Author Archives: sujankumarshetty

ಬಂಗಾರ ಗೆದ್ದವನೂ ಬಹಳ ದಿನ ನೆನಪಲ್ಲಿ ಉಳಿಯಲಾರ, ಹೀಗಾಗಿ…

ಕೆಲ ವರ್ಷಗಳ ಹಿಂದೆ ರಾಬಿನ್ ಎಸ್. ಶರ್ಮ ಎಂಬ ಆಧುನಿಕ ವ್ಯಕ್ತಿತ್ವ ವಿಕಸನ (Personality Developmentಿ) ಗುರುವನ್ನು ಭೇಟಿ ಮಾಡಿದ್ದೆ. ಭಲೇ ಲವಲವಿಕೆಯ ಮನುಷ್ಯ. ಆಪ್ತವಾಗಿ ಮಾತನಾಡುತ್ತಾನೆ. ಪುಟ್ಟ ಪುಟ್ಟ ಪ್ರಸಂಗಗಳನ್ನು ಹೇಳಿ ಗಮನ ಸೆಳೆಯುತ್ತಾನೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಚರ್ವಿತಚರ್ವಣಗಳನ್ನು ಬಡಬಡಿಸುವುದಿಲ್ಲ. ಹಳೇ ಜೋಕುಗಳನ್ನು ಹೇಳಿ ಹಿಂಸಿಸುವುದಿಲ್ಲ. ವ್ಯಕ್ತಿತ್ವ ವಿಕಸನ ಪಾಠ, ಕಾರ್ಯಾಗಾರಗಳನ್ನೇ ಕಸುಬಾಗಿ ಮಾಡಿಕೊಂಡ ಶಿವಖೇರ, ಆ್ಯಂಥೋನಿ ವಿಲಿಯೆಮ್ಸ್, ಡಾ. ಭರತಚಂದ್ರ, ಯಂಡಮೂರಿ ವೀರೇಂದ್ರನಾಥ (ಹೊಸ ಸೇರ್ಪಡೆ) ಮುಂತಾದವರೊಂದಿಗೆ ಮಾತನಾಡುವಾಗ ಸಿದ್ಧ ಪಾಶ್ಚಿಮಾತ್ಯ ಮಾದರಿಯನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರಾ ಎಂಬ ಗುಮಾನಿಯಾಗುತ್ತದೆ.

ಇದ್ದುದರಲ್ಲಿ ನಮ್ಮ ಯಂಡಮೂರಿ, ಡಾ. ಭರತ್್ಚಂದ್ರ ಪರವಾಗಿಲ್ಲ. ಪಾಶ್ಚಾತ್ಯ ನಿದರ್ಶನಗಳಿಗೆ ಹೋಲುವ ಭಾರತದ ಉದಾಹರಣೆಗಳನ್ನು ಸಾಕಷ್ಟು ಸಂಗ್ರಹಿಸಿದ್ದಾರೆ. ಫುಲ್್ಟೈಮ್ ಕಥೆ, ಕಾದಂಬರಿ ಬರೆಯುವುದನ್ನು ಬಿಟ್ಟು ಯಂಡಮೂರಿ ಈಗ ಫುಲ್್ಟೈಮ್ ವ್ಯಕ್ತಿತ್ವ ವಿಕಸನ ಗುರುವಾಗಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಅವರು ಈ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಬರೆದಿದ್ದಾರೆ. ಪರ್ಸನಾಲಿಟಿ ಡೆವಲಪ್್ಮೆಂಟ್ ಕುರಿತ ಅವರ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಈ ಪುಸ್ತಕಗಳನ್ನು ಓದುವವರಿಗೆ ‘ಕತೆಗಾರ ಯಂಡಮೂರಿ ಕಳೆದುಹೋದರಾ?’ ಎಂಬ ಬೇಸರ ಮುತ್ತಿಕೊಳ್ಳುತ್ತದೆ. ಯಂಡಮೂರಿ ‘ವ್ಯಕ್ತಿತ್ವ ವಿಕಸನ’ ಕುರಿತು ಹತ್ತಾರು ಒಳ್ಳೆಯ ಕೃತಿಗಳನ್ನು ಬರೆದಿದ್ದಾರೆ.

ವ್ಯಕ್ತಿತ್ವ ವಿಕಸನ ಗುರುಗಳ ದೊಡ್ಡ ಸಮಸ್ಯೆಯೆಂದರೆ ತಮ್ಮ ವ್ಯಕ್ತಿತ್ವವನ್ನೇ ವಿಕಸನಗೊಳಿಸಿಕೊಳ್ಳದಿರುವುದು. ಇವರ್ಯಾರ ಮಾತುಗಳನ್ನು ಎರಡನೆ ಸಲ ಕೇಳುವುದೆಂದರೆ ಕಿವಿಗೆ ಕಾದ ಸೀಸ ಹುಯ್ದಂತೆ. ಒಂದೆಡೆ ಹೇಳಿದ್ದನ್ನೇ ಎಲ್ಲ ಕಡೆ ಉಸುರುತ್ತಾರೆ. ಹದಿನೈದು ವರ್ಷಗಳ ಹಿಂದೆ ಆ್ಯಂಥೋನಿ ವಿಲಿಯಮ್ಸ್ ಎಂಬುವವರ ಕಾರ್ಯಾಗಾರ ಪ್ರವೇಶ ಉಪನ್ಯಾಸವನ್ನು ಕೇಳಿದ್ದೆ. ಮೂರು ವರ್ಷಗಳ ಹಿಂದೆ ಅದನ್ನು ಕೇಳಿದಾಗ ಅದನ್ನೇ ಬಡಬಡಿಸುತ್ತಿದ್ದರು. ಸ್ವಲ್ಪವೂ ವ್ಯತ್ಯಾಸವಿಲ್ಲ. ಎರಡನೇ ಸಲಕ್ಕೆ ಕಿವಿಗೊಟ್ಟರೆ ಇವರೆಂಥ ಖಾಲಿ ಖಾಲಿ ಎನಿಸುತ್ತದೆ. (ನಮ್ಮ ಈಶ್ವರಪ್ಪ, ಯಡಿಯೂರಪ್ಪ ಅವರೇ ವಾಸಿ ಅನಿಸುತ್ತಾರೆ.)

ನಾನು ರಾಬಿನ್ ಶರ್ಮನನ್ನು ಭೇಟಿ ಮಾಡಿದ್ದು ಮೊದಲ ಬಾರಿಯಾಗಿದ್ದರಿಂದ ಆತ ಇಷ್ಟವಾದ. ಇದು ಎರಡನೆಯ ಸಲ ಭೇಟಿಯಾಗುವ ಹೊತ್ತಿಗೆ ಏನಾಗಿರುತ್ತದೋ ಗೊತ್ತಿಲ್ಲ. ವ್ಯಕ್ತಿತ್ವ ವಿಕಸನ ಎಂಬ ಕೋರ್ಸು, ಡಿಸ್ಕೋರ್ಸುಗಳಲ್ಲಿ ಹೇರಳ ಹಣವಿದೆ. ಏನೇ ಪುಸ್ತಕ ಬರೆದರೂ ಖರ್ಚಾಗುತ್ತದೆ. ರೇಸ್ ಪುಸ್ತಕಕ್ಕಿಂತ ಬೇಗ ಮಾರಾಟವಾಗುವ ಪುಸ್ತಕಗಳೆಂದರೆ ಇವೇ! ಹೀಗಾಗಿ ವಿಚಿತ್ರ ಪುಸ್ತಕಗಳು ಬಂದಿವೆ. ಹಾಸಿಗೆ ಮೇಲೆ ಗಂಡನನ್ನು ರಮಿಸುವುದು ಹೇಗೆ? ಒಳ್ಳೆಯ ಗಂಡನಾಗುವುದು ಹೇಗೆ? ಉತ್ತಮ ತಂದೆಯಾಗುವುದು ಹೇಗೆ? ಇಲ್ಲ ಅಂತ ಹೇಳುವಾಗಲೆಲ್ಲ ಹೌದು ಅಂತ ಏಕೆನ್ನುತ್ತೀರಿ? ನಿಮ್ಮೊಳಗಿನ ನೀವು ಏಕೆ ಅಲ್ಲಿಯೇ ಇದ್ದಾನೆ? ಉತ್ತಮ ಅತ್ತೆ-ಸೊಸೆಯಾಗುವುದು ಹೇಗೆ?…ಹೀಗೆ ವಿಶಿಷ್ಟ (!) ಹಾಗೂ ಅಸಂಬದ್ಧ ಪುಸ್ತಕಗಳೆಲ್ಲ ದಂಡಿಯಾಗಿ ಮಾರಾಟವಾಗುತ್ತವೆ. (ಈ ಸಾಲಿಗೆ ನನ್ನದೂ ಎರಡು ಕೊಡುಗೆಗಳಿವೆ). ಹಾಗಂತ ನಾನು ಈ ಕೋರ್ಸ್್ಗಳನ್ನಾಗಲಿ, ಪುಸ್ತಕಗಳನ್ನಾಗಲಿ ಸಾರಾಸಗಟು ತಿರಸ್ಕರಿಸುತ್ತಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕೆಲವು ಹೊಳಹುಗಳನ್ನು ಈ ಕೃತಿಗಳು ಚಿಮ್ಮಿಸಬಲ್ಲವು. ನಮ್ಮಲ್ಲೊಂದು ಸ್ಫೂರ್ತಿಯ ಚಿಲುಮೆಯನ್ನು ಹೊತ್ತಿಸಬಲ್ಲವು. ಅಲ್ಲಿಗೆ ಅವುಗಳ ಕೆಲಸ ಮುಗಿಯಿತು. ಆ ಪ್ರೇರಣೆಯನ್ನು ರಕ್ಷಿಸಿಕೊಂಡು ಮುಂದೆ ಬೆಳೆಯುವುದಿದ್ದರೆ, ಅದೇನಿದ್ದರೂ ನಮ್ಮ ಪ್ರಯತ್ನದಿಂದಲೇ ಆಗಬೇಕು. ಇದು ವ್ಯಕ್ತಿತ್ವ ವಿಕಸನ ಪುಸ್ತಕ, ಕಾರ್ಯಾಗಾರಗಳ ಹೆಚ್ಚುಗಾರಿಕೆ ಹಾಗೂ ಮಿತಿಯೂ ಹೌದು.

ಈ ಹಿನ್ನೆಲೆಯಲ್ಲಿ ರಾಬಿನ್ ಶರ್ಮ ಭೇಟಿ ಮಾಡಿದ್ದು. ಹೀಗಾಗಿ ಮೊದಲ ಭೇಟಿಯಲ್ಲಿ ಬೆರಗಾಗುವುದಕ್ಕಿಂತ ಬರಿದಾಗಿರುವ ತುಡಿತವೇ ಹೆಚ್ಚಾಗಿತ್ತು. ನಿಮಗೆ ಗೊತ್ತಿರಬಹುದು ರಾಬಿನ್ ಶರ್ಮ The monk who sold his Ferari ಪುಸ್ತಕ ಬರೆದಾಗ ಬಹಳ ಬೇಗ ಜನಪ್ರಿಯರಾದರು. ಅದಾದ ಬಳಿಕ Family Wisdom, Mega Living, Leadership Wisdom ಬರೆದರು. ಅಷ್ಟೊತ್ತಿಗೆ ಶರ್ಮ ಎಲ್.ಎಲ್.ಬಿ., ಎಲ್.ಎಲ್.ಎಂ. ಮಾಡಿ ಕೆಲಕಾಲ ವಕೀಲರಾಗಿದ್ದರು. ಈಗ ಫುಲ್್ಟೈಮ್ ವ್ಯಕ್ತಿತ್ವ ವಿಕಸನ ಗುರು. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಶರ್ಮ Who will cry when you die?(ನೀವು ಸತ್ತಾಗ ಅಳುವವರು ಯಾರು?) ಎಂಬ ತಮ್ಮ ಕೃತಿಯನ್ನು ಕೊಟ್ಟರು. ಎರಡು ವರ್ಷಗಳಲ್ಲಿ 24 ಆವೃತ್ತಿಗಳನ್ನು ಕಂಡ ಪುಸ್ತಕವಿದು! ನಾಲ್ಕೈದು ತಾಸುಗಳಲ್ಲಿ ಓದಿಡಬಹುದಾದ 225 ಪುಟಗಳ ಕೃತಿ. ನೂರೊಂದು ಜೀವನಪಾಠಗಳನ್ನು ಶರ್ಮ ಪಟ್ಟಿ ಮಾಡಿದ್ದಾರೆ. ನಾವು ನಿತ್ಯವೂ ನಿರ್ಲಕ್ಷಿಸುವ, ಅಷ್ಟೊಂದು ಪ್ರಾಮುಖ್ಯ ಕೊಡದ ಸಂಗತಿಗಳ ಬಗ್ಗೆ ಚರ್ಚಿಸಲಾಗಿದೆ. ಕೆಲವು ಇಷ್ಟವಾದ ಪುಟ್ಟ ಪುಟ್ಟ ಹನಿಗಳನ್ನು ಇಲ್ಲಿ ಹಿಡಿದಿಟ್ಟಿದ್ದೇನೆ.

* ನಮ್ಮ ಜೀವನದಲ್ಲಿ ಸಂಭವಿಸಬಹುದಾದ ದೊಡ್ಡ ದುರಂತವೆಂದರೆ ಖಂಡಿತವಾಗಿಯೂ ಸಾವು ಅಲ್ಲ. ನಾವು ಬದುಕಿರುವಾಗ ನಮ್ಮೊಳಗಿನ ಅಂತಃಸತ್ವವನ್ನು ಸಾಯಗೊಟ್ಟಿರುತ್ತೇವಲ್ಲ, ಅದು ನಿಜವಾಗಿಯೂ ದೊಡ್ಡ ದುರಂತ.

* ಪರ್ಶಿಯನ್ ಗಾದೆ ಮಾತೊಂದನ್ನು ಕೇಳಿದ ಬಳಿಕ ನನ್ನ ಜೀವನದಲ್ಲಿ ಕೊರಗು ಎಂಬುದು ಇಲ್ಲವೇ ಇಲ್ಲ. ಅದೇನಪ್ಪಾ ಅಂದ್ರೆ- ನನಗೆ ಬೂಟುಗಳೇ ಇಲ್ಲವಲ್ಲಾ ಎಂದು ಅಳುತ್ತಿದ್ದೆ. ಅಪ್ಪನನ್ನು ಕೇಳಿದೆ. ಆತ ತೆಗೆಸಿಕೊಡಲಿಲ್ಲ. ಒಂದು ಜೊತೆ ಬೂಟು ಖರೀದಿಸಲಾಗದ ದರಿದ್ರ ಜೀವನ ಎಂದು ಬೇಸರಿಸಿಕೊಂಡೆ. ಇದು ಜೀವನವಾ ಅನಿಸಿತು. ಹಾಗೆ ಯೋಚಿಸುತ್ತಿರುವಾಗ ಎರಡೂ ಕಾಲುಗಳೇ ಇಲ್ಲದ, ಆದರೆ ಸಂತಸದಿಂದ ಇರುವ ವ್ಯಕ್ತಿಯೊಬ್ಬನನ್ನು ನೋಡಿಕೊಂಡೆ. ನಾನು ಪರಮಸುಖಿಯೆನಿಸಿತು.

* ಅಪರಿಚಿತರಾದವರಿಗೆ ಪುಟ್ಟ ಸಹಾಯ ಮಾಡಿ. ಅವರು ತಟ್ಟನೆ ನಿಮ್ಮ ಸ್ನೇಹಿತರಾಗುತ್ತಾರೆ. ಟೋಲ್್ಗೇಟ್್ನಲ್ಲಿ ನಿಮ್ಮ ಹಿಂದಿನ ಕಾರಿನವರ ಹಣವನ್ನೂ ನೀವೇ ಪಾವತಿಸಿ ನೋಡಿ. ನೀವ್ಯಾರೆಂದು ಆತ ಪರಿಚಯಿಸಿಕೊಳ್ಳದೇ ಹೋಗಲಿಕ್ಕಿಲ್ಲ. ಪುಟ್ಟ ಕಾರಣಕ್ಕೆ ನಿಮಗೊಂದು ಸ್ನೇಹ ದೊರಕಬಹುದು.

