮ್ ಡೈ’ ಎಂಬ ಶೀರ್ಷಿಕೆ ಅಡಿ ಪ್ರಕಟವಾದ ಕರೆಂಟ್ ನಿಯತಕಾಲಿಕದ ಅಗ್ರ ಲೇಖನವನ್ನು ಓದಿ ನನಗೆ ಖೇದವುಂಟಾಯಿತು. ಬೇಸರವಾಗಿದ್ದು ನೀವು ಭಾರತ ಸರಕಾರದ ಆಹಾರ ನೀತಿಯನ್ನು ಟೀಕೆ ಮಾಡಿರುವುದಕ್ಕಲ್ಲ, ಬದಲಿಗೆ ಜವಹಾರ್‌ಲಾಲ್ ನೆಹರು ಅವರ ಬಗ್ಗೆ ನೀವು ಉಪಯೋಗಿಸಿದ ಭಾಷೆಯಿಂದ. ಪ್ರಜಾಪ್ರಭುತ್ವದಲ್ಲಿ ಸರಕಾರದ ನೀತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪತ್ರಿಕೆಗಳಿಗೆ ಇರುವುದು ಹೌದಾದರೂ ಅದನ್ನೇ ಸಭ್ಯ ಭಾಷೆಯಲ್ಲಿ, ವೈಯಕ್ತಿಕ ನಿಂದನೆಗಿಳಿಯದೇ ಮಾಡುವುದಕ್ಕೆ ಅಡ್ಡಿ ಏನಿದೆ…
ನಿಮ್ಮ ವಿಶ್ವಾಸಿ
ಜೇ

***

`ಬ್ಲಿಟ್ಜ್’ ಪತ್ರಿಕೆಯ ಸಂಪಾದಕ ರುಸ್ಸಿ ಕರಂಜಿಯಾ ಯಾವತ್ತೂ ಟಾಟಾ ವಿರುದ್ಧ ಕಟುವಾಗಿಯೇ ಬರೆದುಕೊಂಡು ಬಂದವರು. ಯಾವುದೋ ಹಂತದಲ್ಲಿ ರುಸ್ಸಿಗೆ ಕದನಕ್ಕೆ ಟಾಟಾ ಹೇಳಿ ಸ್ನೇಹ ಮಾಡಿಕೊಳ್ಳುವ ಬಯಕೆ ಬಂತೆನಿಸುತ್ತದೆ. ಅದಕ್ಕಾಗಿ ಟಾಟಾ ಅವರೊಂದಿಗೆ ಭೇಟಿ ಬಯಸಿ ಪತ್ರ ಬರೆದರು. ಅದನ್ನು ಟಾಟಾ ಸುಮ್ಮನೇ ಬದಿಗಿಡಲೂ ಇಲ್ಲ, ಹಾಗಂತ ರುಸ್ಸಿ ಆಸೆಗೆ ನೀರೆರೆಯಲೂ ಇಲ್ಲ. ಪ್ರತಿಕ್ರಿಯೆಯನ್ನಂತೂ ನೀಡಿದರು. ಟಾಟಾ ಅವರ ಖಡಕ್‌ತನದ ಝಲಕ್ ಆ ಮರು ಉತ್ತರದ ಪತ್ರದಲ್ಲಿ ಜಾಹೀರಾಗಿದೆ.

ಪ್ರೀತಿಯ ರುಸ್ಸಿ,
ಜುಲೈ 28ರ ಪತ್ರಕ್ಕೆ ಧನ್ಯವಾದ. ನಮ್ಮ ಹಳೆಯ ಬಾಂಧವ್ಯವನ್ನು ಮತ್ತೆ ಸ್ಥಾಪಿಸಿಕೊಳ್ಳೋಣ ಎಂದು ನೀವು ಹೇಳಿರುವುದೇನೋ ಚೆನ್ನಾಗಿದೆಯಾದರೂ ನಮ್ಮಿಬ್ಬರ ಭೇಟಿ ಯಾವ ಉದ್ದೇಶವನ್ನು ಈಡೇರಿಸಲಿದೆ ಎಂಬುದು ನನಗರ್ಥವಾಗುತ್ತಿಲ್ಲ. ನಾವಿಬ್ಬರೂ ನಂಬುವ ಸಂಗತಿಗಳು ಹಾಗೂ ಜೀವನದ ಆದ್ಯತೆಗಳ ವಿಷಯದಲ್ಲಿ ಇಬ್ಬರ ನಡುವೆ ಅದೆಂಥ ಕಂದಕ ಇದೆ ಎಂದರೆ `ಮನಸುಗಳ ಬೆಸುಗೆ’ ಇಲ್ಲಿ ಸಾಧ್ಯವೇ ಇಲ್ಲ. ಕಮ್ಯುನಿಸ್ಟ್ ತತ್ತ್ವವನ್ನು ಬೆಂಬಲಿಸುತ್ತಲೇ ಪ್ರಜಾಪ್ರಭುತ್ವದ ಆದರ್ಶಗಳನ್ನು ಕಾಪಾಡುವ ಬಗೆಗಿನ ನಿಮ್ಮ ರೀತಿ ರಿವಾಜುಗಳು ನಿಮಗೆ ಹಾಗೂ ನಿಮ್ಮ ಅಂತಃಸಾಕ್ಷಿಗೆ ಬಿಟ್ಟ ವಿಚಾರ. ಪ್ರಕಾಶಕ ಹಾಗೂ ಸಂಪಾದಕರಾಗಿ ನಿಮ್ಮ ಜವಾಬ್ದಾರಿ ಹಾಗೂ ರೂಢಿಸಿಕೊಂಡಿರುವ ಮೌಲ್ಯಗಳೂ ನಿಮಗೆ ಬಿಟ್ಟಿದ್ದು. ಇವೆಲ್ಲ ವಿಷಯಗಳ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ ಹಾಗೂ ನನ್ನನ್ನು ಭೇಟಿ ಮಾಡಿ ಇದನ್ನೆಲ್ಲ ಬದಲಿಸುವ ನಿರೀಕ್ಷೆ ನಿಮಗೆ ಬೇಡ.

ನನಗಂತೂ ನಿಮ್ಮ ಅಭಿಪ್ರಾಯಗಳನ್ನು ಬದಲಿಸುವ ಅಪೇಕ್ಷೆಯೂ ಇಲ್ಲ, ಆ ಬಗ್ಗೆ ಯಾವ ಪ್ರಯತ್ನಕ್ಕೂ ಇಳಿಯುವುದಿಲ್ಲ. ಹೀಗಾಗಿ ನಾವಿಬ್ಬರು ಪರಸ್ಪರರ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ ಅಷ್ಟೆ. ಬದುಕು ಚಿಕ್ಕದು ಹಾಗೂ ದುಸ್ತರ ಸಹ. ವ್ಯಕ್ತಿಗಳು, ಜನರ ನಡುವೆ ಈಗಾಗಲೇ ಸಾಕಷ್ಟು ಆತಂಕದ ವಾತಾವರಣ ಮನೆ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭವನ್ನು ಸೃಷ್ಟಿಸುವ ಅಗತ್ಯವಿಲ್ಲ…
ನಿಮ್ಮ ವಿಶ್ವಾಸಿ,
ಜೇ

***

ಜೆಆರ್‌ಡಿ ಟಾಟಾ ಅವರಂತೆ ಯಶಸ್ವಿ ಕೈಗಾರಿಕೋದ್ಯಮಿ ಆಗಬೇಕು ಎಂದು ಕನಸು ಕಾಣುವವರಿಗೆ ಬರವೇ? ಜೆಆರ್‌ಡಿಯವರನ್ನು ಮಾದರಿಯಾಗಿಟ್ಟುಕೊಳ್ಳುವ ಯುವಕರು ಅವರೆದುರು ತಮ್ಮ ಆಸೆಯನ್ನು ಹರವಿಡಬೇಕು ಎಂದೂ ಬಯಸುತ್ತಿದ್ದರು. ಕಾಲೇಜು ಹುಡುಗನೊಬ್ಬ ಇಂತದೇ ಬಯಕೆಯಲ್ಲಿ ಟಾಟಾ ಅವರಿಗೆ ಪತ್ರ ಬರೆಯುತ್ತಾನೆ. ಹೇಗೆಂದರೂ ಅದು ಕಸದ ಬುಟ್ಟಿಗೆ ಸೇರುವ ಸಾಧ್ಯತೆಯೇ ಹೆಚ್ಚು ಎಂದುಕೊಂಡಿದ್ದವನಿಗೆ ಜೆಆರ್‌ಡಿ ಅವರಿಂದ ಸಿಕ್ಕ ಮಾರುತ್ತರ ಹೇಗಿದೆ ಓದಿ.

ಪ್ರಿಯ ಪ್ರವೀಣ್ ದಯಾಳ್,
ಏಪ್ರಿಲ್ 28ರ ನಿಮ್ಮ ಪತ್ರಕ್ಕೆ ಧನ್ಯವಾದ. ನಾನೀಗ ನೀಡುತ್ತಿರುವ ಪ್ರತಿಕ್ರಿಯೆಯಿಂದ- ನಿಮ್ಮ ಪತ್ರ ಕಸದ ಬುಟ್ಟಿ ಸೇರಬಹುದು, ನೋವುಣ್ಣಬೇಕಾದ ಪ್ರಮೇಯ ಬರಬಹುದು ಹಾಗೂ ನನ್ನಂಥ ಕೈಗಾರಿಕೋದ್ಯಮಿಗೆ ನಿಮಗೆ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ ಎಂಬ ನಿಮ್ಮ ಕಲ್ಪನೆಗಳೆಲ್ಲ ಸುಳ್ಳಾಗಿವೆ!

ಕೈಗಾರಿಕೋದ್ಯಮಿ ಆಗುವುದು ಖಚಿತ ಎಂದು ನಿರ್ಧರಿಸಿರುವ ನೀವು ನನ್ನ ಸಲಹೆ ಅಪೇಕ್ಷಿಸಿರುವುದು ತಿಳಿಯಿತು. ಬದುಕಿನ ಪ್ರಾರಂಭಿಕ ಹಂತದ ವಯೋಮಾನದಲ್ಲಿರುವ ನಿಮಗೆ ಈಗ ತಕ್ಷಣಕ್ಕೆ ನಾನು ನೀಡಬಹುದಾದ ಸಲಹೆ ಎಂದರೆ, ಮುಂದಿನ ನಿಮ್ಮ ಕೈಗಾರಿಕಾ ವೃತ್ತಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿ. ಗಣಿತ ಹಾಗೂ ತಾಂತ್ರಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ ನೀವು ಎಂಜಿನಿಯರ್ ಆಗಿ ಎಂದು ನಾನು ಸಲಹೆ ನೀಡುತ್ತೇನೆ. ಅದಿಲ್ಲದಿದ್ದರೆ ಬಿ.ಕಾಂ. ಇಲ್ಲವೇ ಕಾನೂನು ಪದವಿ ಪಡೆದುಕೊಳ್ಳಿ. ಇದರಲ್ಲಿ ಯಾವುದನ್ನೇ ಆಯ್ದುಕೊಂಡರೂ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ತಂದೆ ಕಂಪನಿ ಕಾರ್‍ಯಾಧಿಕಾರಿ ಎಂದು ತಿಳಿಸಿರುವಿರಿ. ಹಾಗಿರುವಾಗ ಸಲಹೆ ನೀಡುವುದಕ್ಕೆ ಯಾರೂ ಇಲ್ಲ ಎಂದು ನೀವೇಕೆ ಬೇಜಾರು ಮಾಡಿಕೊಳ್ಳುತ್ತಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ತಂದೆಯ ಸಲಹೆಯನ್ನೂ ಪಡೆಯಿರಿ.

ಕೊನೆಯದಾಗಿ, ನಿಮ್ಮ ಭವಿಷ್ಯಕ್ಕೆ ತುಂಬಾ ನಿರ್ಣಾಯಕವಾಗಿರುವ ಇಂಗ್ಲಿಷ್ ಭಾಷೆ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನೀವು ಏನನ್ನೇ ಮಾಡುವುದಿದ್ದರೂ ಅದರಲ್ಲಿ ಸಂಕ್ಷಿಪ್ತತೆ ಹಾಗೂ ನಿಯಮ ಬದ್ಧತೆ ರೂಢಿಸಿಕೊಳ್ಳಲು ಪ್ರಯತ್ನಿಸಿ. ಈ ವಿಷಯದಲ್ಲಿ ನೀವು ಪಳಗಬೇಕಿದೆ ಎಂಬುದನ್ನು ನಿಮ್ಮ ಪತ್ರವೇ ತಿಳಿಸುತ್ತದೆ. ಉದಾಹರಣೆಗೆ, ನಾನು ನಿಮ್ಮ ಪತ್ರವನ್ನು ಏಪ್ರಿಲ್ 22ರಂದೇ ಪಡೆದೆನಾದರೂ ಅದರ ಮೇಲೆ ಏಪ್ರಿಲ್ 28ರ ದಿನಾಂಕವಿತ್ತು!
ನಿಮ್ಮ ಯಶಸ್ವಿ ವೃತ್ತಿಗೆ ಶುಭ ಹಾರೈಸುತ್ತ,
ನಿಮ್ಮ ವಿಶ್ವಾಸಿ,
ಜೆ. ಆರ್. ಡಿ. ಟಾಟಾ

ಆಗಿನ ಬಾಂಬೆಯಿಂದ ಪ್ರಕಟಗೊಳ್ಳುತ್ತಿದ್ದ `ಕರೆಂಟ್’ ವಾರಪತ್ರಿಕೆಯ ಸಂಪಾದಕ ಡಿ.ಎಫ್. ಕಾರಕರಿಗೆ ಬರೆದ ಪತ್ರದಲ್ಲಿ ಭಾಷೆಗೆ ಸಂಬಂಧಿಸಿದಂತೆ ಕಾಯ್ದುಕೊಳ್ಳಬೇಕಾದ ಸಭ್ಯತೆಯ ಬಗ್ಗೆ ಟಾಟಾ ಅವರಿಗಿದ್ದ ಕಾಳಜಿ ವ್ಯಕ್ತವಾಗಿದೆ.

ಪ್ರಿಯ ದೊಸೋ,
`ನೌ ಲೆಟ್ ದೆಮ್ ಡೈ’ ಎಂಬ ಶೀರ್ಷಿಕೆ ಅಡಿ ಪ್ರಕಟವಾದ ಕರೆಂಟ್ ನಿಯತಕಾಲಿಕದ ಅಗ್ರ ಲೇಖನವನ್ನು ಓದಿ ನನಗೆ ಖೇದವುಂಟಾಯಿತು. ಬೇಸರವಾಗಿದ್ದು ನೀವು ಭಾರತ ಸರಕಾರದ ಆಹಾರ ನೀತಿಯನ್ನು ಟೀಕೆ ಮಾಡಿರುವುದಕ್ಕಲ್ಲ, ಬದಲಿಗೆ ಜವಹಾರ್‌ಲಾಲ್ ನೆಹರು ಅವರ ಬಗ್ಗೆ ನೀವು ಉಪಯೋಗಿಸಿದ ಭಾಷೆಯಿಂದ. ಪ್ರಜಾಪ್ರಭುತ್ವದಲ್ಲಿ ಸರಕಾರದ ನೀತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪತ್ರಿಕೆಗಳಿಗೆ ಇರುವುದು ಹೌದಾದರೂ ಅದನ್ನೇ ಸಭ್ಯ ಭಾಷೆಯಲ್ಲಿ, ವೈಯಕ್ತಿಕ ನಿಂದನೆಗಿಳಿಯದೇ ಮಾಡುವುದಕ್ಕೆ ಅಡ್ಡಿ ಏನಿದೆ…
ನಿಮ್ಮ ವಿಶ್ವಾಸಿ
ಜೇ

***

`ಬ್ಲಿಟ್ಜ್’ ಪತ್ರಿಕೆಯ ಸಂಪಾದಕ ರುಸ್ಸಿ ಕರಂಜಿಯಾ ಯಾವತ್ತೂ ಟಾಟಾ ವಿರುದ್ಧ ಕಟುವಾಗಿಯೇ ಬರೆದುಕೊಂಡು ಬಂದವರು. ಯಾವುದೋ ಹಂತದಲ್ಲಿ ರುಸ್ಸಿಗೆ ಕದನಕ್ಕೆ ಟಾಟಾ ಹೇಳಿ ಸ್ನೇಹ ಮಾಡಿಕೊಳ್ಳುವ ಬಯಕೆ ಬಂತೆನಿಸುತ್ತದೆ. ಅದಕ್ಕಾಗಿ ಟಾಟಾ ಅವರೊಂದಿಗೆ ಭೇಟಿ ಬಯಸಿ ಪತ್ರ ಬರೆದರು. ಅದನ್ನು ಟಾಟಾ ಸುಮ್ಮನೇ ಬದಿಗಿಡಲೂ ಇಲ್ಲ, ಹಾಗಂತ ರುಸ್ಸಿ ಆಸೆಗೆ ನೀರೆರೆಯಲೂ ಇಲ್ಲ. ಪ್ರತಿಕ್ರಿಯೆಯನ್ನಂತೂ ನೀಡಿದರು. ಟಾಟಾ ಅವರ ಖಡಕ್‌ತನದ ಝಲಕ್ ಆ ಮರು ಉತ್ತರದ ಪತ್ರದಲ್ಲಿ ಜಾಹೀರಾಗಿದೆ.

ಪ್ರೀತಿಯ ರುಸ್ಸಿ,
ಜುಲೈ 28ರ ಪತ್ರಕ್ಕೆ ಧನ್ಯವಾದ. ನಮ್ಮ ಹಳೆಯ ಬಾಂಧವ್ಯವನ್ನು ಮತ್ತೆ ಸ್ಥಾಪಿಸಿಕೊಳ್ಳೋಣ ಎಂದು ನೀವು ಹೇಳಿರುವುದೇನೋ ಚೆನ್ನಾಗಿದೆಯಾದರೂ ನಮ್ಮಿಬ್ಬರ ಭೇಟಿ ಯಾವ ಉದ್ದೇಶವನ್ನು ಈಡೇರಿಸಲಿದೆ ಎಂಬುದು ನನಗರ್ಥವಾಗುತ್ತಿಲ್ಲ. ನಾವಿಬ್ಬರೂ ನಂಬುವ ಸಂಗತಿಗಳು ಹಾಗೂ ಜೀವನದ ಆದ್ಯತೆಗಳ ವಿಷಯದಲ್ಲಿ ಇಬ್ಬರ ನಡುವೆ ಅದೆಂಥ ಕಂದಕ ಇದೆ ಎಂದರೆ `ಮನಸುಗಳ ಬೆಸುಗೆ’ ಇಲ್ಲಿ ಸಾಧ್ಯವೇ ಇಲ್ಲ. ಕಮ್ಯುನಿಸ್ಟ್ ತತ್ತ್ವವನ್ನು ಬೆಂಬಲಿಸುತ್ತಲೇ ಪ್ರಜಾಪ್ರಭುತ್ವದ ಆದರ್ಶಗಳನ್ನು ಕಾಪಾಡುವ ಬಗೆಗಿನ ನಿಮ್ಮ ರೀತಿ ರಿವಾಜುಗಳು ನಿಮಗೆ ಹಾಗೂ ನಿಮ್ಮ ಅಂತಃಸಾಕ್ಷಿಗೆ ಬಿಟ್ಟ ವಿಚಾರ. ಪ್ರಕಾಶಕ ಹಾಗೂ ಸಂಪಾದಕರಾಗಿ ನಿಮ್ಮ ಜವಾಬ್ದಾರಿ ಹಾಗೂ ರೂಢಿಸಿಕೊಂಡಿರುವ ಮೌಲ್ಯಗಳೂ ನಿಮಗೆ ಬಿಟ್ಟಿದ್ದು. ಇವೆಲ್ಲ ವಿಷಯಗಳ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ ಹಾಗೂ ನನ್ನನ್ನು ಭೇಟಿ ಮಾಡಿ ಇದನ್ನೆಲ್ಲ ಬದಲಿಸುವ ನಿರೀಕ್ಷೆ ನಿಮಗೆ ಬೇಡ.

ನನಗಂತೂ ನಿಮ್ಮ ಅಭಿಪ್ರಾಯಗಳನ್ನು ಬದಲಿಸುವ ಅಪೇಕ್ಷೆಯೂ ಇಲ್ಲ, ಆ ಬಗ್ಗೆ ಯಾವ ಪ್ರಯತ್ನಕ್ಕೂ ಇಳಿಯುವುದಿಲ್ಲ. ಹೀಗಾಗಿ ನಾವಿಬ್ಬರು ಪರಸ್ಪರರ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ ಅಷ್ಟೆ. ಬದುಕು ಚಿಕ್ಕದು ಹಾಗೂ ದುಸ್ತರ ಸಹ. ವ್ಯಕ್ತಿಗಳು, ಜನರ ನಡುವೆ ಈಗಾಗಲೇ ಸಾಕಷ್ಟು ಆತಂಕದ ವಾತಾವರಣ ಮನೆ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭವನ್ನು ಸೃಷ್ಟಿಸುವ ಅಗತ್ಯವಿಲ್ಲ…
ನಿಮ್ಮ ವಿಶ್ವಾಸಿ,
ಜೇ

***

ಜೆಆರ್‌ಡಿ ಟಾಟಾ ಅವರಂತೆ ಯಶಸ್ವಿ ಕೈಗಾರಿಕೋದ್ಯಮಿ ಆಗಬೇಕು ಎಂದು ಕನಸು ಕಾಣುವವರಿಗೆ ಬರವೇ? ಜೆಆರ್‌ಡಿಯವರನ್ನು ಮಾದರಿಯಾಗಿಟ್ಟುಕೊಳ್ಳುವ ಯುವಕರು ಅವರೆದುರು ತಮ್ಮ ಆಸೆಯನ್ನು ಹರವಿಡಬೇಕು ಎಂದೂ ಬಯಸುತ್ತಿದ್ದರು. ಕಾಲೇಜು ಹುಡುಗನೊಬ್ಬ ಇಂತದೇ ಬಯಕೆಯಲ್ಲಿ ಟಾಟಾ ಅವರಿಗೆ ಪತ್ರ ಬರೆಯುತ್ತಾನೆ. ಹೇಗೆಂದರೂ ಅದು ಕಸದ ಬುಟ್ಟಿಗೆ ಸೇರುವ ಸಾಧ್ಯತೆಯೇ ಹೆಚ್ಚು ಎಂದುಕೊಂಡಿದ್ದವನಿಗೆ ಜೆಆರ್‌ಡಿ ಅವರಿಂದ ಸಿಕ್ಕ ಮಾರುತ್ತರ ಹೇಗಿದೆ ಓದಿ.

ಪ್ರಿಯ ಪ್ರವೀಣ್ ದಯಾಳ್,
ಏಪ್ರಿಲ್ 28ರ ನಿಮ್ಮ ಪತ್ರಕ್ಕೆ ಧನ್ಯವಾದ. ನಾನೀಗ ನೀಡುತ್ತಿರುವ ಪ್ರತಿಕ್ರಿಯೆಯಿಂದ- ನಿಮ್ಮ ಪತ್ರ ಕಸದ ಬುಟ್ಟಿ ಸೇರಬಹುದು, ನೋವುಣ್ಣಬೇಕಾದ ಪ್ರಮೇಯ ಬರಬಹುದು ಹಾಗೂ ನನ್ನಂಥ ಕೈಗಾರಿಕೋದ್ಯಮಿಗೆ ನಿಮಗೆ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ ಎಂಬ ನಿಮ್ಮ ಕಲ್ಪನೆಗಳೆಲ್ಲ ಸುಳ್ಳಾಗಿವೆ!

ಕೈಗಾರಿಕೋದ್ಯಮಿ ಆಗುವುದು ಖಚಿತ ಎಂದು ನಿರ್ಧರಿಸಿರುವ ನೀವು ನನ್ನ ಸಲಹೆ ಅಪೇಕ್ಷಿಸಿರುವುದು ತಿಳಿಯಿತು. ಬದುಕಿನ ಪ್ರಾರಂಭಿಕ ಹಂತದ ವಯೋಮಾನದಲ್ಲಿರುವ ನಿಮಗೆ ಈಗ ತಕ್ಷಣಕ್ಕೆ ನಾನು ನೀಡಬಹುದಾದ ಸಲಹೆ ಎಂದರೆ, ಮುಂದಿನ ನಿಮ್ಮ ಕೈಗಾರಿಕಾ ವೃತ್ತಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿ. ಗಣಿತ ಹಾಗೂ ತಾಂತ್ರಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ ನೀವು ಎಂಜಿನಿಯರ್ ಆಗಿ ಎಂದು ನಾನು ಸಲಹೆ ನೀಡುತ್ತೇನೆ. ಅದಿಲ್ಲದಿದ್ದರೆ ಬಿ.ಕಾಂ. ಇಲ್ಲವೇ ಕಾನೂನು ಪದವಿ ಪಡೆದುಕೊಳ್ಳಿ. ಇದರಲ್ಲಿ ಯಾವುದನ್ನೇ ಆಯ್ದುಕೊಂಡರೂ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ತಂದೆ ಕಂಪನಿ ಕಾರ್‍ಯಾಧಿಕಾರಿ ಎಂದು ತಿಳಿಸಿರುವಿರಿ. ಹಾಗಿರುವಾಗ ಸಲಹೆ ನೀಡುವುದಕ್ಕೆ ಯಾರೂ ಇಲ್ಲ ಎಂದು ನೀವೇಕೆ ಬೇಜಾರು ಮಾಡಿಕೊಳ್ಳುತ್ತಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ತಂದೆಯ ಸಲಹೆಯನ್ನೂ ಪಡೆಯಿರಿ.