* ಹೇಳುವುದು ಸುಲಭ. ಆದರೆ ಆಚರಣೆಗೆ ತರುವುದು ಕಷ್ಟ. ಅದೇನೆಂದರೆ ಚಿಂತೆ ಬಿಡಿ ಎಂಬ ಉಪದೇಶ. ಆದರೂ ಈ ನಿಯಮ ಪಾಲಿಸಿ. ಯಾವುದಕ್ಕೆ ನಾವು ಚಿಂತಿಸುತ್ತೇವೋ ಬಹುತೇಕ ಸಂದರ್ಭಗಳಲ್ಲಿ ಅವು ಘಟಿಸುವುದೇ ಇಲ್ಲ. ಚಿಂತಿಸಿದ್ದೊಂದೇ ‘ಲಾಭ’!

* ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಕೊಡುಗೆಯೆಂದರೆ ಆಟಿಕೆಯಲ್ಲ. ಚಾಕೋಲೇಟ್ ಅಲ್ಲ. ಆದರೆ ನಿಮ್ಮ ಸಮಯ. ನಾವು ಅದೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಕೊಡುತ್ತೇವೆ. ಅಲ್ಲಿಗೆ ನಮ್ಮ ಕರ್ತವ್ಯ ಮುಗಿಯಿತೆಂದು ತಿಳಿಯುತ್ತೇವೆ. ನಿಮ್ಮ ಸಮಯಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ.

* ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ.

* ಜೀವನದಲ್ಲಿ ಸಣ್ಣ ಸಂಗತಿಗಳೇ ದೊಡ್ಡವು. ಮನೆಗೆಲಸದಾಕೆಗೆ ಸಂಬಳ ಕೊಡದವ ಕಚೇರಿಯಲ್ಲಿ ಸಿಬ್ಬಂದಿಯನ್ನೂ ಸತಾಯಿಸುತ್ತಾನೆ. ನಿಮ್ಮ ಸ್ನೇಹಿತರಿಗೆ ನೀವು ಸೈಟು, ಮನೆ ಕೊಡದಿರಬಹುದು. ಆದರೆ ಒಂದು ಪುಟ್ಟ ಕೈಗಡಿಯಾರ, ಪುಸ್ತಕ, ಪೆನ್ನು ಕೊಡದಿರುವಷ್ಟು ಯಾರೂ ಬಡವರಲ್ಲ. ಆಗಾಗ ಗಿಫ್ಟ್್ಗಳನ್ನು ಕೊಡುತ್ತೀರಿ.

* ನಿಮ್ಮ ಜೊತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ. ಎಂದಿಗೂ ನೀವು ಏಕಾಂಗಿ ಎಂದೆನಿಸುವುದಿಲ್ಲ. ಬೋರು ನಿಮ್ಮ ಸನಿಹ ಸುಳಿಯುವುದಿಲ್ಲ.

* ನೀವು ಎಷ್ಟು ದಿನ ಬದುಕಿರುತ್ತೀರೋ, ಏನಾದರೂ ಹೊಸತನ್ನು ಕಲಿಯುತ್ತಿರಿ. ನೂರು ವರ್ಷ ಬಾಳಿದರೂ ಅದೆಷ್ಟು ಕಡಿಮೆ ವರ್ಷ ಬದುಕಿನೆಂದು ನಿಮಗನಿಸುತ್ತದೆ.

* ಸಾಧ್ಯವಾದರೆ ನಿಮ್ಮ ಚಪ್ಪಲಿ, ಬೂಟು ತೆಗೆದಿಟ್ಟು ಹಸಿರು ಹುಲ್ಲಿನ ಮೇಲೆ ನಡೆಯಿರಿ. ಸ್ವಲ್ಪ ದೂರ ನಡೆಯುತ್ತಿರುವಂತೆ ನಿಮಗೆ ಹಿತವೆನಿಸುತ್ತದೆ. ಈ ಪುಟ್ಟ ಹುಲ್ಲಿನ ಗಿಡಗಳನ್ನು ನಾನು ಸಾಯಿಸುತ್ತಿದ್ದೇನಲ್ಲ ಎಂದು ನಿಮಗೆ ಬೇಸರವಾಗುತ್ತದೆ. ಈ ಬೇಸರವೇ ನಿಜವಾದ ಕಾಳಜಿ.

* ಹೂಗಳು ಗಿಡದಲ್ಲಿದ್ದರೆ ಚೆಂದ. ಅವನ್ನು ಕೊಯ್ದ ಬಳಿಕ ಗಿಡದ ಸೌಂದರ್ಯ ಕುಗ್ಗುತ್ತದೆ. ಹೂವುಗಳು ಬಾಡುತ್ತವೆ. ಪ್ರಕೃತಿಯ ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ ಬೆರಗನ್ನುಂಟು ಮಾಡಬಲ್ಲವು.

* ಕುರಿಮಂದೆಯಂತಿರುವ ಜನಜಂಗುಳಿಯನ್ನು ಎಂದಿಗೂ ಅನುಸರಿಸಿ ನಡೆಯಬೇಡಿ. ಸಿನಿಮಾದಲ್ಲಿನ ಜನಜಂಗುಳಿಯನ್ನು ಅನುಸರಿಸಿದರೆ ಊ್ಢ್ಝಡಿ(ನಿರ್ಗಮನ ಬಾಗಿಲು) ತಲುಪಿರುತ್ತೀರಿ. ಎಲ್ಲರೂ ಕೈ ಎತ್ತುವಾಗ ನಾವೂ ಕೈ ಎತ್ತುವುದು ಬಹಳ ಸುಲಭ. ಎತ್ತದಿರುವುದೇ ಕಷ್ಟ.

* ಸದಾ ಒಳ್ಳೆಯ ಕೆಲಸವನ್ನೇ ಏಕೆ ಮಾಡಬೇಕು? ಹೂವುಗಳನ್ನು ಕೊಡುವ ಕೈ ಸದಾ ಪರಿಮಳವನ್ನು ಸೂಸುತ್ತಿರುತ್ತದೆ. ಕೈಗೆ ಜೇನುತುಪ್ಪ ಅಂಟಿಕೊಂಡಿದ್ದರೆ ಯಾರೂ ಕೈ ನೆಕ್ಕದೇ ತೊಳೆದುಕೊಳ್ಳುವುದಿಲ್ಲ.

* ನಿಮ್ಮೊಂದಿಗೆ ಸದಾ ಇಬ್ಬರು ವೈದ್ಯರಿದ್ದಾರೆ. ನಿಮಗೆ ಗೊತ್ತಿಲ್ಲದಂತೆ. ಒಬ್ಬರು ಬಲಗಾಲು, ಮತ್ತೊಬ್ಬರು ಎಡಗಾಲು. ಇವರಿಬ್ಬರ ಜತೆ ನೀವು ದಿನಕ್ಕೆ ಎರಡು ಮೈಲಿ ಹೆಜ್ಜೆ ಹಾಕಿ. ರೋಗ ನಿಮ್ಮ ಹತ್ತಿರ ಸುಳಿದರೆ ನೋಡಿ.

* ನೀವೆಷ್ಟೇ ಪ್ರಸಿದ್ಧರಾಗಿ. ಅದು ಶಾಶ್ವತವಲ್ಲ. ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದ ಸ್ವಲ್ಪ ದಿನಗಳ ನಂತರ ಬಂಗಾರ ಗೆದ್ದ ಕ್ರೀಡಾಪಟುಗಳನ್ನೂ ಜನ ಮರೆಯುತ್ತಾರೆ. ಚಂದ್ರನ ಮೇಲೆ ಮೊದಲಿಗೆ ಕಾಲಿಟ್ಟವರೂ ಕೆಲ ದಿನಗಳ ಬಳಿಕ ನೇಪಥ್ಯಕ್ಕೆ ಸರಿಯುತ್ತಾರೆ. ಜನಮಾನಸದಿಂದ ದೂರವಾದ ಮಾತ್ರಕ್ಕೆ ಜೀವನ ಮುಗಿಯಿತು ಎಂದಲ್ಲ. ಅದಕ್ಕಾಗಿ ಹೊಸ ಹೊಸ ಸಾಹಸಕ್ಕೆ ನಮ್ಮನ್ನು ಅಣಿಗೊಳಿಸಿಕೊಳ್ಳಬೇಕು.

* ಸದಾ ಮನೆ, ಮಂದಿಯ, ನಿಮ್ಮ ಮಕ್ಕಳ ಹಾಗೂ ನಿಮ್ಮ ಫೋಟೋ ತೆಗೆಯುತ್ತೀರಿ. ವರ್ಷಕ್ಕೆ ಕನಿಷ್ಠ ಐದಾರು ಆಲ್ಬಮ್್ಗಳನ್ನು ಸಂಗ್ರಹಿಸಿಡಿ. 20-30 ವರ್ಷಗಳ ಬಳಿಕ ಇದೊಂದು ಅಮೂಲ್ಯ ನೆನಪುಗಳ ಆಗರವಾಗಿರುತ್ತದೆ. ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ಉತ್ತಮ ಕೊಡುಗೆಗಳಲ್ಲಿ ಸಿಹಿ ನೆನಪು ಸಹ ಒಂದು.

* ಸರಿಯಾದ ಸಮಯ, ಸಂದರ್ಭ, ವ್ಯಕ್ತಿಗಳ ಮುಂದೆ ಸಿಟ್ಟು ಮಾಡಿಕೊಳ್ಳುವುದನ್ನು ಕಲಿತರೆ ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿದ್ದೀರೆಂದೇ ಅರ್ಥ. ಸಿಟ್ಟು ಸಹ ಸುಂದರ ಹಾಗೂ ಸಾರ್ಥಕವೆನಿಸುವುದು ಆಗಲೇ.

* ವರ್ಷದಲ್ಲಿ ಒಂದು ವಾರ ಮರ, ಗಿಡ, ನದಿ, ಗುಡ್ಡ, ಬೆಟ್ಟದಲ್ಲಿ ಕಳೆಯಿರಿ. ಮನುಷ್ಯರಿಗಿಂತ ಇವು ಇಷ್ಟೊಂದು ಸುಂದರವಾಗಿವೆಯೆಂಬುದು ಗೊತ್ತಾಗುತ್ತದೆ.

* ನಿದ್ದೆ ಮಾಡಬೇಕೆನಿಸಿದಾಗ ಮತ್ತೇನನ್ನೂ ಮಾಡಬೇಡಿ. ಚೆನ್ನಾಗಿ ನಿದ್ದೆ ಮಾಡಿ. ನಿದ್ದೆಗಿಂತ ಸುಖ ಇನ್ನೊಂದಿಲ್ಲ. ಆದರೆ ಇದನ್ನು ಎಷ್ಟು ಮಾಡಬೇಕೆಂಬುದು ಗೊತ್ತಿರಲಿ.

* ಮಳೆಗಾಗಿ ಪ್ರಾರ್ಥನೆ, ಜಪ, ಯಾಗ ಮಾಡುವುದು ತಪ್ಪಲ್ಲ. ಆದರೆ ಹೀಗೆ ಮಾಡುವಾಗ ಕೈಯಲ್ಲೊಂದು ಕೊಡೆಯಿರಲಿ. ನಾವು ಮಾಡುವ ಕೆಲಸದ ಪರಿಣಾಮವೇನೆಂಬುದು ನಮಗೆ ತಿಳಿದಿರಬೇಕು.

* ಸಾಧ್ಯವಾದರೆ ಕೊಟೇಷನ್ ಸುಪ್ರಭಾತಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಇವುಗಳಲ್ಲಿರುವಷ್ಟು ಜೀವನಾಮೃತ ಬೇರೆಲ್ಲೂ ಸಿಗಲಿಕ್ಕಿಲ್ಲ. ಒಂದು ಕಾದಂಬರಿ, ಪುಸ್ತಕದ ಸತ್ವ ಸುಭಾಷಿತವೊಂದರಲ್ಲಿ ಅಡಗಿರುತ್ತದೆ.

* ನಿಮಗೆಷ್ಟೇ ಸ್ನೇಹಿತರಿರಬಹುದು. ಸಲಹೆಗಾರರಿರಬಹುದು. ಆದರೆ ನಿಮ್ಮ ಆಪ್ತ ಸ್ನೇಹಿತ, ಆಪ್ತ ಸಲಹೆಗಾರ ನೀವೇ ಎಂಬುದನ್ನು ಮರೆಯಬೇಡಿ. ನಿಮ್ಮ ವೈರಿಯೂ ನೀವೇ.

– ವಿಶ್ವೇಶ್ವರ ಭಟ್

ಕೋಪದ ಆವೇಶದಲ್ಲಿ ಕುಯ್ದುಕೊಂಡ ಮೂಗು- Short temper leads to short circuit

0723 Short Temper Leads To Short Circuit

ಸಿಟ್ಟಿನಲ್ಲಿ ಕುಯ್ದುಕೊಂಡ ಮೂಗು ಮತ್ತೆ ಜೋಡಿಸಲು ಬರುವುದಿಲ್ಲ ಎಂಬ ಗಾದೆಯನ್ನು ಮರೆತಿಲ್ಲ ತಾನೆ? ಸಿಟ್ಟು ಸೆಡವು ಬಂದಾಗ ಕೋಪದ ಆವೇಶದಲ್ಲಿ ನಾಲಗೆಯನ್ನು ಹರಿಯಬಿಡುವುದು, ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಎದುರಿಗಿದ್ದವರನ್ನು ಹೊಡೆದು ಘಾಸಿಗೊಳಿಸುವುದು, ಆನಂತರ ಅದಕ್ಕೆ ತಾವೇ ಪಶ್ಚಾತ್ತಾಪ ಪಡುವಂಥ ಪರಿಸ್ಥಿತಿ ತಂದುಕೊಳ್ಳುವವರನ್ನು ತಾವು ಕಂಡಿರಬಹುದು. ಅಂಥ ಕೋಪಿಷ್ಠರ ಸಹವಾಸ ಬೇಡಪ್ಪ ಎಂದು ದೂರ ಉಳಿದವರು ನೀವಾಗಿರಬಹುದು. ಇಂಥವರಿಗಾಗಿಯೇ ಮೂಗಿನ ಗಾದೆಯನ್ನು ಯಾರೋ ಮಹಾರಾಯರು ಕೆತ್ತಿದ್ದಾರೆ.

ಕನ್ನಡ ಸುಗಮ ಸಂಗೀತ ಕ್ಷೇತ್ರದ ದಿಗ್ಗಜಗಳ ಗಿರಿಶ್ರೇಣಿಯಲ್ಲಿ ಮೂರನೇ ಮಟ್ಟದಲ್ಲಿ ನಿಲ್ಲುವ ಗಾಯಕ ಸಿ ಅಶ್ವಥ್ ಅವರ ಹೆಸರನ್ನು ನೀವು ಕೇಳಿರಬಹುದು. ಅವರ ಹಾಡುಗಳನ್ನು ಖುದ್ದಾಗಿ ಅಥವಾ ಕ್ಯಾಸೆಟ್, ಸಿಡಿ, ಡಿವಿಡಿಗಳಲ್ಲಿ ಆಲಿಸಿರಬಹುದು. ಕಳೆದ ಡಿಸೆಂಬರ್ ನಲ್ಲಿ ಅವರು ತೀರಿಹೋದರು. ಅವರು ಎಷ್ಟು ಪ್ರಖ್ಯಾತರಾಗಿದ್ದರೆಂದರೆ ಅವರ ನಂತರ ಸುಗಮ ಸಂಗೀತಕ್ಕೆ ಯಾರು ಎಂಬ ಪ್ರಶ್ನೆಗೆ ಎಂಟು ತಿಂಗಳಾದರೂ ಉತ್ತರ ಸಿಕ್ಕಿಲ್ಲ. ಕನ್ನಡವೇ ಸತ್ಯಕ್ಕಿಂತ ಸತ್ಯವಾದ ವಿಚಾರವಿದು.

ಸುಗಮ ಸಂಗೀತ ಪ್ರಪಂಚದಲ್ಲಿ ತಲ್ಲೀನರಾಗಿರುವವರಿಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ, ಸುಗಮ ಸಂಗೀತ ಪರಿಷತ್ ಅಧ್ಯಕ್ಷರಿಗೂ ಸಿಕ್ಕಿಲ್ಲ. ಕೆಲವರು ನಾನೇ ಅಶ್ವಥ್ ಉತ್ತರಾಧಿಕಾರಿ ಎಂದು ಹೇಳಿಕೊಂಡು ಅಡ್ಡಾಡುತ್ತಿರುವುದು ನಿಜ. ಆದರೆ, ಅಂಥವರ ತರವಲ್ಲ ತೆಗಿನಿನ್ನ ತಂಬೂರಿ ಸ್ವರಗಳನ್ನು ಕನ್ನಡನಾಡಿನಲ್ಲಾಗಲೀ ವಿದೇಶದಲ್ಲಾಗಲೀ ಆಲಿಸುವವರೇ ಗತಿಯಿಲ್ಲ.

ಅಶ್ವಥ್ ಅವರು ಕೆಲವು ಬಾರಿ ಮಗುವಿನ ಥರಹ ವರ್ತಿಸುತ್ತಿದ್ದರು. ಅರೆಕ್ಷಣದಲ್ಲಿ ವಿಶ್ವಾಮಿತ್ರನ ಅಪರಾವತಾರ ತಾಳುತ್ತಿದ್ದರು. ಕ್ಷಣ ಚಿತ್ತ ಕ್ಷಣ ಪಿತ್ತ. ಮಹಾನ್ ಕಲಾವಿದ ಮತ್ತು ಮಹಾ ಕೋಪಿಷ್ಠ. ಅವರ ಬಳಿ ಒಂದು ಮಾತಾಡಿದರೆ ಕಮ್ಮಿ, ಒಂದು ಮಾತಾಡಿದರೆ ಹೆಚ್ಚು. ಮುಖವನ್ನು ಅಂಗೈಯಲ್ಲಿ ಒರೆಸುಕೊಳ್ಳುತ್ತಾ ಅವರು ಒಂದು ಸಲ ಝಾಡಿಸಿದರೆ ಅಲ್ಲಿದ್ದ ಎಲ್ಲರೂ ಜಾಗ ಖಾಲಿ ಮಾಡುವುದೊಂದೇ ಬಾಕಿ. ಕಲಾವಿದರೂ ಮನುಷ್ಯರೇ ಆಗಿರುವುದರಿಂದ ಅರಿಷಡ್ವರ್ಗಗಳ ಹಾವಳಿಯಿಂದ ಪಾರಾಗುವುದು ನೈಂಟಿನೈನ್ ಪರ್ಸೆಂಟ್ ಜನಕ್ಕೆ ಕಷ್ಟವೇ ಆಗಿರುತ್ತದೆ ಎನ್ನುವುದಕ್ಕೆ ಅವರೇ ಸಾಕ್ಷೀಭೂತರಾಗಿದ್ದರು.

ಮಾಯಾಮೃಗ, ಮುಕ್ತ ಮುಕ್ತ ಮುಕ್ತ ಮುಂತಾದ ಟಿವಿ ಧಾರಾವಾಹಿಗಳನ್ನು ತಾವು ಈ ಟಿವಿ ಛಾನಲ್ಲಿನಲ್ಲಿ ನೋಡುತ್ತಿರಬಹುದು. ನೋಡಿಲ್ಲದಿದ್ದರೆ ಅದರ ಬಗ್ಗೆ ಓದಿಯೋ, ಕೇಳಿಯೋ ನಿಮಗೆ ಗೊತ್ತಿರುತ್ತದೆ. ಆ ಧಾರಾವಾಹಿಗಳ ನಿರ್ದೇಶಕರು ಟಿ ಎನ್ ಸೀತಾರಾಂ. ಕಾನೂನು ಸುತ್ತ ಸುತ್ತುವ ಮುಕ್ತ ಮುಕ್ತ ಧಾರಾವಾಹಿಯ ಕಂತುಗಳಿಗೆ ಗ್ಲಾಮರ್ ಟಚ್ ಕೊಡುವ ಉದ್ದೇಶದಿಂದ ಧಾರಾವಾಹಿಯ ನ್ಯಾಯಾಧೀಶರ ಪಾತ್ರಕ್ಕೆ ಪ್ರತೀಬಾರಿ ಹೊಸ ಹೊಸ ಪ್ರಸಿದ್ಧ ವ್ಯಕ್ತಿಗಳನ್ನು ಆರಿಸಿ ಆರಿಸಿ ತರಲಾಗುತ್ತದೆ.

ಈ ಮಾಲಿಕೆಯಲ್ಲಿ ನ್ಯಾಯಮೂರ್ತಿಗಳಾಗಿ ಸುಧಾಮೂರ್ತಿ ಇದ್ದರು, ರವಿ ಬೆಳಗೆರೆ ಇದ್ದರು, ಸ್ವತಃ ನ್ಯಾಯಮೂರ್ತಿಗಳೇ ಆಗಿದ್ದ ಎ ಜೆ ಸದಾಶಿವ ಅವರಿದ್ದರು, ವೈಕೆ ಮುದ್ದುಕೃಷ್ಣ ಬಂದಿದ್ದರು, ಬರಗೂರು ರಾಮಚಂದ್ರಪ್ಪ ಕಾಣಿಸಿಕೊಂಡಿದ್ದರು, ಮೊನ್ನೆ ಮೊನ್ನೆಯ ಕಂತಿನಲ್ಲಿ ಋತುವಿಲಾಸದ ಕವಿ ಎಚ್ ಎಸ್ವಿ ದಯಮಾಡಿಸಿದ್ದರು. ಇವರೆಲ್ಲರ ನಡುವೆ ನಮ್ಮ ಪ್ರೀತಿಯ ಅಶ್ವಥ್ ಕೂಡ ಒಮ್ಮೆ ಆ ಪಾತ್ರಕ್ಕೆ ಜೀವ ತುಂಬಿದ್ದರು.

ಒಂದು ದಿನ ಏನಾಯಿತೆಂದರೆ ಅಶ್ವಥ್ ಪಾತ್ರ ಮಾಡಿದ ಕಂತು ಈಟಿವಿಯಲ್ಲಿ ಪ್ರಸಾರವಾದದ್ದನ್ನು ನೋಡಿದ ದಂಪತಿಗಳ ಕಣ್ಣಿಗೆ ಅಶ್ವಥ್ ಬಿದ್ದರು. ಮಹಾನ್ ಗಾಯಕನ ಮುದ್ದಾಂ ದರ್ಶನವಾದ ಪುಳಕದಲ್ಲಿ ಆ ದಂಪತಿಗಳು ಅಶ್ವಥ್ ಅವರನ್ನು ಅಭಿನಂದಿಸಲು ಬಳಿಸಾರಿದರು. ‘ಸಾರ್ ನಿನ್ನೆ ನಿಮನ್ನು ಈಟಿವಿನಲ್ಲಿ ನೋಡಿದೆ ಸಖತ್ ಆಗಿ ಆಕ್ಟ್ ಮಾಡಿದಿರಾ ಸಾರ್ ‘ ಎಂದು ಕೈಕಟ್ಟಿ ನಿಂತುಕೊಂಡು ಅಭಿನಂದನೆ ಸಲ್ಲಿಸಿದರು.

ಕೋಪ ಉಕ್ಕಿ ಹರಿಯುವುದಕ್ಕೆ ಅಶ್ವಥ್ ಅವರಿಗೆ ಅಷ್ಟೇ ಸಾಕಿತ್ತು. ‘ಏನ್ರೀ ಇದು, ಮೂವತ್ತು ವರ್ಷಗಳಿಂದ ಗಂಟಲು ಕಿತ್ಕೊಂಡು ಹಾಡುತ್ತಾ ಇದ್ದೀನಿ. ಒಂದ್ಸಲಾನಾದ್ರೂ ಬಂದು ಅಭಿನಂದಿಸಿದ್ದೀರೇನ್ರಿ? ಐದು ನಿಮಿಷ ಟಿವಿನಲ್ಲಿ ಕಾಣಿಸಿದರೆ ಕಂಗ್ರಾಟ್ಸ್ ಹೇಳ್ತೀರಲ್ರಿ ಎಂದು ಏರಿದ ದನಿಯಲ್ಲಿ ದಬಾಯಿಸಿಬಿಟ್ಟರು’

ಏನೋ ಮಾಡಲು ಹೋಗಿ ಓನೋ ಆದದ್ದಕ್ಕಾಗಿ ಬೆಕ್ಕಸ ಬೆರಗಾದ ಆ ದಂಪತಿಗಳು ಅಲ್ಲಿಂದ ಕೂಡಲೇ ಕಾಲಿಗೆ ಬುದ್ಧಿ ಹೇಳಿದವರು ಮತ್ತೆ ಆ ಕಡೆ ತಿರುಗಿ ನೋಡಲಿಲ್ಲ. ಇಂಪಾದ ಹಾಡಿನ ಗುಂಗು ಮತ್ತು ಟಿವಿಯೊಳಗೆ ಮಿಂಚಿ ಮರೆಯಾಗುವ ಕ್ಷಣಭಂಗುರದ ನಡುವಿನ ವ್ಯತ್ಯಾಸ ದಂಪತಿಗಳಿಗೆ ಬಹುಶಃ ಈ ಹೊತ್ತಿಗೆ ವೇದ್ಯವಾಗಿರಬಹುದು.

ಅಕ್ಕ-ನಾವಿಕ : ಕುಲವೊಂದು ಕವಲೆರಡು- World kannada conventions genesis usa

0721 World Kannada Conventions Genesis Usa

 

3.79 ದಶಲಕ್ಷ ಚದರ ಮೈಲಿ ವಿಸ್ತೀರ್ಣದಲ್ಲಿ ಪವಡಿಸಿರುವ ಉತ್ತರ ಅಮೆರಿಕ ಮಣ್ಣಿನಲ್ಲಿ 50 ರಾಜ್ಯಗಳಿವೆ. ದಶದಿಕ್ಕುಗಳಿಗೆ ಚಾಚಿಕೊಂಡಿರುವ ಈ ರಾಜ್ಯಗಳಲ್ಲಿ ನೆಲೆಸಿರುವ ಜಗತ್ತಿನ ಎಲ್ಲ ದೇಶ ಜನಪ್ರತಿನಿಧಿಗಳ ಒಟ್ಟು ಗಾತ್ರ, 2010 ಜುಲೈ 21ರ ಅಂಕೆ ಸಂಖ್ಯೆ ಪ್ರಕಾರ 31 ಕೋಟಿ. ಬೇರೆಬೇರೆ ದೇಶಗಳಿಂದ ವಲಸೆ ಬಂದು ಅಮೆರಿಕಾದಲ್ಲಿ ಠಿಕಾಣಿ ಹೂಡಿರುವ ಜನಾಂಗಗಳಲ್ಲಿ ಭಾರತೀಯರ ಸಂಖ್ಯೆ ಅಪಾರವಾಗಿದೆ. ಅಮೆರಿಕಾದಲ್ಲಿ ಜೀವನ ಅರಸುತ್ತಿರುವ ಅತಿಹೆಚ್ಚು ಪರದೇಶಿಗಳ ಸಾಲಿನಲ್ಲಿ ಭಾರತಕ್ಕೆ ಮೂರನೇ ಸ್ಥಾನ.

ಈ ಭಾರತೀಯರಲ್ಲಿ ಕರ್ನಾಟಕದಿಂದ ವಲಸೆಬಂದ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಕರಾರುವಾಕ್ಕಾದ ಅಂಕೆಸಂಖ್ಯೆಗಳು ಲಭ್ಯವಿಲ್ಲ. ಸುಮಾರು 60 ಸಾವಿರ ಕನ್ನಡಿಗರು ಅಮೆರಿಕದಲ್ಲಿ ಇದ್ದಾರೆ ಎಂದು ಅಕ್ಕದ ಮಾಜಿ ಸದಸ್ಯ ವಿ.ಎಂ. ಕುಮಾರಸ್ವಾಮಿಯವರು ತಮ್ಮ ಸರಣಿ ಇಮೇಲುಗಳಲ್ಲಿ ಆಗಾಗ ಬರೆಯುತ್ತಿದ್ದುದನ್ನು ಓದಿದ ನೆನಪು. ದಟ್ಸ್ ಕನ್ನಡದ ಅಂತರ್ಜಾಲ ದಾಖಲೆಗಳ ಪ್ರಕಾರ ಈ ಸಂಖ್ಯೆ ಮೂವತ್ತು ಸಾವಿರ ದಾಟಿಲ್ಲ.

ಭಾರತದಿಂದ ಅಮೆರಿಕೆಗೆ ವಲಸೆ ಹೋಗುವವರು ಖಂಡಿತವಾಗಿ ವಿದ್ಯೆ ಗಳಿಸಿದವರೇ ಆಗಿರುವುದರಿಂದ ಅವರ ಜೀವನ ಉದ್ಯೋಗಾವಕಾಶ ಮತ್ತು ವಾಣಿಜ್ಯ ಭರಿತ ಜನನಿಬಿಡ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಸಾಗುತ್ತದೆ. ಜಾರ್ಜಿಯ, ಕೆಂಟುಕಿ, ಮಿಸ್ಸಿಸಿಪ್ಪಿ ಮುಂತಾದ ಹಿಂದುಳಿದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಕನ್ನಡಿಗರು ಸಿಯಾಟಲ್ ನಿಂದ ಫ್ಲಾರಿಡಾದವರೆಗೆ, ಉತ್ತರ ಕೆರೋಲಿನಾದಿಂದ ಸ್ಯಾನ್ ಡಿಯಾಗೋವರೆಗೆ ಸುಮಾರು 40 ರಾಜ್ಯಗಳಲ್ಲಿ, ವಿವಿಧ ಸಂಖ್ಯೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.

ತಾವಿರುವ ಪ್ರದೇಶದಲ್ಲಿ ನಮ್ಮವರು ತಮ್ಮವರು ಯಾರಾದರೂ ಇದ್ದಾರಾ ಎಂದು ಈ ಕನ್ನಡಿಗರು ಹುಡುಕುತ್ತಿರುತ್ತಾರೆ. ಹತ್ತು ಕುಟುಂಬಗಳು ಜತೆಯಾದರೆ ಸಾಕು. ಅವೆರೆಲ್ಲ ಜತೆಗೂಡಿ ಒಂದು ಕನ್ನಡ ಸಂಘವನ್ನು ಕಟ್ಟಿಕೊಳ್ಳುತ್ತಾರೆ. ಅವುಗಳಿಗೆ ಪಂಪ, ಶ್ರೀಗಂಧ, ಕಸ್ತೂರಿ, ಮಲ್ಲಿಗೆ, ಕಾವೇರಿ, ಬೃಂದಾವನ, ವಿದ್ಯಾರಣ್ಯ, ಸಹ್ಯಾದ್ರಿ ಮುಂತಾದ ಕರ್ನಾಟಕ ಸ್ಮರಣೆಯ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಂಘದ ಆಶ್ರಯದಲ್ಲಿ ವರ್ಷಕ್ಕೆ ಮೂರೋ ನಾಲಕ್ಕೋ ಕರ್ನಾಟಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಕನ್ನಡ ಜನರ ಈ ಪರಿಯ ಪ್ರಾದೇಶಿಕ ಸಂಘಗಳು ಅಮೆರಿಕೆಯಲ್ಲಿ ಮೂವತ್ತೇಳಿವೆ.