ಕೊನೆಯದಾಗಿ, ನಿಮ್ಮ ಭವಿಷ್ಯಕ್ಕೆ ತುಂಬಾ ನಿರ್ಣಾಯಕವಾಗಿರುವ ಇಂಗ್ಲಿಷ್ ಭಾಷೆ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನೀವು ಏನನ್ನೇ ಮಾಡುವುದಿದ್ದರೂ ಅದರಲ್ಲಿ ಸಂಕ್ಷಿಪ್ತತೆ ಹಾಗೂ ನಿಯಮ ಬದ್ಧತೆ ರೂಢಿಸಿಕೊಳ್ಳಲು ಪ್ರಯತ್ನಿಸಿ. ಈ ವಿಷಯದಲ್ಲಿ ನೀವು ಪಳಗಬೇಕಿದೆ ಎಂಬುದನ್ನು ನಿಮ್ಮ ಪತ್ರವೇ ತಿಳಿಸುತ್ತದೆ. ಉದಾಹರಣೆಗೆ, ನಾನು ನಿಮ್ಮ ಪತ್ರವನ್ನು ಏಪ್ರಿಲ್ 22ರಂದೇ ಪಡೆದೆನಾದರೂ ಅದರ ಮೇಲೆ ಏಪ್ರಿಲ್ 28ರ ದಿನಾಂಕವಿತ್ತು!
ನಿಮ್ಮ ಯಶಸ್ವಿ ವೃತ್ತಿಗೆ ಶುಭ ಹಾರೈಸುತ್ತ,
ನಿಮ್ಮ ವಿಶ್ವಾಸಿ,
ಜೆ. ಆರ್. ಡಿ. ಟಾಟಾ

ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು!

‘ನೀವು ನಮಗೆ ರಿಚರ್ಡ್ ಬ್ರಾನ್‌ಸನ್‌ನ ಹುಚ್ಚನ್ನು ಹತ್ತಿಸಿಬಿಟ್ರಿ. ನಮಗಂತೂ ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ಅವನ ಬಗ್ಗೆ ಇನ್ನೇನಾದರೂ ಇದ್ದರೆ ಬರೆಯಿರಿ. ನಾನು ನನ್ನ ವಿದ್ಯಾರ್ಥಿಗಳನ್ನೆಲ್ಲ ಕುಳ್ಳಿರಿಸಿಕೊಂಡು ಅವನ ಬಗ್ಗೆ ಹೇಳುತ್ತೇನೆ’ ಎಂದು ಮೈಸೂರಿನ ಹೈಸ್ಕೂಲ್ ಶಿಕ್ಷಕಿ ಶಾಂತಲಾ ಐದಾರು ವಿದ್ಯಾರ್ಥಿಗಳೊಂದಿಗೆ ನಮ್ಮ ಕಾರ್ಯಾಲಯಕ್ಕೆ ಬಂದಿದ್ದರು. ‘ಈ ಮಾತನ್ನು ಫೋನಿನಲ್ಲಿ ಹೇಳಬಹುದಿತ್ತು, ಆದರೆ ನಾವು ಅವನ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದೇವೆಂಬುದನ್ನು ಈ ಮೂಲಕ ತಿಳಿಸಲು ಖುದ್ದಾಗಿ ಬಂದಿದ್ದೇವೆ’ ಎಂದರು ಶಾಂತಲಾ ಮೇಡಂ. ಫೇಸ್‌ಬುಕ್‌ನಲ್ಲೂ ಇದೇ ವರಾತ. ‘ಬ್ರ್ಯಾನ್‌ಸನ್ ಬಗ್ಗೆ ಯಾಕೆ ನಿಲ್ಲಿಸಿದಿರಿ. ದಯವಿಟ್ಟು ಮುಂದುವರಿಸಿ’ ಎಂದವರು ಅವೆಷ್ಟೋ ಮಂದಿ. ಕಟ್ಟುಪಾಡಿಗೆ ಅಂಟಿಕೊಂಡವನಂತೆ ಒಂದೇ ವಿಷಯದ ಬಗ್ಗೆ ನಾನು ಬರೆಯುವುದಿಲ್ಲ. ಆದರೆ ಓದುಗರೇ ಬೇಕು ಅಂದ್ರೆ ಇಲ್ಲವೆಂದು ಹೇಳುವುದಾದರೂ ಹೇಗೆ? ಈ ಸಂದರ್ಭದಲ್ಲಿ ಆತ ಬರೆದ ಒಂದು ಬರಹ ಸಿಕ್ಕಿತು. ಶಾಂತಲಾ ಮೇಡಂ ಹಾಗೂ ಅವರ ವಿದ್ಯಾರ್ಥಿಗಳು ನೆನಪಾದರು. ಇನ್ನು ನೀವುಂಟು ಹಾಗೂ ಬ್ರ್ಯಾನ್‌ಸನ್. ನಡುವೆ ನಾನ್ಯಾಕೆ?

***

ಹೋದಲ್ಲಿ ಬಂದಲ್ಲಿ ಜನ ನನ್ನನ್ನು ಕೇಳುತ್ತಾರೆ- ‘ಯಾವಾಗಲೂ ನೀವು ಉತ್ಸಾಹದಲ್ಲಿರುತ್ತೀರಾ. ಸದಾ ನಗುನಗುತ್ತೀರಾ. ಬೇರೆಯವರನ್ನೂ ಸಂತಸಪಡಿಸುತ್ತೀರಾ. ಬಿಲಿಯನರ್ ಆಗಿದ್ದರೂ ಸ್ವಲ್ಪವೂ ಟೆನ್‌ಶನ್ ಮಾಡಿಕೊಳ್ಳುವುದಿಲ್ಲ. ಸಿಬ್ಬಂದಿ ಮೇಲೆ ರೇಗುವುದಿಲ್ಲ. ಯಾವತ್ತೂ ಹೊಸ ಹೊಸ ಸಾಹಸಕ್ಕೆ ಮುಂದಾಗುತ್ತೀರಾ. ಸವಾಲುಗಳನ್ನು ಸಲೀಸಾಗಿ ಎದುರಿಸುತ್ತೀರಾ. ಬ್ರ್ಯಾನ್‌ಸನ್ ಯಾವ ಹೊಸ ಸಾಹಸಕ್ಕೆ ಸ್ಕೆಚ್ ಹಾಕುತ್ತಿರಬಹುದು ಎಂದು ಯೋಚಿಸುತ್ತಿರುವಾಗಲೇ ಅದನ್ನು ಮಾಡಿ ಮುಗಿಸಿ ಮುಂದಿನದಕ್ಕೆ ಯೋಚಿಸುತ್ತಾ ಕುಳಿತಿರುತ್ತೀರಾ. ಇವೆಲ್ಲ ಹೇಗೆ ಸಾಧ್ಯವಾಗುತ್ತದೆ ನಿಮಗೆ? ನೀವು ಹೇಗೆ ಕೆಲಸ ಮಾಡುತ್ತೀರಾ? ಕೆಲಸದ ಹೊರತಾಗಿ ಹೇಗೆ ಸಮಯ ಕಳೆಯುತ್ತೀರಾ? ನಿಮ್ಮ ಖಯಾಲಿಗಳೇನು? ನಮಗೂ ಸ್ವಲ್ಪ ಹೇಳಬಾರದಾ?’ ತಕ್ಷಣ ನಾನು ನಕ್ಕು ಸುಮ್ಮನಾಗುತ್ತೇನೆ. ಆದರೆ ಅವರು ಸುಮ್ಮನೆ ಬಿಡುವುದಿಲ್ಲ. ಹೇಳಲೇಬೇಕೆಂದು ಪ್ರೀತಿಯಿಂದ ಜಗಳ ತೆಗೆಯುತ್ತಾರೆ, ಮುನಿಸಿಕೊಳ್ಳುತ್ತಾರೆ.

ನನಗೆ ಅತ್ಯಂತ ಸಂತಸವಾಗುವುದು ಯಾವಾಗ ಅಂದ್ರೆ ಆ ಹಣವನ್ನು ಚಾರಿಟಿಗೋ, ಸಮಾಜ ಕಾರ್ಯಕ್ಕೋ ದಾನ ನೀಡಿದಾಗ!

ಆಗ ನಾನು ಅವರಿಗೆ ಹೇಳುತ್ತೇನೆ- ನಿಮ್ಮಲ್ಲಿ ಏನಿದೆಯೋ ನನ್ನಲ್ಲಿ ಇರುವುದೂ ಅದೇ. ಎಲ್ಲರಲ್ಲೂ ಒಂದು ಅದಮ್ಯ ಶಕ್ತಿಯಿರುತ್ತದೆ. ಅದೇನೆಂಬುದು ನಮಗೆ ಗೊತ್ತಿರುತ್ತದೆ. ನಮ್ಮ ಶಕ್ತಿಯೇನೆಂಬುದು ನಮಗೆ ಗೊತ್ತಿಲ್ಲದಿದ್ದಾಗ ಮಾತ್ರ ಇಂಥ ಪ್ರಶ್ನೆಗಳು ಏಳುತ್ತವೆ. ನಾವೆಲ್ಲರೂ ಒಂದು ವಿಚಿತ್ರ ಕಾಯಿಲೆಯಿಂದ ನರಳುತ್ತೇವೆ. ಅದೇನೆಂದರೆ `ನನ್ನಿಂದ ಇವೆಲ್ಲ ಸಾಧ್ಯನಾ?’ ಎಂಬ ನಕಾರಾತ್ಮಕ ಪ್ರಶ್ನಾರೋಗ. `ನನ್ನಿಂದ ಸಾಧ್ಯವಿಲ್ಲವೇಕೆ? ನನ್ನಿಂದ ಇದು ಸಾಧ್ಯ!’ ಎಂದು ಕೇಳಿಕೊಂಡರೆ, ಮನವರಿಕೆ ಮಾಡಿಕೊಂಡರೆ ಎಲ್ಲವೂ ಸಲೀಸು. ಅರ್ಧ ಕೆಲಸ ಮುಗಿದಂತೆ. ಹಾಟ್‌ಏರ್ ಬಲೂನ್‌ನಲ್ಲಿ ನನಗೆ ವಿಶ್ವಪರ್ಯಟನೆ ಮಾಡಬೇಕೆಂದು ಅನಿಸಿತು. ಗೆಳೆಯರ ಮುಂದೆ ಇದನ್ನು ಹೇಳಿಕೊಂಡಾಗ ಎಲ್ಲರೂ ನಿರುತ್ಸಾಹದ ಗಾಳಿಯನ್ನೇ ಊದಿದರು. ನೂರರಲ್ಲಿ ಒಬ್ಬನೂ `ಯಸ್, ಫೆಂಟಾಸ್ಟಿಕ್, ಗೋ ಅಹೆಡ್’ ಅಂತ ಹೇಳಲಿಲ್ಲ. `ಯಾರು ಏನನ್ನು ಮಾಡಬೇಕೋ ಅದನ್ನೇ ಮಾಡಬೇಕು. ನೀನು ಹೋಗಿ ಹೋಗಿ ಹಾಟ್‌ ಏರ್ ಬಲೂನ್‌ನಲ್ಲಿ ಹಾರುತ್ತೀನಿ ಅಂತಿದೀಯಲ್ಲಾ, ನಿನಗೆ ತಲೆಕೆಟ್ಟಿದೆಯಾ? ಏನಾದರೂ ಅನಾಹುತವಾದ್ರೆ? ನಿನ್ನ ಜೀವಕ್ಕೆ ಅಪಾಯವಾದ್ರೆ?’ ಎಂದೇ ಎಲ್ಲರೂ ರಾಗ ಎಳೆದರು. ಇನ್ನು ಸಾವಿರ ಮಂದಿಯನ್ನು ಕೇಳಿದ್ದರೂ ಅವರೆಲ್ಲ ಹಾಗೇ ಹೇಳುತ್ತಿದ್ದರು. ಜೀವಕ್ಕೆ ಅಪಾಯವಾದ್ರೆ, ಸತ್ತು ಹೋದ್ರೆ ಎಂಬ ಪ್ರಶ್ನೆಯೇ ಅವರಿಗೆ ದೊಡ್ಡದಾಗಿ ಕಾಣುತ್ತಿತ್ತು.