ಎಲ್ಲಾ ರಾಜ್ಯಗಳ ಎಲ್ಲಾ ಸಂಘಗಳ ಸದಸ್ಯರು ಒಟ್ಟಾಗಿ ಕಲೆತು ಸಂಭ್ರಮಿಸುವಂಥ ಒಂದು ವೇದಿಕೆಯ ಕಲ್ಪನೆ ಮೈದಾಳಿದ್ದು ಹನ್ನೆರಡು ವರ್ಷಗಳ ಹಿಂದೆ. ಅಮೆರಿಕಾದ ಎಲ್ಲ ಕನ್ನಡಿಗರನ್ನೂ ಕಲೆಹಾಕಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಸಬೇಕೆಂಬ ಆಲೋಚನೆ ಮೂಡಿದುದು ಮರಳುಗಾಡಿನ ನಗರ ಫೀನಿಕ್ಸಿನಲ್ಲಿ (1998). ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಅಮೆರಿಕ ವಿಶ್ವ ಕನ್ನಡ ಸಮ್ಮೇಳನದ ಪದಗುಚ್ಛದ ಬೀಜಗಳು ಮೊಳಕೆ ಒಡೆದದ್ದು ಅಲ್ಲೇ.

ಅಲ್ಲಿಂದೀಚೆಗೆ ಅಮೆರಿಕನ್ನಡಿಗರು ಆಯೋಜಿಸುವ ಒಟ್ಟು ಆರು ಸಮ್ಮೇಳನಗಳು ಆಗಿಹೋಗಿವೆ. ಎರಡು ವರ್ಷದ ಹೆಣ್ಣುಕೂಸು ನಾವಿಕ ವತಿಯಿಂದ ಒಂದು, ಎಂಟು ವರ್ಷದ ಹುಡುಗ ಅಕ್ಕ ವತಿಯಿಂದ ಐದು. ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ. ವಿಶಾಲ ಅಮೆರಿಕದಲ್ಲಿ ಕಾರ್ಯೋನ್ಮುಖವಾಗಿರುವ ಈ ಎರಡೂ ಕನ್ನಡ ಸಂಸ್ಥೆಗಳ ಧ್ಯೇಯ ಮತ್ತು ಉದ್ದೇಶ ವಿಶಾಲ ತಳಹದಿಯಲ್ಲಿ ಒಂದೇ ಆಗಿರಬೇಕೆಂದು ಬಹು ಸಂಖ್ಯಾತ ಕನ್ನಡಿಗರು ಅಪೇಕ್ಷೆ ಪಡುತ್ತಾರೆ. ಅವು ಸ್ಥೂಲವಾಗಿ ಹೀಗಿವೆ:

ಅಮೆರಿಕಾದಲ್ಲಿ ಕರ್ನಾಟಕ ಪರಿವಾರದ ರಾಜಕೀಯೇತರ ಸಂಘಟನೆ, ಕನ್ನಡಿಗರ ಸಮ್ಮಿಲನಗಳು, ಕರ್ನಾಟಕದೊಂದಿಗೆ ನಿರಂತರ ಬೆಸುಗೆ, ತಾಯ್ನಾಡಿನೊಂದಿಗೆ ಅರ್ಥಪೂರ್ಣ ವಾಣಿಜ್ಯ, ಭಾವನಾತ್ಮಕ ಸಾಂಸ್ಕೃತಿಕ ಬಾಂಧವ್ಯ ವೃದ್ಧಿ. ಈ ಉದ್ದೇಶಗಳನ್ನು ಸಾಧಿಸಲು ಎರಡು ಸಂಘಟನೆಗಳು ಬೇಕಿತ್ತೇ ಎಂಬ ಪ್ರಶ್ನೆ ಕೇಳುವ ಕಾಲ ಮಿಂಚಿಹೋಗಿದೆ. ಅಮೆರಿಕ ಕನ್ನಡಿಗರ ಹೊಲಗಳಲ್ಲಿ ಅಕ್ಕ ಮತ್ತು ನಾವಿಕ ಸಂಸ್ಥೆಗಳು ಜೋಡೆತ್ತಿನ ಬೇಸಾಯ ಮಾಡುವ ಕಾಲಘಟ್ಟ ಸನ್ನಿಹಿತವಾಗಿರುವುದು ಸ್ಪಷ್ಟವಾಗಿದೆ.

ನಾನು ನಾನು ನಾನು ನಾನು ನಾನು ನಾನು- Kannada people who suffer from i trouble

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾಯಿಲೆ ಇದ್ದೇ ಇರುತ್ತದೆ. ಸದ್ಯಕ್ಕೆ ಇಲ್ಲದಿದ್ದರೆ ಆಮೇಲೆ ಯಾವಾಗಲಾದರೂ ಬಂದೇ ಬರುತ್ತದೆ. ಮಾನವನಾಗಿ ಜನ್ಮವೆತ್ತಿದರೆ ಕಾಯಿಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಆ ಬ್ರಹ್ಮನಿಂದಲೂ ಸಾಧ್ಯವಾಗುವುದಿಲ್ಲ. ಏನಿಲ್ಲವೆಂದರೂ ಕನಿಷ್ಠ ಶೀತ ಕೆಮ್ಮು ನೆಗಡಿಗೆ ತುತ್ತಾಗದ ಮನುಷ್ಯ ಪ್ರಾಣಿ ಭೂಮಿ ಮೇಲೆ ಕಾಣಸಿಗುವುದಿಲ್ಲ.

ಕಾಯಿಲೆಗಳಿಲ್ಲದ ಮನುಷ್ಯ ಬಹುಶಃ ದೇವರೇ ಇರಬೇಕು ಎನ್ನುವುದು ನನ್ನ ಅನುಮಾನ ಮತ್ತು ಅಸಮಾಧಾನ. ದೇವಾಧಿದೇವತೆಗಳಿಗೂ ಕಾಯಿಲೆ ಕಸಾಲೆ ಬರುತ್ತಿದ್ದವೇ? ಅವರೂ ಕ್ರೋಸಿನ್ ಗುಳಿಗೆ ನುಂಗಿ ಬೆನಡ್ರಿಲ್ ಸಿರಪ್ಪು ಕುಡಿಯುತ್ತಿದ್ದರೇ? ಅಮೃತಪ್ರಾಶನ ಮಾಡಿದವರ ಬಳಿ ಕಾಯಿಲೆಗಳು ಸುಳಿಯುವುದೇ ಇಲ್ಲವೇ? ವೇದ ಉಪನಿಷತ್ತು ಪುರಾಣ ಪುಣ್ಯ ಕಥೆಗಳನ್ನು ಓದಿಕೊಂಡವರೇ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕು. ಬಹುಶಃ ಬನ್ನಂಜೆ ಗೋವಿಂದಾಚಾರ್ಯರೋ ಅಥವಾ ಪ್ರಭಂಜನಾಚಾರ್ಯರೋ ಅಥವಾ ಸುಬ್ಬರಾಯಶರ್ಮರೋ ಇದಕ್ಕೆ ಉತ್ತರಿಸಬೇಕು.

ಸೂರ್ಯ ನಮಸ್ಕಾರ ಮಾಡುವುದು, ನಿತ್ಯ ಸೈಕಲ್ ಹೊಡೆಯುವುದು, ಜಿಮ್ಮಿಗೆ ಹೋಗುವುದು, ಇವ್ಯಾವೂ ಆಗದಿದ್ದರೆ ಮಿನಿಮಮ್ ವಾಕಿಂಗ್ ಮಾಡಿ ಒಳ್ಳೆ ಆರೋಗ್ಯ ಕಾಪಾಡಿಕೊಂಡು ಬರುವಂಥವರನ್ನು ಕೂಡ ಕನಿಷ್ಠ ದಂತಕ್ಷಯವಾದರೂ ಕಾಡೇಕಾಡುತ್ತದೆ. ಕೀಲು ನೋವು, ತಲೆನೋವು, ಹೊಟ್ಟೆನೋವು, ಸೊಂಟ ನೋವು ಮುಂತಾದ ಚಿಲ್ಲರೆಪಲ್ಲರೆ ಕಾಯಿಲೆಗಳನ್ನು ಬಿಡಿ. ಇಡೀ ಮನುಷ್ಯ ಪ್ರಬೇಧವನ್ನೇ ಹೊಸಕಿಹಾಕುವಂಥ ಭಯಾನಕ ಕಾಯಿಲೆಗಳು ನಾಗರೀಕತೆಯ ಪ್ರಯಾಣದಲ್ಲಿ ಬಂದು ಹೋಗಿವೆ.

ವೈದ್ಯಕೀಯ ಕ್ಷೇತ್ರಗಳಲ್ಲಿ ಅವ್ಯಾಹತವಾಗಿ ನಡೆಯುವ ಸಂಶೋಧನೆಗಳ ಫಲದಿಂದಾಗಿ ಪ್ಲೇಗು, ಮಲೇರಿಯಾ ಮುಂತಾದ ಸಮುದಾಯ ಕಾಯಿಲೆಗಳು ಅದೃಷ್ಟವಶಾತ್ ಕಡಿಮೆ ಆಗಿವೆ. ಸದ್ಯ ಮಾನವನು ಎಚ್ಐವಿ, ಎಚ್ 1ಎನ್ 1, ಕ್ಯಾನ್ಸರ್, ಸ್ತನಪರ್ವತ ಮುಂತಾದ ರೋಗರುಜಿನಗಳಿಗೆ ಔಷಧಿ ಕಂಡುಹಿಡಿಯುತ್ತಿದ್ದಾನೆ.

ವೈದ್ಯಕೀಯ ತಜ್ಞರು ಭಯಂಕರವಾದ ಯಾವುದೇ ಕಾಯಿಲೆಗೆ ಔಷಧಿ ಕಂಡುಹಿಡಿಯಬಹುದು. ಆದರೆ ಒಂದು ಕಾಯಿಲೆಗೆ ಮಾತ್ರ ಔಷಧಿಯೇ ಇಲ್ಲ ಎನ್ನುವುದು ನನ್ನ ಪ್ರಬಲ ನಂಬಿಕೆಯಾಗಿದೆ. ಈ ಕಾಯಿಲೆಯ ಹೆಸರು ನಾನು ನಾನು ನಾನು ನಾನು. ನಮ್ಮಲ್ಲಿ ಅನೇಕರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾವೂ ನೀವು ಏನು ಮಾಡುವುದಕ್ಕೆ ಆಗುತ್ತದೆ? ನಿಮಗಂತೂ ಈ ಕಾಯಿಲೆ ಬಂದಿಲ್ಲ ಮತ್ತು ಬರುವುದೂ ಇಲ್ಲ ಎಂಬ ಆತ್ಮವಿಶ್ವಾಸವನ್ನು ನಾನು ಇಟ್ಟುಕೊಂಡಿದ್ದೇನೆ. ಇದೇ ವೇಳೆ ‘ನಾನು’ ಕಾಯಿಲೆಯಿಂದ ಬಳಲುತ್ತಿರುವ ಒಬ್ಬ ಕನ್ನಡಿಗನ ಬಗ್ಗೆ ನಿಮಗೆ ಹೇಳುವುದು ಬಾಕಿಯಿದೆ.

ಈ ವ್ಯಕ್ತಿ ಸಾಮಾನ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ ತೋರಿಸುತ್ತಾನೆ. ಏನೋ ಒಂದು ದಾಕ್ಷಿಣ್ಯಕ್ಕಾಗಿ ಆಮಂತ್ರಣ ಪತ್ರಿಕೆ ಕಳಿಸಿದರೆ ಜುಬ್ಬ ಹಾಕಿಕೊಂಡು ತಪ್ಪದೆ ಬಂದುಬಿಡುತ್ತಾನೆ. ಸುಮ್ಮನೆ ಬಂದು ಹೋಗಬಾರದೇ? ಇಲ್ಲ. ದೇವರಾಣೆ ಅವನಿಂದ ಸಾಧ್ಯವಾಗುವುದಿಲ್ಲ. ಕಾರ್ಯಕ್ರಮ ವ್ಯವಸ್ಥೆಯಲ್ಲಿ ತನ್ನ ಮೂಗು ತೂರಿಸದೇ ಇರುವುದಿಲ್ಲ. ಅಷ್ಟೇ ಅಲ್ಲ. ಕಾರ್ಯಕ್ರಮ ಮುಗಿದ ನಂತರ ತಾನು ಆ ಕಾರ್ಯಕ್ರಮಕ್ಕೆ ಹೋಗಿದುದ್ದಾಗಿಯೂ, ಎಲ್ಲಾ ಅರೇಂಜುಮೆಂಟುಗಳನ್ನು ತಾನೇ ಮಾಡಿದುದಾಗಿಯೂ ಮತ್ತು ಅದರಿಂದಲೇ ಕಾರ್ಯಕ್ರಮ ಸಾಂಗವಾಗಿ ನಡೆಯಿತೆಂದೂ ಡಂಗುರ ಸಾರುತ್ತಾನೆ.

ಮೊದಮೊದಲು ಜನ ಅವನ ‘ನಾನು’ ನ್ಯಾನೋ ಕತೆಗಳನ್ನು ನಂಬುತ್ತಿದ್ದರು. ಆದರೆ ಇವತ್ತು ಪರಿಸ್ಥಿತಿ ಏನಾಗಿದೆಯೆಂದರೆ ಸ್ವತಃ ಅವರ ಖಾಸಾ ಖಾಸಾ ಬಳಗವೇ ಅವನನ್ನು ನಂಬುವುದಿಲ್ಲ. ಈ ಕಡೆ ಇದ್ದ ಕುರ್ಚಿಯನ್ನು ಆ ಕಡೆ ಎಳೆದಿಟ್ಟು ಅದರ ಮೇಲೆ ತಾನೇ ಕುಕ್ಕರಿಸಿಕೊಳ್ಳುವುದು ಬಿಟ್ಟರೆ ಬೇರಾವ ಕೆಲಸಗಳನ್ನು ಅವನು ಮಾಡಲಾರನು. ಆದರೂ ನಾನು ಮಾಡಿದೆ, ನನ್ನಿಂದಲೇ ಆಯಿತು, ನಾನು ಇದ್ದೆ, ನಾನು ನೋಡಿದೆ, ನಾನು ತಂದೆ, ನಾನು ಕಂಡೆ, ನಾನು ನಾನು ನಾನು ನಾನು. ಸ್ವಾಗತಕ್ಕೂ ನಾನು, ವಂದನಾರ್ಪಣೆಗೂ ನಾನು.

‘ನಾನು’ ಕಾಯಿಲೆ ಈಗ ಕೈಮೀರಿ ಹೋಗಿರುವುದರಿಂದ ಜನರು ಅವನನ್ನು ತುಂಬ ಕರುಣೆ ತುಂಬಿದ ಕಣ್ಣುಗಳಿಂದ ನೋಡುತ್ತಾರೆ. ಹಳೆಯ ಸ್ನೇಹಿತನಲ್ಲವೇ ಪಾಪ! ಎಂಬ ಗೌರವದಿಂದ ಖಾಸಗಿಯದ್ದಾಗಲೀ ಅಥವಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳೇ ಆಗಿರಲಿ ಅವನಿಗೊಂದು ಆಮಂತ್ರಣ ಪತ್ರಿಕೆಯನ್ನು ಮರೆಯದೆ ಎಸೆಯುತ್ತಾರೆ, ನಾಮಕರಣ ಕಾರ್ಯಕ್ರಮವೊಂದನ್ನು ಬಿಟ್ಟು.

ದಿನಕ್ಕೆ 20 ಸಿಗರೇಟು ಸೇದುವ 2 ವರ್ಷದ ಹುಡ್ಗ- Two year old addicted to smoking

0528 Two Year Old Addicted To Smoking

ಸಿಗರೇಟು, ಬೀಡಿ, ತಂಬಾಕು ಪುಡಿ, ಗುಟ್ಕಾ, ಸಿಗಾರ್, ಪಾನ್ ಪರಾಗ್ ಮುಂತಾದ ತಂಬಾಕು ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಪದಾರ್ಥಗಳನ್ನು ಸೇವಿಸುವುದರಿಂದ ತಲೆದೋರುವ ನಾನಾ ರೋಗಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಮಂದಿ ನಿತ್ಯ ಸಾವನ್ನಪ್ಪುತ್ತಿದ್ದಾರೆ. ನೀವು ಸೇದಬೇಡಿ. ಸೇದುವ ಚಟ ಇದ್ದರೆ ಇವತ್ತೇ ಬಿಟ್ಟುಬಿಡಿ.

ಹಾಗಂತ ಹಿತನುಡಿಯುವ ಮಾತುಗಳು, ಉದ್ದುದ್ದ ಲೇಖನಗಳ ಜತೆಗೆ ಹಿತೈಷಿಗಳು, ಸ್ನೇಹಿತರು, ಮನೆಯವರು, ವೈದ್ಯರು ಹಾಗೂ ಎಂದೂ ಸಿಗರೇಟುಗಳನ್ನೇ ಸೇದದವರು ಧೂಮಪಾನದ ಕೆಟ್ಟ ಪರಿಣಾಮಗಳ ಬಗ್ಗೆ ಬುದ್ದಿವಾದ ಹೇಳುತ್ತಲೇ ಇರುತ್ತಾರೆ. ತಂಬಾಕು ಚಟಕ್ಕೆ ಅಂಟಿಕೊಂಡವರಿಗೆ ಮಾತ್ರ ಈ ಯಾವ ಹಿತವಾದ ಮಾತುಗಳೂ ಕೇಳಿಸುವುದಿಲ್ಲ. ಕೇಳಿಸಿದರೂ ಹೊಗೆಯನ್ನು ಬಾಯಲ್ಲಿ ಎಳೆದುಕೊಂಡು ಮೂಗಿನಿಂದ ಹೊರಬಿಡುತ್ತಾರೆ.

ಡಿಗ್ರಿ ಪಾಸಾಗಿ ಕೆಲಸಕ್ಕೆ ಸೇರಿದನಂತರ ಸ್ವಂತ ಸಂಪಾದನೆ ಹಣದ ಮೇಲೆ ಸಿಗರೇಟನ್ನೋ ಬೀಡಿಯನ್ನೋ ಸೇದುವ ಚಟಕ್ಕೆ ಒಗ್ಗಿಕೊಳ್ಳುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ನಾಲಕ್ಕನೇ ತರಗತಿವರೆಗೆ ಓದಿ ಶಾಲೆಬಿಟ್ಟು ಗ್ಯಾರೇಜಿನಲ್ಲಿ ಹೆಲ್ಪರ್ ಆಗಿ ದುಡಿಯುವ ಹುಡುಗ ಹತ್ತನೇ ವರ್ಷಕ್ಕೆ ಬೀಡಿ ಸೇದಲು ಆರಂಭಿಸುತ್ತಾನೆ. ಹಳ್ಳಿಯಲ್ಲಿ ಹೈಸ್ಕೂಲು ಇಲ್ಲ ಎಂದು ದೊಡ್ಡ ಊರಿಗೆ ಹೋಗಿ ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸುವ ಹುಡುಗ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಲ್ ಟಿಕೇಟ್ ಪಡೆಯುವ ಮೂರು ವರ್ಷಕ್ಕೆ ಮುಂಚೆ ಸಿಗರೇಟು ರುಚಿ ಕಂಡಿರುತ್ತಾನೆ.

ವ್ಯಸನಗಳು ಯಾವುದೋ ಒಂದು ಗಳಿಗೆಯಲ್ಲಿ ಅಮರಿಕೊಳ್ಳುತ್ತವೆ. ಅದಕ್ಕೆ ವಯಸ್ಸಿನ ಮಿತಿಯಂತ ಏನೂಇಲ್ಲ. ಮುಖ್ಯವಾಗಿ ಚಟಗಳು ಸಹವಾಸ ದೋಷದಿಂದ ಬರುವಂಥವು. ಅವನು ಸೇದುತ್ತಾನೆ ಅಂತ ಇವನೂ ಆರಂಭಿಸುತ್ತಾನೆ. ಇವಳು ಸೇದಿದಳು ಎಂದು ಅವಳೂ ಸೇದುತ್ತಾಳೆ. ಒಮ್ಮೆ ಶುರುವಾದದ್ದು ನಿಲ್ಲಬೇಕಾದರೆ ವ್ಯಸನಿಗೆ ಭಯಂಕರ ಕಾಯಿಲೆ ಬರಬೇಕು ಅಥವಾ ಸತ್ತೇ ಹೋಗಿರಬೇಕು.

ಕಳೆದ ತಿಂಗಳು ಕರ್ನಾಟಕ ಪ್ರಜೆಗಳನ್ನು ನಿಬ್ಬೆರಗಾಗಿಸಿದ ಒಂದು ಸುದ್ದಿ ನಿಮಗೂ ಗೊತ್ತಿರಬಹುದು. ಹರಪನಹಳ್ಳಿಯ 12 ವರ್ಷದ ಹುಡುಗನೊಬ್ಬನಿಗೆ ಕುಡಿಯುವ ಚಟ ಫೆವಿಕಾಲ್ ಟೈಪ್ ಅಂಟಿಕೊಂಡಿದೆ ಎಂತಲೂ ಅವನಿಗೆ ದಿನಕ್ಕೆ ಎರಡು ಕ್ವಾರ್ಟರ್ ಬ್ರಾಂಡಿ ಸಿಗದೆ ಇದ್ದರೆ ಚಡಪಡಿಸುತ್ತಾನೆಂದೂ ಸುದ್ದಿ ಆಗಿತ್ತು. ಅಬಕಾರಿ ಸಚಿವ ರೇಣುಕಾರವರು ಖುದ್ದಾಗಿ ಅವನನ್ನು ಭೇಟಿ ಮಾಡಿ ಆತನ ಉಭಯ ಕುಶಲೋಪರಿ ವಿಚಾರಿಸಿದರೆಂದು ಸುದ್ದಿಯಾಗಿತ್ತು.

 

ಈ ಹುಡುಗನಿಗೆ ಚಿಕಿತ್ಸೆ ಆಗಬೇಕು. ಜೊತೆಗೆ ಸಂಶೋಧನೆಯೂ ಆಗಬೇಕು.

12 ವರ್ಷದ ಬಾಲಕ ಬ್ರಾಂದಿ ಅಡಿಕ್ಟ್ ಹೇಗಾದ ಎಂದು ಚಕಿತಪಟ್ಟವರು ಬಹಳ ಮಂದಿ. ಚಕಿತ ಪಟ್ಟವರಲ್ಲಿ ಕುಡಿಯುವವರೂ ಮತ್ತು ಕುಡಿಯದವರೂ ಇದ್ದರು. ಇವರೆಲ್ಲರೂ ದಿಗ್ಭ್ರಾಂತರಾಗುವ ಹೊಸ ಸುದ್ದಿ ಈಗ ಇಂಡೋನೇಶಿಯಾದ ಸುಮಾತ್ರದಿಂದ ಬಂದಿದೆ. ಅರ್ದಿ ರಿಜಾಲ್ ಎಂಬ ಹೆಸರಿನ ಎರಡು ವರ್ಷದ ಹುಡುಗ ದಿನಕ್ಕೆ ಎರಡು ಪ್ಯಾಕೆಟ್ ಸಿಗರೇಟು ಎಳೆಯುತ್ತಾನಂತೆ!

 

ಅಪ್ಪ ಅಮ್ಮ ಸಿಗರೇಟು ತೆಗೆಸಿಕೊಡದಿದ್ದರೆ ಚಡಪಡಿಕೆ ಹೆಚ್ಚಾಗಿ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾನಂತೆ. ತಲೆ ಸುತ್ತು ಬರುತ್ತಿದೆ ಎನ್ನುತ್ತಾನಂತೆ. ಅವನು ತಪ್ಪು ಮಾಡುತ್ತಿದ್ದಾನೆ ಎನ್ನುವದಕ್ಕಿಂತ ತಂಬಾಕು ಅವನಿಗೆ ಸಮಸ್ಯೆ ಆಗಿದೆ ಎಂದು ಭಾವಿಸುತ್ತೇನೆ ಎಂದು ಹುಡುಗನ ತಾಯಿ ಡಯಾನಾ ನಿಸ್ಸಹಾಯಕ ಧ್ವನಿಯಲ್ಲಿ ಹೇಳುತ್ತಾರೆ. ಹುಡುಗನ ತಂದೆ ಮೊಹಮ್ಮದ್ ರಿಜಾಲ್ ಗೆ ಇದೇನು ದೊಡ್ಡ ಸಮಸ್ಯೆ ಅನ್ನಿಸುವುದಿಲ್ಲ. ಮಗ ಆರೋಗ್ಯವಾಗಿದ್ದಾನೆ, ಸಿಗರೇಟು ಕೊಡದಿದ್ದರೆ ಮಾತ್ರ ಹುಚ್ಚನ ರೀತಿ ಆಡುತ್ತಾನೆ ಎಂದು ಟೆಲಿಗ್ರಾಫ್ ಪತ್ರಿಕೆಯ ವರದಿಗರಾರರಿಗೆ ತಿಳಿಸಿದ್ದಾನೆ.

ಅದೇನೇ ಇರಲಿ, ಕಡಿಮೆ ಆದಾಯ ಇರುವ ಕುಟುಂಬಗಳಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳು ಹೀಗಾಗುವುದಕ್ಕೆ ತಂದೆ ತಾಯಿ ಪೋಷಕರೇ ಕಾರಣ ಎಂದು ವಾಷಿಂಗ್ ಟನ್ ಡಿಸಿ ಪ್ರದೇಶದಲ್ಲಿನ ಟೊಬ್ಯಾಕೋ ಫ್ರೀ ಕಿಡ್ಸ್ ಚಳವಳಿಯ ಮುಖ್ಯಸ್ಥ ಮ್ಯಾಥ್ಯೂ ಮಯ್ಯರ್ಸ್ ಸುಮಾತ್ರದ ಧೂಮಪಾನ ವ್ಯಸನಿ ರಿಜಾಲ್ ಉದಾಹರಣೆ ಇಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ.

ಸುಮಾತ್ರದಲ್ಲಿ ನಡೆದ ಈ ಘಟನೆಯಿಂದ ಅಮೆರಿಕಾದಲ್ಲಿರುವ ಧೂಮಪಾನ ವಿರೋಧಿ ಚಳವಳಿಗಾರರು ಚುರುಕಾಗಿದ್ದಾರೆ. ಇಂಡೋನೇಷಿಯಾ ಸರಕಾರ ಈ ಕೂಡಲೇ ಕ್ರಮ ಕೈಗೊಂಡು ಎಳವೆಯಲ್ಲಿ ಧೂಮಪಾನ ಚಟಕ್ಕೆ ಬಲಿಯಾಗುವ ಮಕ್ಕಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಗರೇಟು ಮಾರಾಟ ಕಂಪನಿಗಳು ಅಮಾಯಕ ಬಡ ಕುಟುಂಬದ ಮಕ್ಕಳ ಮೇಲೆ ಮಾಡುತ್ತಿರುವ ಆಕ್ರಮಣ ಇದಾಗಿದೆ ಎಂದು ಗುಡುಗುತ್ತಿದ್ದಾರೆ.

ಸಿಗರೇಟು ಚಟದ ಎರಡು ವರ್ಷದ ಹುಡುಗನ ಪ್ರತಾಪಗಳು ವರದಿಯಾಗಿರುವುದು ದಕ್ಷಿಣ ಸುಮಾತ್ರದ ಕರಾವಳಿ ಪ್ರದೇಶದ ಒಂದು ಪುಟ್ಟ ಹಳ್ಳಿಯಿಂದ. ಹುಡುಗನ ಅಪ್ಪ ಮಗ 18 ತಿಂಗಳಿದ್ದಾಗ ಒಂದು ಸಿಗರೇಟು ಕೊಟ್ಟು ಸೇದಿಸಿ ರುಚಿ ತೋರಿಸಿದ್ದನಂತೆ ಎಂದು ಎಎನ್ಐ ಸುದ್ದಿಸಂಸ್ಥೆ ಬಾತ್ಮೀದಾರರು ಹೇಳುತ್ತಾರೆ. ಧೂಮಪಾನ ವಿರೋಧಿಗಳು ಜನ ಜಾಗೃತಿಯ ಗಂಟೆಗಳನ್ನು ಒಂದು ಕಡೆ ಬಾರಿಸುತ್ತಿದ್ದರೆ ಇನ್ನೊಂದೆಡೆ ತಂಬಾಕು ಕೃಷಿ, ಸಿಗರೇಟು, ಬೀಡಿ ಉತ್ಪನ್ನಗಳಲ್ಲಿ ಏರಿಕೆ, ಪಾನ್ ಪರಾಗುಗಳ ಅವ್ಯಾಹತ ಮಾರಾಟ ನಡೆಯುತ್ತಲೇ ಇರುತ್ತದೆ.

ಈ ವಿಷಚಕ್ರ ಒಂದಲ್ಲ ಒಂದು ದಿನ ನಿಲ್ಲಬೇಕು ಎಂದು ಪಣತೊಟ್ಟಿರುವ ಸಂಸ್ಥೆಗಳ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಂಚೂಣಿಯಲ್ಲಿದೆ. ಅಂದಹಾಗೆ, ನಾಡಿದ್ದು ಭಾನುವಾರ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಸುದ್ದಿ ಪತ್ರಿಕೆಗಳಲ್ಲಿ ಮಿಂಚಿ ಮರೆಯಾಗುತ್ತದೆ.

ಪ್ರತಿಭಾವಂತರಿಗೆ ಬೇಡವಾದ ಗುರುಸ್ಥಾನ- None of them want to become teachers

0507 None Of Them Want To Become Teachers

ಕರ್ನಾಟಕ ಎಸ್ ಎಸ್ ಎಲ್ ಸಿ ಮತ್ತು ಎರಡನೇ ಪದವಿ ಪೂರ್ವ ಪರೀಕ್ಷೆಗಳ ಫಲಿತಾಂಶಗಳು ಇದೀಗ ಲಭ್ಯವಾಗಿವೆ. ನಮ್ಮ ಹುಡುಗರಿಗೆ ಮತ್ತು ಹುಡುಗಿಯರಿಗೆ ಅವರವರ ಪ್ರಯತ್ನ ಮತ್ತು ಶ್ರದ್ಧೆಗೆ ತಕ್ಕಂತೆ ಅಂಕಗಳು ಉದುರಿವೆ. ಪಿಯುಸಿ ಸೇರಬಯಸುವ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಧಾವಂತ ಆರಂಭವಾಗಿದೆ.

ಸಿಇಟಿ, ಕಾಮೆಡ್ ಕೆ ಗೇಟುಗಳನ್ನು ದಾಟಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಡೆಂಟಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸುವುದು ಎರಡನೇ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಮೊದಲ ಆದ್ಯತೆ. ಮೆರಿಟ್ನಲ್ಲಿ ಪಾಸಾದವರಿಗೆ ಸೀಟು ಮತ್ತು ಅವರು ಬಯಸಿದ ಕಾಲೇಜು ಆಯ್ಕೆ ಸುಸೂತ್ರ. ಮೆರಿಟ್ ಇಲ್ಲದಿದ್ದರೂ ತಾಂತ್ರಿಕ ಕೋರ್ಸುಗಳನ್ನು ತೆಗೆದುಕೊಳ್ಳಲೇಬೇಕೆಂದು ಪಣ ಮತ್ತು ಹಠ ತೊಟ್ಟ ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಿಯರಿಗೆ ಮಾತ್ರ ಡೊನೇಷನ್, ಶಿಕ್ಷಣ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಐದು ವರ್ಷಗಳ ಅವಧಿಗೆ ಮಕ್ಕಳ ಖರ್ಚುವೆಚ್ಚಕ್ಕೆ ಹಣ ಹೊಂದಿಸುವ ಯೋಚನೆ.

ಫೇಲು ಆದ ಮಕ್ಕಳಿಗೆ ಆದ್ಯತೆಗಳು ಹೆಚ್ಚಿಲ್ಲ. ಇದೇ ಜೂನ್ 28ರಿಂದ ಆರಂಭವಾಗುವ ಸಪ್ಲಿಮೆಂಟರಿ ಪರೀಕ್ಷೆಗೆ ಮೈ ಬಗ್ಗಿಸಿ ಓದುವುದು ಮೊದಲ ಆಯ್ಕೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಅಂಕಗಳು ಬಂದಿಲ್ಲ ಎಂದು ಭಾವಿಸುವವರು ಮರು ಎಣಿಕೆ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವುದು ಎರಡನೇ ಆಯ್ಕೆ.