ಈ ಪ್ರಶ್ನೆಗಳೇ ಎಲ್ಲರನ್ನೂ ಬಾಧಿಸಿದರೆ ವಿಮಾನ ಇರುತ್ತಿರಲಿಲ್ಲ, ಕ್ಷಿಪಣಿಗಳನ್ನು ಕಂಡುಹಿಡಿಯುತ್ತಿರಲಿಲ್ಲ, ಹಡಗನ್ನು ಯಾರೂ ನಿರ್ಮಿಸುತ್ತಿರಲಿಲ್ಲ, ಆಕಾಶದಿಂದ ಯಾರೂ ನೆಗೆಯುತ್ತಿರಲಿಲ್ಲ, ಆಳ ಸಮುದ್ರದ ರಹಸ್ಯ ಭೇದಿಸುತ್ತಿರಲಿಲ್ಲ, ಅಂಟಾರ್ಟಿಕಾಕ್ಕೆ ಹೋಗುತ್ತಿರಲಿಲ್ಲ, ಹಿಮಾಲಯ ಏರುತ್ತಿರಲಿಲ್ಲ, ಕಾಡಿನಲ್ಲಿ ಬೇಟೆಗೆ ಹೋಗುತ್ತಿರಲಿಲ್ಲ, ಬಹುಮಹಡಿ ಕಟ್ಟಡ ಕಟ್ಟುತ್ತಿರಲಿಲ್ಲ. ಎಲ್ಲರೂ ಮನೆಯಲ್ಲಿ ಸುಮ್ಮನೆ ಕೈಕಾಲು ಚೆಲ್ಲಿ ಕುಳಿತಿರುತ್ತಿದ್ದರು. ಸಾಹಸಕ್ಕೆ ಯಾರೂ ಮುಂದಾಗುತ್ತಿರಲಿಲ್ಲ. ಹೀಗೆ ಹೇಳುವವರನ್ನು ಕಂಡರೆ ಅವರ ತಲೆಮೇಲೆ ಹಿಡಿದು ಮೊಟಕಬೇಕು ಎಂದೆನಿಸುತ್ತಿತ್ತು. ನನ್ನಿಂದ ಏನಾದರೂ ಅಲ್ಪಸ್ವಲ್ಪ ಸಾಹಸವಾಗಿದ್ದರೆ, ಈ ನೆಗೆಟಿವ್ ಪ್ರತಿಕ್ರಿಯೆಗೆ ನನ್ನ ಪ್ರತಿಭಟನೆಯ ಸಂಕೇತವಾಗಿ ಮೂಡಿದ ಉತ್ತರ- `ನಾನು ಸಾಧಿಸಿ ತೋರಿಸುತ್ತೇನೆ ನೋಡ್ತಾ ಇರಿ. ನೀವು ರಾಂಗ್ ಎಂದು ನಾನು ಸಾಬೀತು ಮಾಡಬಲ್ಲೆ.’ ಯಾರಾದರೂ ನನ್ನ ಬಳಿ ಬಂದು `ನಿನ್ನಿಂದ ಇದು ಸಾಧ್ಯ ಇಲ್ಲ’ ಎಂದು ಹೇಳುವ ಧೈರ್ಯ ಮಾಡುವುದಿಲ್ಲ. ಹೇಳಿದ ಕ್ಷಣದಲ್ಲೇ ಸಾಧ್ಯ ಮಾಡಿ ತೋರಿಸಲು ಪಣತೊಡುತ್ತೇನೆ ಹಾಗೂ ಸಾಧ್ಯ ಮಾಡಿ ತೋರಿಸುತ್ತೇನೆ.

`ಚಂದ್ರಲೋಕಕ್ಕೆ ಹೋಗ್ತೀಯಾ’ ಅಂತ ಕೇಳಿದರೆ `ಹೂಂ, ರೆಡಿ’ ಅಂದುಬಿಡುತ್ತೇನೆ. ಈಗ ನಾನು ಚಂದ್ರಲೋಕಕ್ಕೆ ಹೋಗುವ ಎಲ್ಲ ತಯಾರಿ ಮಾಡುತ್ತಿದ್ದೇನೆ, ನಿಮಗೆ ಗೊತ್ತಿರಲಿ. ನಿಮ್ಮನ್ನು ನಿಲ್ಲಿಸುವ, ನಿಯಂತ್ರಿಸುವ ಶಕ್ತಿಯಿರುವುದು ನಿಮಗೆ ಮಾತ್ರ. ಈ ಕೆಲಸವನ್ನು ನಾವು ಬಹುತೇಕ ಸಂದರ್ಭಗಳಲ್ಲಿ ಬೇರೆಯವರಿಗೆ ಕೊಟ್ಟುಬಿಡುತ್ತೇವೆ. ಹೀಗಾಗಿ ಅವರು ನಮ್ಮನ್ನು ಆಳುತ್ತಾರೆ. ನಮ್ಮ ಸಾಮರ್ಥ್ಯ, ಶಕ್ತಿಯನ್ನು ಕುಗ್ಗಿಸಿಬಿಡುತ್ತಾರೆ. ಹಿಮಾಲಯ ಏರುವ ತನಕ ಅದೇ ದೊಡ್ಡ ಸಾಹಸವೆನಿಸುತ್ತದೆ. ಒಮ್ಮೆ ಏರಿದ ಬಳಿಕ ಅದಕ್ಕೂ ಎತ್ತರದ ಪರ್ವತವನ್ನೇರಬಹುದು ಎಂಬ ವಿಶ್ವಾಸ ಮೂಡುತ್ತದೆ. ಚಿಕ್ಕ ಬೆಟ್ಟವೇರದವನಿಗೆ ಹಿಮಾಲಯ ಕನಸಿನ ಮಾತೇ ಸರಿ. ಮೊದಲು ಮನೆಯಿಂದ ಹೊರಬಿದ್ದು ಪರ್ವತವೇರಲು ತೊಡಗಬೇಕು. ಹಿಮಾಲಯದ ತುತ್ತತುದಿಯಿಂದ ನೋಡಿದಾಗ ಜಗತ್ತು ನಮಗೆ ಬೇರೆ ರೀತಿಯಲ್ಲೇ ಕಾಣಿಸುತ್ತದೆ. ಅದನ್ನು ಮನೆಯಲ್ಲಿ ಆಲಸಿಯಾಗಿ ಬಿದ್ದುಕೊಂಡವನಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಅಂಥವರಿಗೆ ಹೇಳಲೂಬಾರದು. ಹೀಗಾಗಿ ಯಾರಾದರೂ ನನ್ನನ್ನು `ನಿಮಗೆ ಇವೆಲ್ಲ ಹೇಗೆ ಸಾಧ್ಯವಾಯಿತು?’ ಎಂದು ಕೇಳಿದರೆ ನಕ್ಕು ಸುಮ್ಮನಾಗುತ್ತೇನೆ.

ಬನ್ನಿ ನನ್ನ ಜತೆ, ತೋರಿಸುತ್ತೇನೆ ನೀವು ಅಂದುಕೊಂಡಂತೆ ಜಗತ್ತು ವಿಶಾಲವಾಗಿಲ್ಲ, ಬಹಳ ಚಿಕ್ಕದಾಗಿದೆ. ಮನೆಯಲ್ಲಿ ಕುಳಿತವನಿಗೆ ಮಾತ್ರ ಹಾಗೆ ಅನಿಸಬಹುದು. ಜಗತ್ತು ಸುತ್ತುವವನಿಗೆ ಅದು ಚಿಕ್ಕದೇ. ಸಮುದ್ರದ ತಳ ಮುಟ್ಟಿ ಬಂದವ, ಆಳವಾದ ಬಾವಿಯಲ್ಲಿ ನಡೆದು ಹೋಗುತ್ತಾನೆ ಎಂಬ ಮಾತನ್ನು ಕೇಳಿರಬಹುದು. ಮೋಡದ ಮೇಲಿಂದ ಜಿಗಿದವನಿಗೆ ಮಾತ್ರ ಹಕ್ಕಿಯ ಸ್ವಾತಂತ್ರ್ಯವೇನೆಂಬುದು ಅರ್ಥವಾದೀತು. ನೀವು ಮೇಲಿಂದ ಜಿಗಿಯುವ ತನಕ ನಿಮ್ಮ ಜೀವ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದೂ ಗೊತ್ತಾಗುವುದಿಲ್ಲ. ನನಗೆ ಪ್ರತಿಕ್ಷಣವೂ ಅದ್ಭುತವೆನಿಸುತ್ತದೆ. ಏನೂ ಮಾಡದೇ ಸುಮ್ಮನೆ ಕಳೆದರೆ ನನಗೇ ನಾನು ದ್ರೋಹ ಮಾಡಿಕೊಂಡಷ್ಟು ಬೇಸರವಾಗುತ್ತದೆ. ಆದ್ದರಿಂದ ನಾನು ಹೊಸ ಉದ್ಯಮಕ್ಕೆ ಕೈಹಾಕುತ್ತೇನೆ, ಸಾಹಸಕ್ಕೆ ಮುಂದಾಗುತ್ತೇನೆ, ಆಕಾಶದಿಂದ ಜಿಗಿಯುತ್ತೇನೆ, ಹಡಗಿನಲ್ಲಿ ಜಗತ್ತು ಸುತ್ತುತ್ತೇನೆ, ಚಂದ್ರಲೋಕದ ಕನಸು ಕಾಣುತ್ತೇನೆ. ಇದು ನನಗೊಂದೇ ಸಾಧ್ಯವಾಗುತ್ತದೆಯೆಂದು ಭಾವಿಸಿದರೆ ಅದು ತಪ್ಪು. ಇದು ಪ್ರತಿಯೊಬ್ಬರಿಂದಲೂ ಸಾಧ್ಯ. ನನಗೆ ಇರುವಂತೆ ಉಳಿದವರಿಗೂ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿದೆ. ಹಾಗೆಂದು ಇವನ್ನೆಲ್ಲ ಸಾಧಿಸಿದ ಮೊದಲ ವ್ಯಕ್ತಿ ನಾನಲ್ಲ. ನಾನೂ ಸಹ ಸಾಧನೆ ಮಾಡಿದವರಿಂದ ಪ್ರೇರಣೆ ಪಡೆದವ. ಸಾಧನೆಗೆ ಮಿತಿಯಿಲ್ಲವೆಂಬುದು ನನಗೆ ಬಹಳ ಬೇಗ ಅರಿವಾಯಿತು. ಅದೇ ಪ್ರೇರಣೆ ನನ್ನನ್ನು ಕೈಹಿಡಿದು ಮುನ್ನುಗ್ಗುವಂತೆ ಮಾಡುತ್ತಿದೆ.

ಪ್ರತಿದಿನ ಹೊಸ ಸಂಗತಿಗಳನ್ನು ತಿಳಿಯುವುದು, ಹೊಸ ಹೊಸ ಜನರನ್ನು ಭೇಟಿ ಮಾಡುವುದು, ಹೊಸತನಕ್ಕೆ ಮುಖಮಾಡುವುದು ಖುಷಿಯ ಅಂಶಗಳೇ. ಇದೇ ನನಗೆ ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯಮ ಮಾಡುವುದಕ್ಕೆ ಕಾರಣ. ಹಣ ಮಾಡುವುದೇ ಮುಖ್ಯ ಅಲ್ಲ. ಹಣ ಹೇಗಿದ್ದರೂ ಬಂದೇ ಬರುತ್ತದೆ. ಹಣ ಮಾಡುವುದನ್ನು ಮೀರಿದ ಆಕರ್ಷಣೆ ನಮ್ಮನ್ನು ಅಂಥ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ನನಗೆ ಯಾವುದು ಸಂತಸ, ನೆಮ್ಮದಿ ತಂದುಕೊಡುತ್ತದೋ ಅದನ್ನು ಎದೆಗವುಚಿಕೊಂಡು ಮಾಡುತ್ತೇನೆ. ಅದರಿಂದ ಎಷ್ಟು ಹಣ ಬರುತ್ತದೆಂಬುದು ನನಗೆ ಮುಖ್ಯವಾಗುವುದಿಲ್ಲ. ಯಾವುದೇ ಕೆಲಸವನ್ನು ಹೀಗೆ ಭಾವಿಸಿದರೆ ಅದು ವಿಫಲವಾಗಲು ಸಾಧ್ಯವೇ ಇಲ್ಲ. ಈ ಸಂಗತಿ ನನಗೆ ಎಲ್ಲ ಉದ್ಯಮವನ್ನು ಆರಂಭಿಸಿದಾಗಲೂ ಮನವರಿಕೆಯಾಗಿದೆ.

ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ

Richard Branson

 

ನಾನು ಇಲ್ಲಿ ನಿಮಗೆ ಇನ್ನೊಂದು ಸಂಗತಿಯನ್ನು ಹೇಳಬೇಕು. ನನಗೆ ಹಣ ಬಂದಾಗ ಎಲ್ಲರಿಗೂ ಆಗುವಂತೆ ನನಗೂ ಅತೀವ ಸಂತಸವಾಗುತ್ತದೆ. ಎಲ್ಲರಂತೆ ನಾನು ಸಹ ಹಣವನ್ನು ಪ್ರೀತಿಸುತ್ತೇನೆ. ಏನೇ ಆದರೂ ಹಣ ಮಾಡಿಯೇ ತೀರಬೇಕು ಎಂಬುದು ನನ್ನ ಧ್ಯೇಯ ಅಲ್ಲ. ಹಣದ ವಿಷಯದಲ್ಲಿ ನನಗೆ ಅತ್ಯಂತ ಸಂತಸವಾಗುವುದು ಯಾವಾಗ ಅಂದ್ರೆ ಅದನ್ನು ಚಾರಿಟಿಗೋ, ಸಮಾಜ ಕಾರ್ಯಕ್ಕೋ ದಾನ ನೀಡಿದಾಗ! ಅದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾದಾಗ!