ಅತಿಹೆಚ್ಚು ಅಂಕಗಳಿಸಿ ತಮ್ಮ ಕಾಲೇಜು ಮತ್ತು ಊರಿಗೆ ಕೀರ್ತಿ ಹಾಗೂ ತಂದೆತಾಯಿರ ಶ್ರಮಕ್ಕೆ ಸಾರ್ಥಕತೆ ತಂದುಕೊಟ್ಟ ಪ್ರತಿಭಾವಂತ ವಿದ್ಯಾರ್ಥಿಗಳ ಸಂಭ್ರಮಾಚರಣೆ ಈಗಾಗಲೇ ಮುಗಿದಿದೆ. ಇದೊಂದು ತುಂಬಾ ಚಿಕ್ಕ ಗುಂಪು. ಈ ಗುಂಪಿನ ಸದಸ್ಯರಿಗೆ ಈಗಿಂದಲೇ ಮುಂದಿನ ವ್ಯಾಸಂಗದತ್ತ ಗಮನ. ಅದು ಅವರ ಜಾಯಮಾನವಾಗಿರುತ್ತದೆ.

ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂದರ್ಶನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಇಂದು ಪ್ರಕಟಗೊಂಡಿವೆ. ‘ನೀವು ಮುಂದೆ ಏನು ಆಗಬೇಕು ಎಂದುಕೊಂಡಿದ್ದೀರಿ’ ಎಂಬ ವರದಿಗಾರರ ಪ್ರಶ್ನೆಗಳಿಗೆ ಅವರೆಲ್ಲರ ಉತ್ತರಗಳು ಬಹುತೇಕ ಒಂದೇ ದಿಕ್ಕಿನಲ್ಲಿವೆ. nothing less than a doctor ಎಂಬ ಉತ್ತರ ಒಬ್ಬರಿಂದ, ಇಂಜಿನಿಯರಿಂಗ್ ಆಗುತ್ತೀನಿ, ಅಕೌಂಟೆನ್ಸಿ ವ್ಯಾಸಂಗ ಮಾಡಿ ಚಾರ್ಟೆಡ್ ಅಕೌಂಟೆಂಟ್ ಆಗುತ್ತೀನಿ, ಅತ್ಯುತ್ತಮ ಶಿಕ್ಷಣ ನೀಡುವ ಲಾ ಕಾಲೇಜಿಗೆ ಸೇರಿ ಮುಂದೆ ಕಾರ್ಪೋರೇಟ್ ಅಡ್ವೋಕೇಟ್ ಆಗುತ್ತೀನಿ ಎಂಬಿತ್ಯಾದಿ ಉತ್ತರಗಳು ಪ್ರತಿಭಾವಂತರಿಂದ ಬಂದಿವೆ. ಈ ಪ್ರತಿಕ್ರಿಯೆಗಳಲ್ಲಿ ಹೊಸದು ಎನ್ನುವಂಥದ್ದೇನೂ ಕಾಣಿಸುವುದಿಲ್ಲ. ಸಾಧನೆಗೈದ ವಿದ್ಯಾರ್ಥಿ ವೃಂದದಿಂದ ಬರುವ ಉತ್ತರಗಳು ಪ್ರತಿವರ್ಷ ಹೀಗೇ ಇರುತ್ತವೆ.

ನಮ್ಮ ಸಮಾಜ ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ತಾನು ಹೆಚ್ಚು ಓದಿ, ಕಲಿತು, ಮುಂದೊಂದುದಿನ ಉಪಾಧ್ಯಾಯ ವೃತ್ತಿಯನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ‘ನಿಮ್ಮ ಸಾಧನೆಗೆ ಪ್ರೇರಣೆ ಯಾರು’ ಎಂಬ ಪ್ರಶ್ನೆಗೆ ತಾಯಿ ತಂದೆ ಅಥವಾ ಪಾಠಮಾಡಿದ ಗುರುವೃಂದ ಎಂದು ಹೇಳುತ್ತಾರೆಯೇ ವಿನಾ ತಮಗೆ ಆದರ್ಶಪ್ರಾಯವಾದ ಗುರುಗಳು ತುಳಿದ ಹಾದಿಯಲ್ಲಿ ನಡೆಯಲು ಅವರಾರೂ ಸಿದ್ಧರಿಲ್ಲ.

ಹರಿದ ಪಂಚೆ, ತೇಪೆ ಹಾಕಿದ ಜುಬ್ಬ, ತೂತು ಬಿದ್ದಿರುವ ಹಳೆಕೋಟು ಧರಿಸಿದ ಮೇಷ್ಟುಗಳ ಕಾಲ ಈಗೀಗ ಮರೆಯಾಗುತ್ತಿದೆ. ಶಾಲೆ ಕಾಲೇಜುಗಳ ಮೇಷ್ಟು ಮತ್ತು ಉಪನ್ಯಾಸಕರುಗಳಿಗೆ ಈಗ ಕೈತುಂಬ ಸಂಬಳ ಬರುತ್ತದೆ. ಕಳೆದ ವರ್ಷ ಯುಜಿಸಿ ಮಾಡಿರುವ ವೇತನ ವಿಮರ್ಶೆಯಿಂದ ಕಾಲೇಜು ಉಪನ್ಯಾಸಕರ ಸಂಬಳ 13,000 ರೂ.ಗಳಷ್ಟು ಹೆಚ್ಚಾಗಿದೆ. ಜಿಲ್ಲಾಧಿಕಾರಿಗಿಂತ ಹೆಚ್ಚಿಗೆ ಸಂಬಳ ಅವರ ಕೈಸೇರುತ್ತದೆ. ಮೇಷ್ಟ್ರ ನೌಕರಿಗೆ ಸಂಬಳ ಕಡಿಮೆ ಎಂಬ ಕೂಗು ಈಗಿಲ್ಲವಾದರೂ ನಮ್ಮ ಪ್ರತಿಭಾವಂತಗಳಿಗೆ ಈ ನೌಕರಿ, ಈ ವೃತ್ತಿ, ಈ ಬಗೆಯ ಬದುಕು ಇಷ್ಟವಿಲ್ಲ.

ಪಾಠ ಮಾಡುತ್ತೇನೆ, ಒಳ್ಳೆ ವಿದ್ಯಾರ್ಥಿಗಳನ್ನು ತಯ್ಯಾರು ಮಾಡುತ್ತೇನೆ ಎಂಬ ಕನಸನ್ನು ಕಟ್ಟಿಕೊಂಡ ಒಬ್ಬೇಒಬ್ಬ ಪ್ರತಿಭಾವಂತ ವಿದ್ಯಾರ್ಥಿ ನನ್ನ ಕಣ್ಣಿಗೆ ಬಿದ್ದಿಲ್ಲ.

ವಿಮರ್ಶಕಿ ನಾಪತ್ತೆ, ಪ್ರಕರಣ ಇನ್ನಷ್ಟು ನಿಗೂಢ- Media blog vimarshaki takes break ing news

0501 Media Blog Vimarshaki Takes Break Ing News

ಕನ್ನಡ ಮಾಧ್ಯಮಲೋಕದ ಆಗುಹೋಗುಗಳ ಮತ್ತು ಅದರ ತಪ್ಪು ಒಪ್ಪು ಬೆಪ್ಪುಗಳ ಎಕ್ಸರೇ ತೆಗೆಯುತ್ತಿದ್ದ ವಿಮರ್ಶಕಿ ಎಂಬ ಬ್ಲಾಗ್ ಏಪ್ರಿಲ್ 25ರಿಂದ ಸುಮ್ಮನಾಗಿದೆ. ‘ಅನಿರ್ದಿಷ್ಟ ಕಾಲಾವಧಿಯ ವಿರಾಮಕ್ಕೆ ಪೂರ್ಣವಿರಾಮ’ ಎಂದು ತನ್ನ ಕಡೆಯ ಸಂಪಾದಕೀಯ ಬರವಣಿಗೆಯಲ್ಲಿ ಋಜು ಹಾಕಿರುವ ವಿಮರ್ಶಕಿ ಏಕಾಏಕಿ ಸಂಸಾರ ತೊರೆದು ಎಲ್ಲಿಗೆ ಹೋದಳೋ ಎಂಬುದು ದಟ್ಸ್ ಕನ್ನಡದ ಒಂದು ಬ್ಲಾಗ್ ಸದನ ಕುತೂಹಲವಾಗಿರುತ್ತದೆ. ಆಕೆ ಬರೆದಿಟ್ಟು ಹೋಗಿರುವ ಇಂಟರ್ ನೆಟ್ ಚೀಟಿಯನ್ನು ನಿಮ್ಮ ಅವಗಾಹನೆಗಾಗಿ ಇಲ್ಲಿ ಮುದ್ರಿಸಲಾಗಿದೆ. ಓದಿ.

ಮಧ್ಯ ವಯಸ್ಕ ವಿಮರ್ಶಕಿ ಬೇಸಿಗೆ ಪ್ರವಾಸಕ್ಕೆಂದು ಕುಲುಮನಾಲಿಗೆ ಹೋದಳಾ? ವಿಶ್ರಾಂತಿಗೆಂದು ಪ್ರಕೃತಿ ಚಿಕಿತ್ಸಾಲಯಕ್ಕೇನಾದರೂ ಅಡ್ಮಿಟ್ ಆದಳಾ? ಅಥವಾ ಹೆರಿಗೆ ರಜೆ ಪಡೆದು ತೌರ ಮನೆ ಬಸ್ಸು ಹತ್ತಿದಳಾ? ಏನೂ ಗೊತ್ತಿಲ್ಲ. ಈ ಪ್ರಶ್ನೆಗಳನ್ನು ಇಟ್ಟುಕೊಂಡು ಪತ್ತೆದಾರಿ ಕೆಲಸ ಮಾಡುವ ಕೆಲಸ ಮಾಧ್ಯಮ ಲೋಕದ ಲೋಕಾಯುಕ್ತರುಗಳಿಗೆ ಬಿಟ್ಟ ವಿಚಾರಗಳಾಗಿವೆ – ಸಂಪಾದಕ.

***

ವಿಮರ್ಶಕಿ ಬ್ಲಾಗ್ ಗೆ ವಿರಾಮ. ಆದಷ್ಟೂ ವಸ್ತುನಿಷ್ಠವಾಗಿ ಪತ್ರಿಕಾರಂಗದ ಓರೆಕೋರೆ, ಒಳಿತುಗಳನ್ನು ವಿಮರ್ಶಿಸುವ ಈ ಕೆಲಸಕ್ಕೆ ಒಂದು ವರ್ಷವೂ ಆಗಿಲ್ಲ. ಎಪ್ಪತ್ತಾರು ಸಾವಿರ ಹಿಟ್‌ಗಳನ್ನು ಪಡೆದ ಈ ಅನಾಮಿಕ ಬ್ಲಾಗ್‌ಗೆ ಕೊಂಚ ಸ್ವಘೋಷಿತ ವಿರಾಮ. ಕಾರಣ? ಅನಾಮಿಕ ಬ್ಲಾಗ್‌ಗಳನ್ನು ಹೂಳೆತ್ತುವವರ ಭಯವಲ್ಲ; ಕೆಲವು ಪತ್ರಕರ್ತರ ಕುತ್ಸಿತ ಕಾಮೆಂಟ್‌ಗಳೂ ಅಲ್ಲ; ಸಮಯದ ಅಭಾವವೂ ಅಲ್ಲ. ಎಷ್ಟೆಂದು ಬರೆಯಲಿ ಎಂಬ ಹತಾಶೆಯೂ ಅಲ್ಲ.

ಇಂಥದ್ದೊಂದು ಪ್ರಯತ್ನದಿಂದ ಪತ್ರಕರ್ತರ ಮತ್ತು ಪತ್ರಿಕೆಗಳ ಹಲವು ಗಟ್ಟಿ ಮೂಢನಂಬಿಕೆಗಳನ್ನು, ಅವರ ನೀತಿ ನಿಲುವುಗಳು, ಆಚರಣೆ, ವಿಚಾರಗಳಲ್ಲಿನ ವೈರುಧ್ಯಗಳನ್ನು ಬೆಳಕಿಗೆ ತರುವುದೇ ವಿಮರ್ಶಕಿಯ ಉದ್ದೇಶವಾಗಿತ್ತು. ವ್ಯಕ್ತಿಗತ ಟೀಕೆಗಿಂತ ವಿಷಯಾಧಾರಿತ ವಿಮರ್ಶೆಯೇ ಮುಖ್ಯವಾಗಿತ್ತು. ಸುದ್ದಿ ವಿಮರ್ಶೆಗೆ ಇನ್ನೂ ಹಲವು ಬ್ಲಾಗ್‌ಗಳಿವೆ. ಅವುಗಳು ಇನ್ನೂ ಮುಂದುವರಿದಿವೆ; ಸ್ವಾಗತ!

ವಿಮರ್ಶಕಿಯ ಈ ವಿರಾಮ ಮಧ್ಯಂತರವೂ ಅಲ್ಲ; ಹತ್ತು ತಿಂಗಳುಗಳಲ್ಲಿ 175 ಬ್ಲಾಗ್‌ಗಳನು ಬರೆಯುವುದು ದೊಡ್ಡದೇನಲ್ಲ; ಆದರೆ ಒಬ್ಬರೇ ಕೂತು ಈ ಎಲ್ಲ ಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು ವಿಮರ್ಶೆ ಮಾಡುವುದಿದೆಯಲ್ಲ, ಅದಕ್ಕಿಂತ ಇನ್ನೊಂದು ಸಂಕಟ ಇನ್ನೊಂದಿಲ್ಲ. ಒಂದೇ ವಿಷಯವನ್ನು ಎಲ್ಲ ಪತ್ರಿಕೆಗಳೂ ಹೇಗೆ ಬರೆದಿವೆ ಎಂದು ಗಮನಿಸುವಾಗ ಎಷ್ಟೆಲ್ಲ ಸಲ ಓದಿದ್ದನ್ನೇ ಓದಬೇಕು, ಪಿಡಿಎಫ್ ಪುಟಗಳನ್ನು ತಿರುವಬೇಕು…

ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಗಳು ನನ್ನ ವಿಮರ್ಶೆಗೆ ತುಂಬಾ ಸಹಕಾರಿಯಾಗಿವೆ. ಅವುಗಳ ಈ ಪೇಪರ್‌ಗಳು ತುಂಬಾ ಯೂಸರ್ ಫ್ರೆಂಡ್ಲಿ. ಆದರೆ ಸಂಯುಕ್ತ ಕರ್ನಾಟಕ, ಹೊಸದಿಗಂತ, ಉದಯವಾಣಿ, ಕನ್ನಡಪ್ರಭಗಳ ಪಿಡಿಎಫ್ ಪ್ರತಿಗಳನ್ನು ತಿರುವಿ ಹಾಕುವುದೆಂದರೆ, ಮಣಭಾರದ ತಗಡುಗಳನ್ನು ತಿರುವಿದ ಹಾಗೆ. ಒಂದು ಪತ್ರಿಕೆಯ ಎಲ್ಲ ಪುಟಗಳನ್ನು ಓದಲು ಕನಿಷ್ಟ ಒಂದು ಗಂಟೆ ಬೇಕಾಗುತ್ತದೆ. ದಿನವೊಂದಕ್ಕೆ ಆರು ಗಂಟೆ ಕಳೆದರೂ ಎಲ್ಲ ಪತ್ರಿಕೆಗಳ ಎಲ್ಲ ಪುಟಗಳನ್ನು ತಿರುವಿ ಹಾಕುವುದು ಅಸಾಧ್ಯ.