ನಿಮಗೆ ಯಾರೆಂದ್ರೆ ಬಲು ಇಷ್ಟ? ವೈಯಕ್ತಿಕವಾಗಿ ಹಾಗೂ ವೃತ್ತಿಯ ದೃಷ್ಟಿಯಿಂದ ಯಾರನ್ನು ಇಷ್ಟಪಡುತ್ತೀರಿ? ಎಂದು ಅನೇಕರು ಕೇಳುತ್ತಾರೆ. ಇದಕ್ಕೆ ನನ್ನ ಉತ್ತರ ಇಷ್ಟೇ- ನಾನು ವೈಯಕ್ತಿಕವಾಗಿ ಹಾಗೂ ವೃತ್ತಿಯಿಂದಾಗಿ ಅನೇಕರನ್ನು ಹಚ್ಚಿಕೊಂಡಿದ್ದೇನೆ. ನನ್ನ ಹುಚ್ಚು, ಸಾಹಸ, ಹವ್ಯಾಸ ಹಾಗೂ ಉದ್ಯಮದ ದೆಸೆಯಿಂದ ನನಗೆ ಹೋದಲ್ಲೆಲ್ಲ ಸ್ನೇಹಿತರೇ, ವರ್ಜಿನ್ ಸಂಸ್ಥೆಯಲ್ಲಿ ಈಗ ವಿಶ್ವದಾದ್ಯಂತ 50 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಊರಿಗೆ ಹೋದರೂ ನಾನು ನಮ್ಮ ಕಚೇರಿಗೆ ಹೋಗಿ, ಸಿಬ್ಬಂದಿ ಜತೆ ಮಾತಾಡುತ್ತೇನೆ. ನನಗೆ ಅತೀವ ಸಮಾಧಾನ ಸಿಗುತ್ತದೆ. ಅವರು ನನ್ನ ವಿಸ್ತರಿತ ಬಾಹುಗಳು. ಸಂಬಳಕ್ಕಾದರೂ ನಾನು ರೂಪಿಸಿದ ಧ್ಯೇಯಕ್ಕಾಗಿ ದುಡಿಯುವವರು. ನನ್ನಲ್ಲಿ ನಂಬಿಕೆ ಹೊಂದಿರುವವರು. ಆ ಮೂಲಕ ನನ್ನ ನಂಬಿಕೆ ಸಾಕಾರಗೊಳಿಸುವವರು.

ನನ್ನ ಸಿಬ್ಬಂದಿ, ಕುಟುಂಬ ಹಾಗೂ ಸ್ನೇಹಿತರಂತೆ ನನಗೆ ಇಷ್ಟವಾಗುವವರೆಂದರೆ ಲಾಕರ್ ಏರ್‌ವೇಸ್ ಸಂಸ್ಥಾಪಕ ಫ್ರೆಡ್ಡಿ ಲಾಕರ್, 27 ವರ್ಷ ಜೈಲುವಾಸ ಅನುಭವಿಸಿದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಕಾದ ಮೊದಲ ಆಂಗ್ಲಿಕನ್ ಆರ್ಚ್‌ಬಿಶಪ್ ಡೆಸ್ಮಂಡ್ ಟುಟು, ಇಂಗ್ಲಿಷ್ ಮ್ಯೂಸಿಶಿಯನ್, ಗೀತರಚನೆಕಾರ ಹಾಗೂ ಮಾನವೀಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಪೀಟರ್ ಗೇಬ್ರಿಯಲ್, ಬಾಹ್ಯಾಕಾಶ ಕ್ಷೇತ್ರದ ಜೀನಿಯಸ್ ಬರ್ಟ್‌ರುಟಾನ್… ಹೀಗೆ ಅನೇಕರು. ನನಗೆ ಎಲ್ಲ ದೇಶಗಳಲ್ಲೂ ಗೆಳೆಯರಿದ್ದಾರೆ. ಸಾಹಸ, ಬುದ್ಧಿವಂತಿಕೆ, ಲವಲವಿಕೆ, ಮಾನವೀಯ ಸಂಬಂಧಕ್ಕೆ ಬೆಲೆ ಕೊಡುವವರು ಎಲ್ಲಿಯೇ ಇರಲಿ, ಅವರು ಹೇಗೋ ನನಗೆ ಸ್ನೇಹಿತರಾಗುತ್ತಾರೆ. ಅವರಿಂದ ನಾನು ಪ್ರಭಾವಿತನಾಗುತ್ತೇನೆ.

ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು : ರಿಚರ್ಡ್ ಬ್ರಾನ್‌ಸನ್

ನನಗೆ ಜೀವನವನ್ನು ಕಾಲುಮಡಚಿಕೊಂಡು, ಕೈಕಟ್ಟಿಕೊಂಡು ನಡೆಸುವುದರಲ್ಲಿ ನಂಬಿಕೆ ಇಲ್ಲ. ನಾನು ಕೋಟ್ಯಧೀಶನಾಗಿದ್ದೇನೆಂಬ ಅಹಂನಿಂದ ಈ ಮಾತನ್ನು ಹೇಳುತ್ತಿಲ್ಲ. 12-15 ವರ್ಷ ವಯಸ್ಸಾಗಿದ್ದಾಗಲೂ ನಾನು ಹಾಗೆಯೇ ಇದ್ದೆ. ಬದುಕು `ಕಿಂಗ್‌ಸೈಜ್’ ಆಗಿರಬೇಕು ಎಂದು ಹೇಳುತ್ತಿದ್ದೆ. ಕೆಲವರು ನನ್ನನ್ನು ನೋಡಿ ಜೋಕ್ ಮಾಡುತ್ತಿದ್ದರು. ಅದು ನನಗೆ ವಿಚಿತ್ರ ಕಿಕ್ ಕೊಡುತ್ತಿತ್ತು. ಹಾಗೆಂದು ನನ್ನ ಬಳಿ ಹಣವಿರಲಿಲ್ಲ. ಬದುಕಿದರೆ ಕಿಂಗ್‌ಸೈಜ್‌ನಲ್ಲೇ ಬದುಕಬೇಕು ಎಂದು ಪಟಾಕಿಕೊಚ್ಚುತ್ತಿದ್ದೆ.

ಪ್ರತಿಯೊಬ್ಬನಿಗೂ ತಾನು ಪಡೆಯುವ ಸಂಬಳ ತೃಪ್ತಿ ಕೊಡುವುದಿಲ್ಲ. ಇನ್ನೂ ಹೆಚ್ಚು ಹಣ ಬೇಕು. ಮನೆ ಇನ್ನಷ್ಟು ದೊಡ್ಡದಿರಬೇಕು, ಇನ್ನೂ ಒಳ್ಳೆಯ ಕಾರು ಬೇಕು ಎಂದೆಲ್ಲ ಅನಿಸುತ್ತದೆ. ಆದರೆ ಅದನ್ನು ಪಡೆಯಲು ನಾನೇನು ಮಾಡಬೇಕು, ನನ್ನ ಆಸೆಯನ್ನು ತೀರಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗುವುದಿಲ್ಲ. ಹೇಗೋ ಬದುಕನ್ನು ಸಾಗಿಸುತ್ತಾರೆ ಆದರೆ ಕನಸನ್ನು ಹಾಗೆ ಬೆಚ್ಚಗೆ ಇಟ್ಟುಕೊಂಡು ಒಳಗೊಳಗೇ ಕೊರಗುತ್ತಿರುತ್ತಾರೆ. ಕೊನೆಗೆ ಸಾಯುವಾಗ ಈ ಕೊರಗು ಕೊರಗಾಗಿಯೇ ಇರುತ್ತದೆ. ಎಷ್ಟೋ ಸಲ ಈ ಕೊರಗೇ ಅವರನ್ನು ಸಾಯಿಸುತ್ತದೆ. ನಾನು ಹೇಳೋದೇನೆಂದ್ರೆ ಜೀವನವನ್ನು ಇಡಿಯಾಗಿ ಬದುಕಿ. ಹಾಗೆ ಬದುಕುವ ಎಲ್ಲ ಸಾಧ್ಯತೆಗಳನ್ನು ಈಡೇರಿಸದೇ ಬಿಡಬೇಡಿ. ಕನಸು ಕಾಣುವುದು ತಪ್ಪಲ್ಲ. ಅದನ್ನು ಈಡೇರಿಸಿಕೊಳ್ಳದಿರುವುದು ತಪ್ಪು. ನಿಮಗೆ ನೀವು ಮೋಸ ಮಾಡಿಕೊಳ್ಳಬೇಡಿ. ಹುಸಿ ಕಾರಣ ನೀಡಿ ನಿಮಗೆ ನೀವೇ ನಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ಈ ಜಗತ್ತು ಹಣವಂತರದು ಮಾತ್ರ ಅಲ್ಲ. ಜಗತ್ತಿನ ವೈಭವಗಳನ್ನು ಸವಿಯಲು ನಿಮಗೆ ಹಣ ಬೇಕಾಗಬಹುದು. ಹಣ ಗಳಿಸದಿರುವಂತೆ ನಿಮಗೆ ನಿರ್ಬಂಧವನ್ನು ಯಾರೂ ಹಾಕುವುದಿಲ್ಲವಲ್ಲಾ?!

`ಜೀವನದಲ್ಲಿ ಹಣವೊಂದೇ ಮುಖ್ಯ ಅಲ್ಲ’ ಎಂದು ನಿಮಗೆ ನೀವು ನಂಬಿಸಿಕೊಳ್ಳುತ್ತೀರಿ. ಹಣವಂತರನ್ನು ಕಂಡು ಕರುಬುತ್ತೀರಿ. ಇಲ್ಲಿ ಹಣವನ್ನು ಸಾಧನೆಗೂ ಹೋಲಿಸಬಹುದು. ನನ್ನ ಅಪ್ಪ-ಅಮ್ಮ ನನಗಾಗಿ ವಿದ್ಯೆ, ಸಂಸ್ಕಾರ ನೀಡಿದ್ದನ್ನು ಬಿಟ್ಟರೆ ಏನನ್ನೂ ಕೊಡಲಿಲ್ಲ, ಕೂಡಿಡಲಿಲ್ಲ. ಆದರೆ ನನಗೆ ಹಣ, ಸಾಧನೆ, ಖ್ಯಾತಿ ಗಳಿಸಬೇಕೆಂಬ ತೆವಲು, ಗುಂಗು ಇತ್ತು. ಅದಕ್ಕಾಗಿ ಕಾರ್ಯತತ್ಪರನಾದೆ. ಕಟ್ಟಿದರೆ ಮಹಲನ್ನೇ ಕಟ್ಟಬೇಕು, ಇಡಿಯಾಗಿಯೇ ಬದುಕಬೇಕು ಎಂದು ಬ್ರಿಟನ್‌ನಲ್ಲಿಯೇ ಅತ್ಯಂತ ಅಪರೂಪವಾದ `ನೆಕರ್ ಐಲ್ಯಾಂಡ್’ನ್ನು ಖರೀದಿಸಿದೆ. 74 ಎಕರೆ ದ್ವೀಪವೇ ನನ್ನ ಸಾಮ್ರಾಜ್ಯ. ಈ ದ್ವೀಪವನ್ನು 175,000 ಪೌಂಡ್ ನೀಡಿ ಖರೀದಿಸಿದೆ. ಆಗ ನನಗೆ ಬರೀ 28 ವರ್ಷ! ಈ ದ್ವೀಪದಲ್ಲಿ ನನ್ನ ಅತಿಥಿಗಳಿಗಾಗಿ 28 ರೂಮುಗಳಿವೆ. ಬಾಡಿಗೆಗೂ ರೂಮುಗಳನ್ನು ನೀಡುತ್ತೇನೆ. ಒಂದು ದಿನಕ್ಕೆ 25 ಲಕ್ಷ ರೂ. ಬಾಡಿಗೆ! ನಾನು ಅನುಭವಿಸುವ ಸುಖವನ್ನು ಇತರರೂ ಅನುಭವಿಸಬಹುದು. ಮನುಷ್ಯನಿಗೆ ಬದುಕಲು ತುಂಡುಭೂಮಿ ಇದ್ರೆ ಸಾಕು, ಕೊನೆಗೂ ಬೇಕಾಗಿರುವುದು ಆರಡಿ ನಾಲ್ಕಡಿ ತಾನೆ ಎಂದು ಹೇಳುವವರ ಜತೆ ನಾನು ವಾದ ಮಾಡುವುದಿಲ್ಲ, ಅದು ವೇಸ್ಟ್ ಆಫ್ ಟೈಮ್. ನನ್ನನ್ನು ನೋಡಿ ಸಂತಸಪಡಿ, ಕರುಬಬೇಡಿ. ನನ್ನ ಹಾಗೇ ಯಾರೂ ಬೇಕಾದರೂ ಆಗಬಹುದು. ಅದೇನು ಮಹಾ ಅಲ್ಲ. ಹಾಗೆ ಅಂದುಕೊಂಡು ಮಾತ್ರ ಕಾಲಕಳೆಯಬೇಡಿ. ಸಾಧನೆಯ ಶಿಖರದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ. ಸಿಗುತ್ತೀರಿ ತಾನೆ?

ಅಷ್ಟು ಅಮೂಲ್ಯವಾದ ಕಣ್ಣೊಳಕ್ಕೆ ಕಸ ಬೀಳಬಾರದು!

Srinagar Kitty and Ravi Belagere

“ಅದು ಎಷ್ಟು?” ಕೇಳಿದೆ. ಆತ ಕೇವಲ ಬೆಲೆ ಹೇಳಲಿಲ್ಲ. ಆ ವಸ್ತುವಿನ ನಾನಾ ಮಾಡೆಲ್ ಗಳನ್ನು ತೋರಿಸಿ, ಪ್ರತಿಯೊಂದರದೂ ಬೆಲೆ ಹೇಳಿ, ಆ ಪೈಕಿ ಸರ್ವೋತ್ಕೃಷ್ಟವಾದ ಹೈ ಎಂಡ್ ಮಾಡೆಲ್ ನ ಬಗ್ಗೆ ವಿವರಣೆ ನೀಡಿ, ಇದರ ಬೆಲೆ ಇಷ್ಟು ಅಂದ. ನಾನು ಕೊಳ್ಳುವುದೇ ಆದರೆ ಸರ್ವೋತ್ಕೃಷ್ಟವಾದುದನ್ನೇ ಕೊಳ್ಳುತ್ತೇನೆ ಎಂದು ತೀರ್ಮಾನಿಸಿದ್ದೇನೆಂಬುದು ಅವನಿಗೆ ಗೊತ್ತಿತ್ತಾ? ಅದನ್ನೇ ಕೊಳ್ಳುವಂತೆ ಗಂಟುಬಿದ್ದ.

ಲೇಕಿನ್, ನಾನು ಬ್ರಾಂಡ್ ವ್ಯಸನಿಯಲ್ಲ. ನನ್ನ ಅನೇಕ ಗೆಳೆಯರು ಭಯಂಕರ ಬ್ರಾಂಡ್ ವ್ಯಸನಿಗಳು. ಬೂಟಿನೊಳಗಿನ ಸಾಕ್ಸ್ ನಿಂದ ಹಿಡಿದು, ಕೊರಳ ಸುತ್ತಲಿನ ಟೈ ತನಕ ಅವರಿಗೆ ಎಲ್ಲವೂ ಅತ್ಯಾಧುನಿಕ ಕಂಪನಿಗಳ ಬ್ರಾಂಡ್ ಗಳೇ ಆಗಬೇಕು. ದುಬಾರಿಯವೇ ಆಗಬೇಕು. ಅಂಗಿ ಪ್ಯಾಂಟಿಗಿಂತ ಹೆಚ್ಚಾಗಿ ಒಳ ಉಡುಪುಗಳ ಬ್ರಾಂಡ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಮಿತ್ರರೂ ನನಗಿದ್ದಾರೆ. ಕೇವಲ ಐದು ನೂರು ರುಪಾಯಿಯಲ್ಲಿ ಆರು ಬನೀನು ಮತ್ತು ಅದರ ‘ಪ್ರತಿಸ್ಪರ್ಧಿ’ ಉಡುಪನ್ನು ಸಲೀಸಾಗಿ ಜಯನಗರದ ಫುಟ್ ಪಾತ್ ನಿಂದ ತಂದು ‘ಈ ವರ್ಷದ ಷಾಪಿಂಗ್ ಮುಗಿಯಿತು’ ಎಂದು ಘೋಷಿಸುವ ಸಾಧ್ವೀ ಶಿರೋಮಣಿಯ ಏಕೈಕ ಗಂಡನಾದ ನಾನು ಇಂಥ ಖಯಾಲಿಗಳಿಂದ ದೂರ. ಕೇವಲ ಉಡುಪು, ವಾಚು, ಪೆನ್ನು ಇತ್ಯಾದಿಗಳ ಬಗ್ಗೆ ಅಲ್ಲ, ಕಾರು-ಬಂಗಲೆಗಳ ಬಗ್ಗೆಯೂ ನಾನು ಪರ್ಟಿಕ್ಯುಲರ್ ಅಲ್ಲ. ಆದರೆ ನನಗೆ ಒಬ್ಬ ಬೆಳೆದ ಮಗ ಮತ್ತು ಇಬ್ಬರು ಕ್ರೇಜಿ ಖಯಾಲುಗಳ ಅಳಿಯಂದಿರಿದ್ದಾರೆ. ಎಲ್ಲರೂ ಹೆಚ್ಚು ಕಡಿಮೆ ಒಂದು ವಯಸ್ಸಿನವರು. ಅವರಿಗೆ ಬ್ರಾಂಡ್ ಗಳ ಬಗ್ಗೆ ಹುಚ್ಚು ಸಹಜ. ಚಿಕ್ಕ ಅಳಿಯ ಚಿತ್ರ ನಟ.

“ಅಂಕಲ್, ಆಡಿ ಅಂತ ಹೊಸ ಕಾರು ಬಂದಿದೆ. ಅದರ ಲೇಟೆಸ್ಟ್ ಮಾಡೆಲ್ ಬಿಡುಗಡೆಯಾಗಿದೆ. ಹೆಚ್ಚೆಂದರೆ ಐವತ್ತು ಲಕ್ಷ. ನೀವು ತಗೋಬೇಕು ಅಂಕಲ್…” ಅಂತ ಮಾತಿಗಾರಂಭಿಸುತ್ತಾನೆ.

“ನೋಡು ಮಿತ್ರಾ, ನೀನು ನಟ. ಆಡಿ ಕಾರ್ ನಲ್ಲಿ ಹೋಗಿ ಇಳಿದರೆ ನಿನ್ನ ಚಿತ್ರದ ನಿರ್ಮಾಪಕ ನಿನ್ನ ರೇಟು ಹೆಚ್ಚಿಸುತ್ತಾನೆ. ನಿನ್ನ ಕೋ-ಬ್ರದರ್ ವೃತ್ತಿಯಿಂದ ಬಿಲ್ಡರ್. ಅವನು ಆಡಿ ಕಾರ್ ನಲ್ಲಿ ಹೋಗಿ ಇಳಿದರೆ ವ್ಯಾಪಾರ ಕುದುರಬಹುದು. ಆದರೆ ನಾನು ಆಡಿ ಕಾರಿನಲ್ಲಿ ಹೋದರೂ, ಲಗೇಜ್ ಗಾಡಿಯಲ್ಲಿ ಹೋದರೂ ಜನ ಗುರುತಿಸುವುದು ರವಿ ಬೆಳಗೆರೆ ಅಂತಲೇ. ಕೊಡೋದು, ಒಂದು ಸಂಚಿಕೆಗೆ ಹದಿನಾಲ್ಕೇ ರುಪಾಯಿ. ನಂಗ್ಯಾಕಪ್ಪಾ ಆಡಿ ಕಾರು?” ಎಂದು ನಗೆಯಾಡಿದ್ದೆ.

ಠೀಕ್ ಹೈ, ಬದುಕಿಗೊಂದು ಸ್ಟೈಲ್ ಇರಬೇಕು. ಆ ಮನುಷ್ಯ ಅಭಿರುಚಿಯುಳ್ಳವನು ಅಂತ ಜನ ಅಂದುಕೊಳ್ಳುವ ಹಾಗಿರಬೇಕು. ನಾವು ಆಕರ್ಷಕವಾಗಿ ಕಾಣಬೇಕು. ಅದೆಲ್ಲ ಒಪ್ಪುತ್ತೇನೆ. ಆದರೆ ನಾವು ಧರಿಸುವ ವಸ್ತುಗಳು, ಓಡಾಡುವ ಕಾರು, ವಾಸಿಸುವ ಬಂಗಲೆ – ಅಭಿರುಚಿಯೆಂದರೆ ಇಷ್ಟೇ ಅಲ್ಲವಲ್ಲ? ಅರ್ಧಕ್ಕೂ ಹೆಚ್ಚಿನ ಬದುಕನ್ನು ನಾನು ಕೊಳಗೇರಿಗಳಲ್ಲಿ, ಪುಟ್ಟಮನೆಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ ಕಳೆದಿದ್ದೇನೆ. ನನ್ನ ಆಫೀಸು ಇವತ್ತಿಗೂ ಇಟ್ಟಿಗೆ ಬಟ್ಟಿಯಂತೆ ಕಾಣುತ್ತದೆ. ನನ್ನ ಪುಸ್ತಕ, ಪತ್ರಿಕೆಗಳು ತುಂಬ ಸಾಧಾರಣ ಹಾಳೆಯಲ್ಲಿ – ಬಣ್ಣಗಳೇ ಇಲ್ಲದೆ ಪ್ರಿಂಟಾಗುತ್ತವೆ. ಸಭೆಗಳಿಗೆ ಹೊರಡುವಾಗ ಕೊಂಚ ಫಾರ್ಮಲ್ ಆಗಿ ಉಡುಪು ಧರಿಸುತ್ತೇನೆಯೇ ಹೊರತು, ಉಳಿದಂತೆ ನನ್ನ ದಿರಿಸು- ಒಂದು ಕಾಟನ್ ಷರಟು ಮತ್ತು ಟ್ರ್ಯಾಕ್ ಪ್ಯಾಂಟು. ಆದರೆ ಈ ಅಸಡ್ಡೆ, ಕಾಂಪ್ರೊಮೈಸುಗಳನ್ನು ನಾನು ಎರಡು ವಿಷಯಗಳಲ್ಲಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಮೊದಲನೆಯದು, ಓದು-ಬರಹ. ಎರಡನೆಯದು, ಆರೋಗ್ಯ.

ನಾನು ಅಪ್ಪಿತಪ್ಪಿ ಕೂಡ ನನಗೆ ಪರಿಚಯವಿಲ್ಲದ, ಆತನ ಬುದ್ಧಿವಂತಿಕೆ ಮನವರಿಕೆಯಾಗದ ಮಾಮೂಲಿ ವೈದ್ಯರಿಂದ ನನ್ನ ಆರೋಗ್ಯವನ್ನು ಒಪ್ಪಿಸುವುದಿಲ್ಲ. ಯಾರೋ ಔಷಧಿ ಅಂಗಡಿಯವನು ಕೊಡುವ ಸಲಹೆ ಮತ್ತು ಮಾತ್ರೆ ತೆಗೆದುಕೊಳ್ಳುವುದಿಲ್ಲ. ಡಾಕ್ಟರು ಎಂಥವರು ಮತ್ತು ಅವರು ಕೊಡುವ ಚಿಕಿತ್ಸೆ ಎಂಥದು ಎಂಬುದನ್ನು ಇಂಟರ್ನೆಟ್ ನಲ್ಲಿ ಚೆಕ್ ಮಾಡಿಕೊಳ್ಳುತ್ತೇನೆ. ಯಾರೋ ಹೇಳಿದರು ಅಂತ ಮನೆ ಮದ್ದು, ನಾಟಿ ವೈದ್ಯ ಮುಂತಾದವುಗಳನ್ನು ಮಾಡಿಕೊಳ್ಳುವುದಿಲ್ಲ. ಅವೆಲ್ಲ ಪರಿಣಾಮಕಾರಿಯೇ ಇರಬಹುದು. ಆದರೆ ನಾನು ಅಲೋಪತಿಯ ಹೊರತು ಮತ್ಯಾವುದೇ ಔಷಧೀಯ ಪದ್ಧತಿಯನ್ನು ನಂಬುವುದಿಲ್ಲ. ನೋ ರಿಸ್ಕ್.

ಬರಹದ ವಿಷಯಕ್ಕೆ ಬಂದರೆ, ನಾನು ತುಂಬ ಶ್ರೇಷ್ಠವಾದುದನ್ನು ಬರೆದಿದ್ದೇನೆ ಅಂತ ಭಾವಿಸುವುದಿಲ್ಲ. ಆದರೆ ಓದುಗರಿಗೆ ಅವಶ್ಯಕವಾದುದನ್ನು, ಅರ್ಥವಾಗುವುದನ್ನು ಮಾತ್ರ ಬರೆದಿದ್ದೇನೆ. ಬರೆಯುವುದು ನನ್ನ ವೃತ್ತಿಯಾದ್ದರಿಂದ, ಹಣ ಬಾರದ ಹೊರತು ನಾನು ಏನನ್ನೂ ಬರೆಯುವುದಿಲ್ಲ. ಹಾಗಂತ, ಹಣ ಬರುವುದೆಂಬ ಕಾರಣಕ್ಕೆ ಏನನ್ನಾದರೂ ಸರಿ, ಬರುಯುತ್ತೇನೆ ಎಂದು ಹೊರಡುವುದಿಲ್ಲ. ನನ್ನ ಆತ್ಮ ಸಮಾಧಾನ ಹಣಕ್ಕಿಂತ ಅಥವಾ ಅಟ್ಲೀಸ್ಟ್, ಹಣದಷ್ಟೇ ಮುಖ್ಯ.