ಅದಕ್ಕೇ ವಿಮರ್ಶಕಿಯು ರ್‍ಯಾಂಡಮ್ ಆಗಿ ವಿಮರ್ಶೆಗಳನ್ನು ಬರೆದಿದ್ದಿದೆ. ಅದರಲ್ಲೂ ಸರಸರನೆ ತೆರೆದುಕೊಳ್ಳುವ ವಿಜಯಕರ್ನಾಟಕದ ಪುಟಗಳು ಸಲೀಸಾಗಿ ಟೀಕೆಗೆ ಪಕ್ಕಾದವು. ಹೊರತು ವಿಜಯ ಕರ್ನಾಟಕವನ್ನೇ ಟಾರ್ಗೆಟ್ ಮಾಡಲು ಹೊರಟವಳು ನಾನಲ್ಲ. ಇನ್ನು ಕನ್ನಡಪ್ರಭ, ಹೊಸದಿಗಂತವನ್ನು ಮನೆಗೇ ತರಿಸುತ್ತಿದ್ದೇನೆ. ಅದಕ್ಕೇ ನೀವು ಪತ್ರಿಕೆಯಲ್ಲಿ ಉದಯವಾಣಿ ಮತ್ತು ಸಂಯುಕ್ತ ಕರ್ನಾಟಕದ ಬಗ್ಗೆ ಅತಿ ಕಡಿಮೆ ಟೀಕೆಗಳನ್ನು ಕಂಡಿದ್ದೀರಿ. ಪತ್ರಿಕೆಗಳು ವಿಮರ್ಶಕಿಯಿಂದ ಇವತ್ತು ತಪ್ಪಿಸಿಕೊಳ್ಳಬಹುದು; ನಾಳೆ? ಆದ್ದರಿಂದ ಈ ಪತ್ರಿಕೆಗಳು ತಮ್ಮ ಪಿಡಿಎಫ್ ಪ್ರತಿಗಳ ಗಾತ್ರವನ್ನು ಚಿಕ್ಕದು ಮಾಡುವ ಮತ್ತು ಇಮೇಜ್ ವ್ಯೂ ಕೊಡುವ ಸವಲತ್ತನ್ನು ಒದಗಿಸಿದರೆ ಓದುಗರು ನಿರಾಳವಾಗುತ್ತಾರೆ; ಹಿಟ್ ಸಂಖ್ಯೆ ಏರುತ್ತದೆ.

ವಿಮರ್ಶಕಿಯ ಈ ಟೆಕ್ನಿಕಲ್ ಸಮಸ್ಯೆಯೂ (ಪಿಡಿಎಫ್ ಗಾತ್ರ) ವಿಮರ್ಶಕಿಯ ಆಲಸ್ಯಕ್ಕೆ ಕಾರಣ. ಸಾಫ್ಟ್ ಕಾಪಿಯನ್ನು ಪ್ರಕಟಿಸಬೇಕೆಂದರೆ ಅದನ್ನು ಇಮೇಜ್ ಮಾಡಬೇಕು; ಅದೂ ಚಿಕ್ಕ ಗಾತ್ರದಲ್ಲಿದ್ದರೂ ಸ್ಪಷ್ಟವಾಗಿ ಕಾಣುವಂತಿರಬೇಕು. ಇದೆಲ್ಲ ಮಾಡಿದ ಮೇಲೆ ತಪ್ಪಾಗದಂತೆ ಬ್ಲಾಗ್ ಬರೆದು ಅದನ್ನು ಪ್ರಕಟಿಸಬೇಕು… ಒಂದು ವರ್ಷ ಈ ಕೆಲಸವನ್ನು ಹೇಗೆ ಮಾಡಿದೆ ಎಂದು ನನಗೇ ಅಚ್ಚರಿಯಾಗುತ್ತದೆ.

ಅದೇನೇ ಇರಲಿ, ಹಲವರು ಬ್ಲಾಗಿನ ಬಗ್ಗೆ ಅತ್ಯಂತ ಸಹಜ ಅಭಿಮಾನ ಪ್ರಕಟಿಸಿದ್ದಾರೆ. ಹಲವರು ನೇರವಾಗಿ ತಮ್ಮ ಹೆಸರು ಹಾಕಿಕೊಂಡೇ ಪ್ರತಿಕ್ರಿಯಿಸಿದ್ದಾರೆ. ನಾನು ಅನಾಮಿಕಳು ಎಂಬ ಬೇಸರ ತೋರದೆ ಬೆಂಬಲಿಸಿದ್ದಾರೆ. ಅವರಿಗೆಲ್ಲ ನನ್ನ ತುಂಬು ಹೃದಯದ ಧನ್ಯವಾದಗಳು.

ನನ್ನ ಕಾಮೆಂಟ್‌ಗಳಿಗೆ ಬೇಸರಿಸದೆ ಅವನ್ನೆಲ್ಲ ಸಾಕಷ್ಟು ಬಾರಿ ತಮ್ಮ ಸಂಪಾದಕೀಯ ಸಭೆಯಲ್ಲಿ ಚರ್ಚಿಸಿದ ಎಲ್ಲ ಪತ್ರಿಕೆಗಳ (ಮುಖ್ಯವಾಗಿ ನನಗೆ ಗೊತ್ತಿರುವಂತೆ ಕನ್ನಡಪ್ರಭ, ಪ್ರಜಾವಾಣಿ, ಹೊಸದಿಗಂತ) ಸಂಪಾದಕರುಗಳಿಗೆ ನನ್ನ ವಂದನೆಗಳು. ಮುಂದೆ ಇಂಥ ಎಲ್ಲ ಲೋಪಗಳನ್ನು ಆಯಾ ಪತ್ರಿಕೆಗಳಿಗೇ ನೇರವಾಗಿ ತಿಳಿಸುವ ಯೋಚನೆಯಿದೆ. ಸಮಯಾವಕಾಶ ಇದ್ದರೆ..

ವಿಮರ್ಶಕಿ ಯಾರು? ಕನಿಷ್ಟ ಮೂವರು ಪತ್ರಕರ್ತರು ನನಗೆ ಈ ಮೈಲ್ ಮಾಡಿ `ನಾನೇ ವಿಮರ್ಶಕಿ ಅಂತ ಚರ್ಚೆ ಶುರುವಾಗಿದೆ, ನಿನ್ನ ಬ್ಲಾಗಿನಲ್ಲಿ ಕ್ಲಾರಿಫಿಕೇಶನ್ ಕೊಡು” ಎಂದು ವಿನಂತಿಸಿದ್ದರು. ನಾನು ಈವರೆಗೂ ಕೊಟ್ಟಿರಲಿಲ್ಲ. ಅವರಲ್ಲಿ ಇಬ್ಬರು ಈಗಲೂ ವೃತ್ತಿಯಲ್ಲಿದ್ದಾರೆ. ಮೂರನೆಯವರು ಹವ್ಯಾಸಿ ಪತ್ರಕರ್ತರು. ಅವರಾರೂ ಅಲ್ಲ ಎಂದಷ್ಟೆ ಇಲ್ಲಿ ಸ್ಪಷ್ಟೀಕರಣ ಕೊಡಬಹುದು.

ಮೂಲತಃ ಬೆಂಗಳೂರಿನವಳಾದ ನಾನು ಇತ್ತೀಚೆಗೆ ಒಂದು ಕಂಪೆನಿಯಲ್ಲಿ ಮಾಧ್ಯಮ ವಿಭಾಗವನ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ 8 ಎಂಬಿ ವಿಸ್ತಾರದ ಬ್ಯಾಂಡ್‌ವಿಡ್ತಿನಲ್ಲಿ ಅನೇಕ ಪತ್ರಿಕೆಗಳನ್ನು ದಿನಾಲೂ ಓದುತ್ತೇನೆ. (ಆದರೂ ಪಿಡಿಎಫ್ ಪ್ರತಿಗಳ ಬಗ್ಗೆ ಕಾಮೆಂಟ್ ಮಾಡಿರೋದು ರೆಗ್ಯುಲರ್ ಗ್ರಾಹಕರ ಬಗ್ಗೆ; ಅದು ನನ್ನ ಮನೆಯಲ್ಲಾದ ಅನುಭವ). ಮೊದಲು ಕಳಿಸಿದ ಈ ಮೈಲಿಗೆ ಹಲವರು ಪ್ರತಿಕ್ರಿಯಿಸಿ ವರದಿಗಾರರಾಗಿ ಮಾಹಿತಿ ನೀಡಿದ್ದಾರೆ. ನೀಡುತ್ತಿದ್ದಾರೆ. ಮುಖ್ಯತಃ ನನ್ನ ಕೆಲವು ಮಿತ್ರೆಯರು, ಮಿತ್ರರು ಮಾಧ್ಯಮದಲ್ಲಿ ಇದ್ದುದರಿಂದ ಅವರೆಲ್ಲರೂ ಹಂಚಿಕೊಂಡ ಅನುಭವವನ್ನು ನನ್ನದೇ ಅನುಭವ ಎಂಬಂತೆ ಬಿಂಬಿಸಿದ್ದೂ ಇದೆ.

ಇಂದಿನ ಕಾರ್ಪೋರೇಟ್ ಯುಗದಲ್ಲಿ ಕನ್ನಡ ಪತ್ರಿಕೆಗಳು ಬಾಲಿಶವಾಗೇನೂ ಇಲ್ಲ. ಟಿವಿ ಚಾನೆಲ್‌ಗಳಲ್ಲಿ ಬರುವ ಹಾಸ್ಯಾಸ್ಪದ ಧಾರಾವಾಹಿಗಳಂತೆ ಸುದ್ದಿಗಳು ಇಮ್ಮೆಚ್ಯೂರ್ ಆಗಿರುವುದಿಲ್ಲ. ಅಷ್ಟರಮಟ್ಟಿಗೆ ಕನ್ನಡ ಪತ್ರಿಕೆಗಳು ಎಷ್ಟೋ ವಾಸಿ. ಇಷ್ಟಾಗಿಯೂ ಒಂದು ಸಮಷ್ಟಿ ದೃಷ್ಟಿಕೋನದ ಕೊರತೆ ಇದ್ದೇ ಇದೆ. ಅದನ್ನೆಲ್ಲ ಮೀರಿ ನಿಜಕ್ಕೂ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ವಸ್ತುನಿಷ್ಠ ಮತ್ತು ಸಮಚಿತ್ತದ ವರದಿಗಳನ್ನು ಪ್ರಕಟಿಸಿದರೆ ಅದಕ್ಕಿಂತ ಬೇರೆ ಕ್ರಾಂತಿ ಇದೆಯೆ?

ಮಿರ್ಚಿಯೆಂಬ ಹೆಸರಿನಲ್ಲಿ ಬರುವ ಖಾರವೇ ಇಲ್ಲದ, ವಿಮರ್ಶೆಯೇ ಅಲ್ಲದ ಕಾಲಂಗಳ ಸೋಶಿಯಲ್ ಮಾಸ್ಕಿಂಗ್ ಅಪಾಯವನ್ನು ಪತ್ರಕರ್ತರು ಗ್ರಹಿಸಬೇಕು. ವರ್ಣನೆ, ಭ್ರಮೆ ಹುಟ್ಟಿಸುವುದು, ರಮ್ಯವಾಗಿ ಮಾತಾಡುವುದು – ಇದರಿಂದ ಪತ್ರಕರ್ತರೂ ಸುಧಾರಿಸುವುದಿಲ್ಲ; ಪತ್ರಿಕೋದ್ಯಮವೂ ಸರಿಯಾಗುವುದಿಲ್ಲ. ಕಿಲ್ಲಿಂಗ್ ದಿ ಸ್ಟೋರಿ ಎಂಬಂತೆ ಏನೋ ಬರೆದು ವಿಮರ್ಶೆಯ ನಿಜ ಮಾತುಗಳನ್ನೇ ಮರೆಸುವುದು ಇಂದಿನ ಮುಖವಾಡಧಾರಿಗಳ ಸಂಚು.

ಪತ್ರಕರ್ತರು ತಮ್ಮ ಸ್ನೇಹಿತರೊಂದಿಗೆ ದಿನಾಲೂ ತಮ್ಮ ಸುದ್ದಿಗಳ ಬಗ್ಗೆ ವಿಮರ್ಶೆ ಮಾಡಿಕೊಂಡು, ಎಲ್ಲಿ ತಪ್ಪಾಯಿತು ಎಂದು ಅರಿತುಕೊಂಡು ಸೆಲ್ಫ್ ಕರೆಕ್ಷನ್ ಮಾಡಿಕೊಂಡರೆ ಅದಕ್ಕಿಂತ ಒಳ್ಳೆಯ ವಿಧಾನ ಇನ್ನೊಂದಿಲ್ಲ. ಆದರೆ ಅದನ್ನು ಬೆಳೆಸಿಕೊಳ್ಳಲು ಮೊದಲು ಒಳ್ಳೆಯ ಮಾನಸಿಕತೆಯನ್ನು ರೂಢಿಸಿಕೊಳ್ಳಬೇಕು.

ಭಾಷಣ ಬಿಗಿಯುವ ಸಮಯ ಇದಲ್ಲ. ಇಲ್ಲಿಗೇ ಈ ಅನಿರ್ದಿಷ್ಟ ಕಾಲಾವಧಿಯ ವಿರಾಮಕ್ಕೆ ಪೂರ್ಣವಿರಾಮ.

ವಿಮರ್ಶಕಿಯ ಸಂಪಾದಕೀಯ: ಇರೋದನ್ನು ಅಂಗೇ ಏಳೋದಕ್ಕೂ ರೆಸ್ಟ್ ಬ್ಯಾಡ್ವ? April 25, 2010

ಮನೆಮುರುಕ ವರದಕ್ಷಿಣೆ ವಿರುದ್ಧ ಅಭಿಯಾನ- Dowry free marriage website nilambur kerala

ನಾನು ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಮತ್ತು ನಾನು ವರದಕ್ಷಿಣೆಯನ್ನು ಕೊಡುವುದಿಲ್ಲ ಎಂದು ಆ ಹಳ್ಳಿಯ ಜನ ಪ್ರತಿಜ್ಞೆ ಮಾಡಿ ಒಂದು ವರ್ಷ ಆಯಿತು. ಸ್ವೀಕರಿಸಿದ ಪ್ರತಿಜ್ಞೆಯಂತೆ ನಡೆಯಲೂ ಅವರು ಆರಂಭಿಸಿದರು. ಅದರ ಫಲವಾಗಿ ಗ್ರಾಮದಲ್ಲಿ ಮನೆಮಾಡಿದ್ದ ಶೇ.85ರಷ್ಟು ವರದಕ್ಷಿಣೆ ಕೊಡುಕೊಳ್ಳುವಿಕೆ ಪಿಡುಗು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 40ಕ್ಕೆ ಕುಸಿದು ಬಿತ್ತು.

ಸಾಮಾಜಿಕ ಪಿಡುಗುಗಳ ವಿರುದ್ಧ ಅವಿರತ ಹೋರಾಟ ನಡೆಸುವ ಸಂಘ ಸಂಸ್ಥೆಗಳ ಬಗ್ಗೆ ನಾವು ಓದುತ್ತಲೇ ಇರುತ್ತೇವೆ. ಆದರೆ ಕೇರಳದ ಮಲ್ಲಾಪುರಂ ಜಿಲ್ಲೆಯ ನಿಲಂಬೂರು ಗ್ರಾಮದ ಜನತೆ ವರದಕ್ಷಿಣೆ ವಿರುದ್ಧ ಹೋರಾಟಕ್ಕೆ ಸಂಕಲ್ಪ ಮಾಡಿದರು ಮತ್ತು ತಮಗೆ ತಾವೇ ಕೊಟ್ಟುಕೊಂಡ ವಚನವನ್ನು ಪಾಲಿಸಿಕೊಂಡೂ ಬಂದರು.