ಇನ್ನು ಓದು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಷ್ಟೇ ಎಚ್ಚರಿಕೆಯಿಂದ ನಾವು ನಮ್ಮ ಓದನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿ ಚೂಸಿ. ಯಾರೋ ಹೆಸರಾಂತ(?) ಲೇಖಕರು ಬರೆದರು ಎಂಬ ಕಾರಣಕ್ಕೆ ಅವರು ಬರೆದುದನ್ನೆಲ್ಲ ಓದಲು ಕೂರಬೇಡಿ. ಕೆಲವರ ಶೈಲಿ ಇಷ್ಟವಾಗಬಹುದು. ಕೆಲವರ ವಾದ ಸರಿಯೆನ್ನಿಸಬಹುದು. ಆದರೆ ಅವರು ಕೊಡುವ ‘ಕಸ’ವನ್ನೆಲ್ಲ ತಲೆಗೆ ತುಂಬಿಸಿಕೊಳ್ಳಬೇಡಿ. ನಿಮಗೆ ಸಿಟ್ಟು ಬರಬಹುದು. ನಾನು ಕನ್ನಡದಲ್ಲಿ ಕಥೆ, ಕಾದಂಬರಿ ಓದುವುದನ್ನು ನಿಲ್ಲಿಸಿ ವರ್ಷಗಳೇ ಆದವು. ಆವರಣ ಕಾದಂಬರಿಯನ್ನು ಹಟಕ್ಕೆ ಬಿದ್ದು ಓದಿದೆನಾದರೂ, ಭೈರಪ್ಪನವರ ಕೊನೆಯ ಕಾದಂಬರಿ ಅಂತ ನಾನು ಓದಿದ್ದು ಸಾಕ್ಷಿ. ಲೇಖಕನಾದವನು ಒಂದು ಹಂತದಲ್ಲಿ ಬೆಳೆಯುವುದನ್ನು ನಿಲ್ಲಿಸಿ ಬಿಡುತ್ತಾನೆ. ಬರೆದದ್ದನ್ನೇ ತಿರುವಿ-ತಿರುವಿ ಬರೆಯುತ್ತಾನೆ. ಅಥವಾ ಓದುಗ, ಲೇಖಕನ ಮಟ್ಟವನ್ನು ಮೀರಿ ಬೆಳೆಯತೊಡಗುತ್ತಾನೆ. ಬಾಲ್ಯದಲ್ಲಿ ಕಣ್ಣರಳಿಸಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಇವತ್ತು ನೆನಪು ಮಾಡಿಕೊಳ್ಳಲು ಚೆಂದವೇ ಹೊರತು, ನಮ್ಮ ಓದು ಅಲ್ಲಿಗೇ ನಿಂತುಬಿಡಬಾರದು. ಲೇಖಕ ಎಷ್ಟೇ ದೊಡ್ಡವನಾದರೂ, ಏನೇ ಶ್ರೇಷ್ಠನೆನ್ನಿಸಿಕೊಂಡರೂ ಅವನನ್ನೂ ದಾಟಿ ಮುಂದಕ್ಕೆ ಹೋಗಲೇಬೇಕು. ಓದುಗ ಬೆಳೆಯುವುದೇ ಹಾಗೆ. ನೀವು ಹತ್ತು ವರ್ಷ ಕಳೆದರೂ ಅದದೇ ಸಾಹಿತ್ಯ, ಅವೇ ಲೇಖಕರು, ಅಂಥವೇ ಕಥಾವಸ್ತುಗಳನ್ನು ಓದುತ್ತಿದ್ದೀರಾ? ದಯವಿಟ್ಟು ಮುಂದಿನ ಮೆಟ್ಟಿಲು ಹತ್ತುವ ಬಗ್ಗೆ ಯೋಚಿಸಿ.

ಇಷ್ಟಾಗಿ, ಏನನ್ನು ಮತ್ತು ಯಾರನ್ನು ಓದಬೇಕು ಎಂಬ ಆಯ್ಕೆ, ನಿಮ್ಮ ಬುದ್ಧಿಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಇಂಟರ್ನೆಟ್ ಹೊಕ್ಕೆನೆಂದರೆ ಒಂದು ಕಡೆಯಿಂದ ನೂರಾರು ಪುಸ್ತಕಗಳ ಕ್ಷಿಪ್ರ ಪರಿಚಯಗಳು, ಓದುಗರ ವಿಮರ್ಶೆಗಳು, ಲೇಖಕರ ವಿವರಗಳು – ಇವನ್ನು ಓದಿಕೊಳ್ಳುತ್ತೇನೆ. ಅಷ್ಟು ತಿಳಿದುಕೊಂಡರೆ ಸಾಕು. ಆ ಪುಸ್ತಕವನ್ನು ಓದಬೇಕೋ, ಓದಬಾರದೋ ಗೊತ್ತಾಗಿ ಬಿಡುತ್ತದೆ. ಕೆಲವು ಇಂಗ್ಲಿಷ್ ಪತ್ರಿಕೆಗಳನ್ನು ಅವುಗಳಲ್ಲಿ ಪ್ರಕಟವಾಗುವ ಪುಸ್ತಕ ವಿಮರ್ಶೆಗಳಿಗಾಗಿಯೇ ತರಿಸುತ್ತೇನೆ. ಅಲ್ಲಿ ಹೊಸ ಪುಸ್ತಗಳ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ. ಕೆಲ ಬಾರಿ ಪುಸ್ತಕ ಕೈಗೆತ್ತಿಕೊಳ್ಳುತ್ತೇನಾದರೂ, ಪೂರ್ತಿ ಓದುವುದಿಲ್ಲ. ಆಯ್ದ ಅಧ್ಯಾಯಗಳನ್ನು ಓದಿ ಮುಚ್ಚಿಡುತ್ತೇನೆ. ಅದೊಂಥರಾ ವಿಸ್ತೃತವಾಗಿ ಬಿಡಿಸಿದ ಎಲೆಯಲ್ಲಿ ನಮಗೆ ಬೇಕಾದುದನ್ನಷ್ಟೇ ತಿಂದ ಹಾಗೆ. ವಿರಾಮದಲ್ಲಿ ಕುಳಿತು ಛಾನಲ್ ಬದಲಿಸಿದ ಹಾಗೆ.

ಓದಿನ ಬಗ್ಗೆ ಯಾಕಿಷ್ಟು ಚೂಸಿ ಆಗಿರಬೇಕು ಅಂದರೆ, ನಮ್ಮ ಸಮಯ ಅತ್ಯಂತ ಮುಖ್ಯವಾದುದು. ಎಷ್ಟು ವರ್ಷ ಬದುಕಿರುತ್ತೇವೆ? ವರ್ಷಕ್ಕೆ ಎಷ್ಟು ಪುಸ್ತಕ? ಎಷ್ಟು ವರ್ಷ ನಮ್ಮ ಕಣ್ಣು ಕೆಲಸ ಮಾಡುತ್ತವೆ? ಮನುಷ್ಯರ ಅಂಗಗಳ ಪೈಕಿ ಕಣ್ಣು ಅತ್ಯಂತ ಅಮೂಲ್ಯವಾದುದು. ಅಂಥ ಕಣ್ಣಿನೊಳಕ್ಕೆ ಕಸ ಬೀಳದಂತೆ ನೋಡಿಕೊಳ್ಳಬೇಕಲ್ಲವೆ?

ನಮ್ಮ ನಂತರವೂ ನಮ್ಮ ಬಗ್ಗೆ ಬದುಕು ಮಾತನಾಡುತ್ತದೆ – ಸಾವಿನ ನಂತರವೂ ಬದುಕಿರುವುದು ಯಾವುದು?

Ravi Belagere

 

ಅದೊಂದು ಚಿಕ್ಕ ಸಮಸ್ಯೆ. ನಮ್ಮ ಆಫೀಸಿನೆದುರು ನಾನೊಂದು ಸೈಟು ಖರೀದಿಸಿದೆ. ವಿಶಾಲವಾಗಿತ್ತು. ಆದರೆ ಅಲ್ಲಿ ಮನೆ ಕಟ್ಟುವಂತಿರಲಿಲ್ಲ. ಏಕೆಂದರೆ ಸೈಟು ತೀರಾ ರಸ್ತೆಗೇ ಇತ್ತು. ಅಲ್ಲದೆ ಅಷ್ಟು ದೊಡ್ಡ ಸೈಟಿನಲ್ಲಿ ಮನೆ ಕಟ್ಟುವ ಇರಾದೆ ನನಗಿರಲಿಲ್ಲ. ಹಾಗಾದರೆ ಪ್ರಿಂಟಿಂಗ್ ಪ್ರೆಸ್ ಹಾಕಿ ಅಂತ ಕೆಲವರು ಸಲಹೆ ನೀಡಿದರು. ನಾನು ಈ ಹಿಂದೆಯೇ ಪ್ರಿಂಟಿಂಗ್ ಪ್ರೆಸ್ ಹಾಕಿ ಕೈಸುಟ್ಟುಕೊಂಡವನು. ಅಲ್ಲದೆ ನನ್ನದು ವಾರಪತ್ರಿಕೆ. ತಿಂಗಳಿಗೊಂದು ಸಲ ಚೌರ ಮಾಡಿಸಿಕೊಳ್ಳುವವರ್ಯಾರಾದರೂ ಷೇವಿಂಗ್ ಸಲೂನ್ ಇಡುತ್ತಾರಾ? ಮಷೀನುಗಳ ಸಹವಾಸವೇ ಬೇಡ ಅಂತ ತೀರ್ಮಾನಿಸಿದೆ.

ಒಳ್ಳೆಯದೊಂದು ಗಾರ್ಡನ್ ರೆಸ್ಟುರಾಂಟ್ ಮಾಡು. ಪದ್ಮನಾಭನಗರದಲ್ಲಿ ಒಳ್ಳೆಯ ಹೊಟೇಲ್ ಇಲ್ಲ ಅಂತ ಕೆಲವರೆಂದರು. ಇವತ್ತಿಗೂ ನಾನು ಹೆಚ್ಚಾಗಿ ಹೊಟೇಲುಗಳಿಗೆ ಹೋಗುವವನಲ್ಲ. ಅಂಥದರಲ್ಲಿ ಹೊಟೇಲು ನಡೆಸುವುದು ನನ್ನಿಂದ ಆದೀತೆ? ಹಿಟ್ಟು ರುಬ್ಬುವವನು ರಜೆ ಹಾಕಿದರೆ ನಾನೇ ಕುಳಿತು ಹಿಟ್ಟು ರುಬ್ಬಬೇಕಾಗುತ್ತದೆ. ಅದರ ಸಹವಾಸವೇ ಬೇಡ ಅಂದುಕೊಂಡೆ. ಕಡೆಗೆ ಒಳ್ಳೆಯದೊಂದು ಛತ್ರ ಕಟ್ಟಿಸು. ಬೆಂಗಳೂರಿನಲ್ಲಿ ಛತ್ರಗಳಿಗೆ ಡಿಮ್ಯಾಂಡ್ ಇದೆ. ಪದೇ ಪದೆ ಇನ್ವೆಸ್ಟ್ ಮಾಡಬೇಕಿಲ್ಲ. ತಂತಾನೇ ಹಣ ಬರುತ್ತಿರುತ್ತದೆ ಅಂದರು. ಒಳ್ಳೆಯ ಐಡಿಯಾ ಅನ್ನಿಸಿತು. ಒಂದಷ್ಟು ಪಾತ್ರೆ, ಪಡಗ, ಕೊಳದಪ್ಪಲೆ, ಹಂಡೆ ಇಟ್ಟರೆ ಅದನ್ನೂ ಬಾಡಿಗೆಗೆ ಕೊಡಬಹುದು ಅಂದರು. ಸುತ್ತಮುತ್ತಲಿನ ಛತ್ರಗಳ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ತಂದರು. ಇನ್ನೇನು ಆರ್ಕಿಟೆಕ್ಟ್ ಗೆ ಹೇಳಿ ಒಂದು ಪ್ಲಾನ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲೇ ಒಂದು ಪ್ರಶ್ನೆ ಇದಿರಾಯಿತು.

ಯಾವತ್ತೋ ಒಂದು ದಿನ, ನಾನು ಸತ್ತ ಎಷ್ಟೋ ವರ್ಷಕ್ಕೆ ರವಿ ಬೆಳಗೆರೆ ಏನು ಮಾಡುತ್ತಿದ್ದ? ಅಂತ ಯಾರಾದರೂ ಕೇಳಿದರೆ, ಛತ್ರ ಕಟ್ಟಿಸಿ ಹಂಡೆ-ಕೊಳದಪ್ಪಲೆ ಬಾಡಿಗೆಗೆ ಕೊಡುತ್ತಿದ್ದ ಅಂತ ಉತ್ತರ ಬರುತ್ತದೆ. ಅದು ಸರಿಯಾ? ಕೇಳಿಕೊಂಡೆ. ಛತ್ರದ ಐಡಿಯಾ ಬೆಳಗ್ಗೆ ಹೊತ್ತಿಗೆ ಕಸದ ಬುಟ್ಟಿ ಸೇರಿತ್ತು. ಆಮೇಲೆ ಅದೇ ಸೈಟಿನಲ್ಲಿ ಎದ್ದು ನಿಂತಿದ್ದು ಪ್ರಾರ್ಥನಾ ಸ್ಕೂಲ್. ಇವತ್ತು ಅಂಥ ಆರು ಕಟ್ಟಡಗಳಲ್ಲಿ, ಆರು ಸಾವಿರ ಮಕ್ಕಳೊಂದಿಗೆ ಶಾಲೆ ಕಳೆ ಕಳೆಯಾಗಿ ನಡೆಯುತ್ತಿದೆ. ಅದು, ನಾನು ಸತ್ತ ಮೇಲೂ ನಡೆಯುತ್ತದೆ. ಅಂದರೇನರ್ಥ? ನೀನು ಸತ್ತ ಮೇಲೂ ಈ ಸಮಾಜ ನಿನ್ನನ್ನು ಒಬ್ಬ ಮಹಾತ್ಮನನ್ನು ನೆನಪಿಟ್ಟುಕೊಳ್ಳುವಂತೆ ನೆನಪಿಟ್ಟುಕೊಂಡಿರಬೇಕಾ? ಅಂತ ಗೆಳೆಯನೊಬ್ಬ ಕೇಳಿದ.

ಈ ಸಮಾಜ ಕೇವಲ ಮಹಾತ್ಮರನ್ನು ನೆನಪಿಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯನ ರೆಪ್ಯುಟೇಷನ್ ಎಂಬುದಿದೆಯಲ್ಲ? ಅದು ಅವನ ಸಾವಿನ ನಂತರವೂ ಜೀವಂತವಾಗಿರುತ್ತದೆ ಅಂದೆ. ಅದು ನನ್ನ ದೃಢವಾದ ನಂಬಿಕೆಯೂ ಹೌದು. ಒಳ್ಳೆಯದಷ್ಟೇ ಅಲ್ಲ; ಒಳ್ಳೆಯದಲ್ಲದ್ದೂ ಜೀವಂತವಿರುತ್ತದೆ. ಆಫ್ ಕೋರ್ಸ್, ನಮ್ಮದು ಒಂಥರಾ ಕೃತಘ್ನ ದೇಶ, ಕೃತಘ್ನ ಸಮಾಜ. ಯಾರಿಗೆ, ಯಾವುದಕ್ಕೆ, ಎಷ್ಟು ಋಣ-ಸ್ಮರಣೆ ಸಂದಾಯ ಮಾಡಬೇಕೋ ಅಷ್ಟನ್ನು ನಾವು ಮಾಡುವುದಿಲ್ಲ. ಒಬ್ಬ ಸಿನೆಮಾ ನಟ ಸತ್ತು ಹೋದರೆ ನಮ್ಮಲ್ಲಿ ಊರಿಗೆ ಊರು ಹೊತ್ತಿ ಉರಿಯುತ್ತದೆ. ಪುಡಿ ರಾಜಕಾರಣಿಗಳ ಜನ್ಮದಿನಗಳಂದು ಜಾಹಿರಾತುಗಳೊಂದಿಗೆ ಪತ್ರಿಕೆಗಳು ತುಂಬಿ ತುಳುಕುತ್ತವೆ. ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ಹಾಗೂ ಉಂಟೆ? ಹೀಗೂ ಉಂಟೆ? ಅಂತ ಟೀವಿ ಕಾರ್ಯಕ್ರಮಗಳು ನಡೆಯುತ್ತವೆ.

ಆದರೆ, ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಅಗ್ರಗಣ್ಯರಾದ ಆರ್.ಕೆ. ನಾರಾಯಣ್ ಯಾವತ್ತು ತೀರಿಕೊಂಡರು? ಯಾರಿಗೂ ನೆನಪಿಲ್ಲ. ಅಷ್ಟೇ ಖ್ಯಾತನಾಮರಾದ ಮುಲ್ಕ್ ರಾಜ್ ಆನಂದ್ ಕಡೇ ಪಕ್ಷ ಮುಂಬಯಿಯಲ್ಲಿ ತೀರಿಕೊಂಡಿದ್ದರಿಂದ ಕೊಂಚಮಟ್ಟಿಗೆ ಅದು ಸುದ್ದಿಯಾಯಿತು. ಈಗ ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್ ಅವರ ದೇಹ ಸ್ಥಿತಿ ಗಂಭೀರವಾಗಿದೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಯುತ್ತಿರುವುದು ಫುಟ್ಬಾಲ್ ಬಗ್ಗೆ.

ಮೊನ್ನೆ ತೀರಿಕೊಂಡ ಲೇಖಕ ಮನೋಹರ ಮಳಗಾಂವಕರ್ ರ ಬಗ್ಗೆಯೇ ಯೋಚಿಸಿ. ಅವರು ಇಂಗ್ಲಿಷಿನಲ್ಲಿ ಬರೆಯತೊಡಗಿದ ಮೊದಲ ಭಾರತೀಯ ತಲೆಮಾರಿನ ಲೇಖರರು. ಕೇವಲ ಕಾಲ್ಪನಿಕ ಸಾಹಿತ್ಯವನ್ನು ಅವರು ಬರೆಯಲಿಲ್ಲ. ಇತಿಹಾಸದಂತಹ ಡ್ರೈ ಸಬ್ಜೆಕ್ಟ್ ಇಟ್ಟುಕೊಂಡು ಅತ್ಯಂತ ರಸವತ್ತಾಗಿ ಬರೆದರು. ಅವರು ಬೆಳೆದದ್ದು ಇಂಗ್ಲಿಷರ ಮಧ್ಯೆ. ಇಂಗ್ಲಿಷರ ಸೈನ್ಯದಲ್ಲಿ ಅಧಿಕಾರಿಯೂ ಆಗಿದ್ದರು. ಇಂಗ್ಲಿಷರಿಂದ ಪ್ರಭಾವಿತರೂ ಆಗಿದ್ದರು. ಹೀಗಾಗಿ ಅವರು ಬರೆದದ್ದು ಭಾರತಕ್ಕಿಂತ ಹೆಚ್ಚಾಗಿ ಇಂಗ್ಲೆಂಡಿನಲ್ಲಿ ಖ್ಯಾತಿ ಪಡೆಯಿತು. ಅಲ್ಲಿಂದ ಅದು ಫ್ರಾನ್ಸ್ ಗೆ, ರೋಮ್ ಗೆ, ಇಟಲಿಗೆ, ಅಮೆರಿಕಕ್ಕೆ ಹರಡಿತು. ನಾವು ಭಾರತೀಯರು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಓದಲೂ ಇಲ್ಲ. ತಮ್ಮ ಸಾಹಿತ್ಯ ದೇಶಾನುದೇಶಗಳಲ್ಲಿ ಖ್ಯಾತಿ ಪಡೆಯುತ್ತಿದ್ದರೆ, ಮನೋಹರ ಮಳಗಾಂವಕರ್ ಅವರು ತಮ್ಮ ಪಾಡಿಗೆ ದಟ್ಟ ಕಾಡಿನ ಮಧ್ಯೆ ಬಂಗಲೆ ಕಟ್ಟಿಕೊಂಡು ಐವತ್ತು ಸುದೀರ್ಘ ವರ್ಷಗಳ ತನಕ ಋಷಿಯಂತೆ ಬದುಕಿದರು. ಬರೆದಂತೆ ಬದುಕಿದರು. ಬಹಳ ಕಾಲದ ತನಕ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರಿಂದ, ಅವರು ತೀರಿಕೊಂಡಾಗ ಆ ಪತ್ರಿಕೆ ಒಂದು ಸಂಪಾದಕೀಯ ಪ್ರಕಟಿಸಿತು. ಅಷ್ಟು ಬಿಟ್ಟರೆ, ಒಂದೇ ಒಂದು ಚಾನಲ್ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಳಗಾಂವಕರ್ ರ ಸಾವಿನ ಸುದ್ದಿ ಬಿತ್ತರಿಸಲಿಲ್ಲ. ಅಂಥ ಹಿರಿಯ ಚೇತನಕ್ಕೆ ಸರಿಯಾದ ರೀತಿಯಲ್ಲಿ ನುಡಿ ನಮನ ಸಲ್ಲಿಸಿದ್ದು ಒಂದು ವಿಜಯ ಕರ್ನಾಟಕ ಮಾತ್ರ.

ಬಿಡಿ, ಹೋದವರು ಹೋದರು. ಆದರೆ ಅವರ ಹೆಸರು, ಅವರ ಕೀರ್ತಿ, ಅಗ್ಗಳಿಕೆ, ಹೆಗ್ಗಳಿಕೆ ಅವು ಹೋಗುತ್ತವೆಯಾ? ನಾನು ಕೇವಲ ಲೇಖಕರು, ಖ್ಯಾತನಾಮರು, ರಾಜಕೀರಣಿಗಳು, ನಟರು ಮುಂತಾದವರ ಬಗ್ಗೆಯಷ್ಟೇ ಮಾತನಾಡುತ್ತಿಲ್ಲ. ರೆಪ್ಯುಟೇಷನ್ ಎಂಬುದು ಪ್ರತಿ ಮನುಷ್ಯನೂ ತನ್ನ ವರ್ಷಾಂತರಗಳ ಬದುಕಿನಲ್ಲಿ ಪ್ರಯತ್ನಪೂರ್ವಕವಾಗಿಯೋ, ಸಂಟೈಮ್ಸ್ ಅಪ್ರಯತ್ನಪೂರ್ವಕವಾಗಿಯೋ ಗಳಿಸಿಕೊಳ್ಳುತ್ತ ಹೋಗುತ್ತಾನೆ. ಅದು ಆತನೊಂದಿಗೆ ಬೆಳೆಯುತ್ತದೆ, ಇಳಿಯುತ್ತದೆ, ಕುಸಿಯುತ್ತದೆ. ಇದ್ದಕ್ಕಿದ್ದಂತೆ ಶಿಖರದ ತುದಿ ತಲುಪುತ್ತದೆ. ಒಬ್ಬ ಎಲಿಮೆಂಟರಿ ಶಾಲಾ ಶಿಕ್ಷಕ ಜೀವನ ಪರ್ಯಂತ ಮಕ್ಕಳಿಗೆ ಅದೇ ಪಾಠ ಹೇಳುಕೊಡುತ್ತಿರುತ್ತಾನೆ. ನಾಕೊಂದ್ಲ ನಾಕು ಎಂಬುದು ಬದಲಾಗುವುದೇ ಇಲ್ಲ. ಆದರೆ ಮಕ್ಕಳು ಬದಲಾಗುತ್ತಿರುತ್ತಾರೆ. ಪ್ರತಿ ವರ್ಷ, ಪ್ರತಿ ನಿತ್ಯ, ಪ್ರತಿ ಕ್ಷಣ. ಅವರೊಂದಿಗೆ ಆ ಮೇಷ್ಟು ರಿಪ್ಯುಟೇಷನ್ ಕೂಡ ಬೆಳೆಯುತ್ತ ಹೋಗುತ್ತದೆ. ಅದು ಮೇಷ್ಟ್ರು ಕಲಿಸಿದ ಪಾಠವೆಲ್ಲ ಬಳಕೆಯಾದ ನಂತರವೂ, ಮರೆತು ಹೋದ ನಂತರವೂ, ಕೆಲಸಕ್ಕೆ ಬಾರದಾದ ನಂತರವೂ ಬದುಕಿರುತ್ತದೆ. ಮೇಷ್ಟ್ರು ಎಂಬುದು ನಾನು ಕೊಟ್ಟ ಉದಾಹರಣೆಯಷ್ಟೇ. ಈ ಮಾತು ನಮಗೆಲ್ಲ ಅನ್ವಯಿಸುತ್ತದೆ.

ನಮ್ಮ ನಂತರವೂ ನಮ್ಮ ರೆಪ್ಯುಟೇಷನ್ ಜೀವಂತವಾಗಿರುತ್ತದೆ ಎಂಬ ವಿಷಯ ನಮಗೆ ಮನವರಿಕೆಯಾದರೆ ಸಾಕು. ನಾವು ಇನ್ನಷ್ಟು ಎಚ್ಚರಿಕೆಯಿಂದ ಬದುಕುತ್ತೇವೆ. ಮಾಡುವ ದಿನನಿತ್ಯದ ಕೆಲಸವನ್ನೇ ಹೆಚ್ಚಿನ ಶ್ರದ್ಧೆಯಿಂದ ಮಾಡುತ್ತೇವೆ. ಇವತ್ತಿನದಕ್ಕಿಂತ ಹೆಚ್ಚಿನದೇನನ್ನೋ ಸಾಧಿಸಲು ತೀರ್ಮಾನಿಸುತ್ತೇವೆ. ಪಡುವ ಸುಖಕ್ಕಿಂತ, ಮಾಡುವ ಸಾಧನೆಯ ಕಡೆಗೆ ಹೆಚ್ಚು ಗಮನ ವಹಿಸುತ್ತೇವೆ. ಅಯ್ಯೋ ಬಿಡು, ನಾವು ಸತ್ತ ಮೇಲೆ ಯಾರು ಏನಂದುಕೊಂಡರೇನಂತೆ? ನಮಗೇನು ಗೊತ್ತಾಗುತ್ತದಾ? ಎಂಬ ನಿಲುವು ತಳೆಯಬೇಡಿ. ನಮ್ಮ ನಂತರವೂ ನಮ್ಮ ಬದುಕು ಮಾತನಾಡುತ್ತದೆ. ಅದಕ್ಕೆ ಸುಳ್ಳು ಹೇಳಲು ಬರುವುದಿಲ್ಲ. (ಸ್ನೇಹಸೇತು : ಹಾಯ್ ಬೆಂಗಳೂರು)

Follow

Get every new post delivered to your Inbox.