ಶೇ.40ಕ್ಕೆ ಕುಸಿದ ವರದಕ್ಷಿಣೆ ಪಿಡುಗಿನಿಂದ ಗ್ರಾಮಸ್ಥರು ಸಂತುಷ್ಟರೇನೂ ಆಗಿಲ್ಲ. ಅನಿಷ್ಟವನ್ನು ಬೇರು ಸಹಿತ ಕಿತ್ತು ಹಾಕುವ ಉದ್ದೇಶದ ಎರಡು ಅಂತರ್ಜಾಲ ತಾಣಗಳನ್ನು ಆರಂಭಿಸಲು ಅವರು ತಯ್ಯಾರಿ ನಡೆಸಿದ್ದಾರೆ. ಬರುವ ಸೋಮವಾರ 8ನೇ ತಾರೀಖು  ಮತ್ತು  ಅಂತರ್ಜಾಲ ತಾಣಗಳು ಕಾರ್ಯಾರಂಭ ಮಾಡುತ್ತವೆ. ವೆಬ್ ಸೈಟುಗಳನ್ನು ಕೇರಳದ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಅವರು ತಿರುವನಂತಪುರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ನಿಲಂಬೂರಿನ ಜನಸಂಖ್ಯೆ 50,000. ಇವರಲ್ಲಿ ಶೇ.40 ಮಂದಿ ಮುಸ್ಲಿಂರಾದರೆ ಉಳಿದವರು ಹಿಂದೂ ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿದವರಾಗಿದ್ದಾರೆ. ಗ್ರಾಮದಲ್ಲಿ ವರದಕ್ಷಿಣೆ ನಿರ್ಮೂಲನ ಚಳವಳಿಯ ಮುಂದಾಳು ಆರ್ಯಾಡನ್ ಶೌಕತ್. ಇವರು ಕೇರಳದ ಕಾಂಗ್ರೆಸ್ ನಾಯಕ ಆರ್ಯಾಡನ್ ಮೊಹಮದ್ ಅವರ ಮಗ.

ಶೌಕತ್ ಚಲನಚಿತ್ರ ನಿರ್ಮಿಸುತ್ತಾರೆ. ಕಮರ್ಷಿಯಲ್ಲೂ ಅಲ್ಲ, ಕಲಾತ್ಮಕ ಚಿತ್ರವೂ ಅಲ್ಲ. ಸಾಮಾಜಿಕ ಸಂದೇಶ ಬೀರುವ ಅಚ್ಚುಕಟ್ಟಾದ ಚಿತ್ರಗಳು ಅವರ ಆಯ್ಕೆ. ಮುಸ್ಲಿಂ ಜನಾಂಗದಲ್ಲಿ ಚಿಕ್ಕ ಹೆಣ್ಣು ಮಕ್ಕಳನ್ನು ವೃದ್ಧರಿಗೆ ಮದುವೆ ಮಾಡಿಕೊಡುವ ಅಮಾನವೀಯ ಸಂಪ್ರದಾಯ ಅಥವಾ ಅನಿವಾರ್ಯತೆಯ ವಿರುದ್ಧ ಜನಜಾಗೃತಿ ಸಾರುವ ಚಿತ್ರ ನಿರ್ಮಿಸಿದ್ದರು. 2002ರ ಗುಜರಾತ್ ಗಲಭೆಯ ನಂತರದ ದಿನಗಳಲ್ಲಿ ಇವರು ತೆಗೆದ ‘ವಿಲಪಂಗಲ್ಕು ಅಪ್ಪುರಂ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಸುಹಾಸಿನಿ ಅಭಿನಯದ ಆ ಚಿತ್ರಕ್ಕೆ ಶೌಕತ್ ಅವರದೇ ಕಥೆ.

ಒಂದು ಸಮೀಕ್ಷೆಯ ಪ್ರಕಾರ ನಿಲಂಬೂರು ಗ್ರಾಮದಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದಂತೆ 18ರಿಂದ 40 ವಯೋಮಾನದೊಳಗಿನ 4,698 ಮಂದಿ ಅವಿವಾಹಿತರಿದ್ದಾರೆ. ಇವರ ಪೈಕಿ ಈಗಾಗಲೇ 2,000 ಮಂದಿ ವೆಬ್ ಸೈಟಿನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ‘ವರದಕ್ಷಿಣೆ ರಹಿತ ಮದುವೆ’ ಎನ್ನುವುದೇ ಅವರೆಲ್ಲರ ಘೋಷವಾಕ್ಯವಾಗಿದೆ.

ಗ್ರಾಮದಲ್ಲಿ ಈ ಚಳವಳಿ ಆರಂಭವಾದದ್ದು ಒಂದು ಆಕಸ್ಮಿಕ. ಎರಡು ವರ್ಷದ ಹಿಂದೆ ಗ್ರಾಮ ಸಭೆಯು ಒಂದು ಸಮೀಕ್ಷೆ ಕೈಗೊಂಡಿತ್ತು. ವಾಸಕ್ಕೆ ತಮ್ಮದೇ ಎನುವಂಥ ಮನೆಯಿಲ್ಲದ ಎಷ್ಟು ಮಂದಿ ಗ್ರಾಮದಲ್ಲಿ ಇದ್ದಾರೆ ಎಂದು ತಿಳಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು. ಈ ವೇಳೆ ಆಕಸ್ಮಾತ್ ಗೊತ್ತಾದ ಅಂಕಿಅಂಶವೆಂದರೆ ಗ್ರಾಮದಲ್ಲಿ ಆರ್ಥಿಕವಾಗಿ ಕೆಳಸ್ತರದಲ್ಲಿರುವ ಶೇ. 25ರಷ್ಟು ಮಂದಿಗೆ ಸ್ವಂತ ಮನೆಯಿರಲಿಲ್ಲ. ಯಾಕೆಂದರೆ, ಅವರೆಲ್ಲರೂ ತಮ್ಮ ಮಗಳ ಮದುವೆ, ವರದಕ್ಷಿಣೆ ಖರ್ಚು ನಿಭಾಯಿಸಲು ಮನೆಗಳನ್ನು ಮಾರಿಕೊಂಡಿದ್ದರು.

ವರದಕ್ಷಿಣೆ ಪಿಡುಗನ್ನು ಸೀಮೆ ಎಣ್ಣೆ ಹಾಕಿ ಸುಡಬೇಕು ಎಂದು ಸಂಕಲ್ಪ ಮಾಡಿರುವ ನಿಲಂಬೂರು ಗ್ರಾಮಸ್ಥರ ಹೆಸರಿನಲ್ಲಿ ಇನ್ನೊಂದು ದಾಖಲೆ ಇದೆ. ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಕನಿಷ್ಠ ನಾಲಕ್ಕನೆ ತರಗತಿಯವರೆಗೆ ಓದು ಪೂರೈಸಿದ ಭಾರತದ ಪ್ರಥಮ ಹಳ್ಳಿ ಎಂಬ ಸಮ್ಮಾನಕ್ಕೆ ಅವರು ಪಾತ್ರರಾಗಿದ್ದಾರೆ. ಈ ದಾಖಲೆ ಬರೆದು ಎರಡು ವರ್ಷವೇ ಕಳೆದಿದೆ. ಈಗ ಇನ್ನೊಂದು ದಾಖಲೆ ನಿರ್ಮಿಸುವತ್ತ ಹಳ್ಳಿ ಜನ ಹೆಜ್ಜೆ ಹಾಕುತ್ತಿದ್ದಾರೆ. ವರದಕ್ಷಿಣೆಗೆ ಗುಡ್ ಬೈ.

(ಮಾಹಿತಿ : ಹರಿಕೃಷ್ಣನ್, ಮಲ್ಲಾಪುರಂ)

ಪೂರ್ಣಯ್ಯನವರ ಛತ್ರ ಸಾರ್ವಜನಿಕರಿಗೆ ಮುಕ್ತ- Dewan purnaiah memorial hall mysuru

0111 Dewan Purnaiah Memorial Hall Mysuru

ಮೇಧಾವಿ, ದಕ್ಷ ಆಡಳಿತಗಾರ ಮತ್ತು ಜನಸ್ನೇಹಿ ಕಾರ್ಯಕ್ರಮಗಳಿಗೆ ಸಿದ್ಧಹಸ್ತ ಎಂದು ಹೆಸರಾಗಿದ್ದವರು ಮೈಸೂರಿನ ದಿವಾನ್ ಪೂರ್ಣಯ್ಯ. ಕೇವಲ ಮೈಸೂರು ನಗರವಷ್ಟೆ ಅಲ್ಲ, ಇಡೀ ಹಳೆ ಮೈಸೂರು ಪ್ರಾಂತ್ಯದ ಜನತೆಗೆ ಅವರು ಅಚ್ಚಳಿಯದ ನೆನಪು. ಈಗ ಅವರ ನೆನಪಿಗೋಸ್ಕರ ಮೈಸೂರಿನಲ್ಲಿ ಅವರ ನಾಮಾಂಕಿತದಲ್ಲಿದ್ದ ಪೂರ್ಣಯ್ಯ ಛತ್ರವನ್ನು ನವೀಕರಿಸಿ ಅದಕ್ಕೆ ಪೂರ್ಣಯ್ಯ ಸ್ಮಾರಕ ಸಭಾಂಗಣ ಮತ್ತು ಛತ್ರ ಎಂದು ಹೆಸರಿಸಲಾಗಿದೆ. ಈ ಛತ್ರ ಈಗ ಸಾರ್ವಜನಿಕರಿಗೆ ಮುಕ್ತ ಮುಕ್ತವಾಗಿದೆ. ತಾವು ಅಲ್ಲಿ ಮದುವೆ, ಉಪನಯನ, ಆರತಕ್ಷತೆ, ಸಭೆ, ಮೀಟಿಂಗು ಈಟಿಂಗು ಮುಂತಾದ ಸಾರ್ವಜನಿಕ ಸಮಾರಂಭಗಳನ್ನು ಇಟ್ಟುಕೊಳ್ಳಬಹುದು.

ಈ ಸಭಾಂಗಣ ವಿಶಾಲವಾಗಿದ್ದು ಒಂದು ನೆಲ ಅಂತಸ್ತಿದೆ. ಅದು ಭೋಜನ ಗೃಹ. ಒಂದು ಮುಖ್ಯ ಸಭಾಂಗಣ ಮತ್ತು ಕಡಿಮೆ ಜನ ಹಿಡಿಸುವ ಕಾರ್ಯಕ್ರಮಗಳಿಗಾಗಿ ಮೇಲಂತಸ್ತಿನಲ್ಲಿ ಒಂದು ಮಿನಿ ಸಭಾಂಗಣ. ಈ ಛತ್ರ ಮಹಾತ್ಮಾ ಗಾಂಧೀ ರಸ್ತೆಯಲ್ಲಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಛತ್ರವನ್ನು ಅಂದವಾಗಿ ನವೀಕರಿಸಲಾಗಿದೆ. ಒಂದು ಭಾಗ ಮಾತ್ರ ಸಿದ್ಧವಾಗಿದ್ದ ಈ ಸಭಾಂಗಣವನ್ನು ಕಳೆದ ಫೆಬ್ರವರಿಯಲ್ಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟಿಸಿದ್ದರು.

ಮುಜರಾಯಿ ಇಲಾಖೆ ಹಾಗೂ ಅರಮನೆಯ ಮುಜರಾಯಿ ಮಂಡಳಿಯ ಸಹಭಾಗಿತ್ವದಲ್ಲಿ ಕಟ್ಟಿರುವ ನೂತನ ಸಭಾಂಗಣವನ್ನು ಸಾರ್ವಜನಿಕರು ಬಳಸಬಹುದು. ಆಸಕ್ತರು 08121-2434739 ಸಂಪರ್ಕಿಸಬಹುದು ಎಂದು ಚಾಮುಂಡಿ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಶಿವಲಿಂಗೇ ಗೌಡ ತಿಳಿಸಿದ್ದಾರೆ. ಮೈಸೂರು ರಾಜ್ಯದ ನಾನಾ ಜಿಲ್ಲೆಗಳಲ್ಲಿಯೂ ಪೂರ್ಣಯ್ಯನವರು ಛತ್ರ ಕಟ್ಟಿಸಿದ್ದರು. ಪ್ರವಾಸಿಗರು ತಂಗಲು ಅವರು ಕಲ್ಪಿಸಿದ್ದ ಉಚಿತ ವಸತಿ ವ್ಯವಸ್ಥೆ ಆದಾಗಿತ್ತು. ಮೈಸೂರಿನ ಛತ್ರಕ್ಕೆ ಸ್ಮಾರಕದ ಯೋಗ ಲಭಿಸಿತು. ಉಳಿದ ಜಿಲ್ಲೆಗಳಲ್ಲಿದ್ದ ಈ ಛತ್ರಗಳು ಯಾವ ಸ್ಥಿತಿಯಲ್ಲಿವೆ? ತಪಾಸಣೆ ಆಗಬೇಕು.

ಪೂರ್ಣಯ್ಯನವರ ಬಗ್ಗೆ : ಪೂರ್ಣಯ್ಯ (1746-1812) ಮೈಸೂರಿನ ದಿವಾನರಾಗಿದ್ದರು. ದಿವಾನ್ ಎಂದರೆ ಇವತ್ತಿನ ಸಂದರ್ಭಕ್ಕೆ ಚೀಫ್ ಸೆಕ್ರೆಟರಿ ಎಂದು ಹೇಳಬಹುದು. ಟಿಪ್ಪೂ ಸುಲ್ತಾನ್, ಹೈದರ್ ಅಲಿ ಆಸ್ಥಾನದಲ್ಲಿ ಅವರು ಹಿರಿಯ ಅಧಿಕಾರಿಯಾಗಿದ್ದರು. ಆನಂತರ ಬ್ರಿಟಿಷರ ಆಳ್ವಿಕೆಯಲ್ಲಿಯೂ ಅವರು ದಿವಾನರಾಗಿದ್ದರು. ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅವರೇ ಮೈಸೂರು ಪ್ರಾಂತ್ಯದ ಆಗುಹೋಗುಗಳಿಗೆ ಬಾಧ್ಯಸ್ಥರಾಗಿದ್ದರು.

ಮಹಾ ಮೇಧಾವಿ, ದಕ್ಷ ಆಡಳಿತಗಾರ ಎಂದು ಪೂರ್ಣಯ್ಯ ಜನಪ್ರಿಯರಾಗಿದ್ದರು. ಹಲವು ಭಾಷಾ ಕೋವಿದ, ಕುಶಲ ಕೆಲಸಗಾರರಷ್ಟೇ ಅಲ್ಲದೆ ಕಷ್ಟಪಟ್ಟು ದುಡಿಯುವ ಜನಸೇವಕ ಎಂದೂ ಖ್ಯಾತರಾಗಿದ್ದರು. ಟಿಪ್ಪು ಸಾವಿನ ನಂತರ ಮೈಸೂರು ಪ್ರಾಂತ್ಯ ಒಡೆಯರ್ ಅವರ ಆಳ್ವಿಕೆಗೆ ಬಂತು. ಆಗಿನ್ನೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕ ಹುಡುಗ. ಅವರಿಗೆ ವಿದ್ಯಾಭ್ಯಾಸ, ತರಬೇತಿ, ರಾಜ್ಯಭಾರ, ಆಡಳಿತದ ಸೂಕ್ಷ್ಮಗಳನ್ನು ತಿಳಿಯ ಹೇಳಿದವರು ಪೂರ್ಣಯ್ಯನವರು ಎಂದು ಇತಿಹಾಸ ಹೇಳುತ್ತದೆ. ಪೂರ್ಣಯ್ಯನವರ ತೈಲಚಿತ್ರ ಕೃಪೆ: ಕಾಮತ್ ಡಾಟ್ ಕಾಂ.

ಅನಿವಾಸಿ ಕನ್ನಡಿಗರ ಪ್ರೀತಿಯ ನಾಗತಿ- Nagathihalli the darling of nri kannadigas

1217 Nagathihalli The Darling Of Nri Kannadigas

ಹಾಂಗ್ ಕಾಂಗ್ ಹಗರಣ ನಡೆದ ಒಂದು ವಾರದ ನಂತರ ಪ್ಯಾರಿಸ್ ಪ್ರಣಯ ಖ್ಯಾತಿಯ ನಿರ್ದೇಶಕ ನಾಗತಿಹಳ್ಳಿ ಬೆಂಗಳೂರಿನಲ್ಲಿ ಡಿಸೆಂಬರ್ 17, ಗುರುವಾರ ಸುದ್ದಿಗೋಷ್ಠಿ ಕರೆದಿದ್ದರು. ಸ್ಥಳ : ಬೆಂಗಳೂರು ರೈಲು ನಿಲ್ದಾಣದ ರಸ್ತೆಯಲ್ಲಿರುವ ತ್ರೀ ಸ್ಟಾರ್ ಹೋಟೆಲ್ ಬೆಲ್. ತೋಂಟದಪ್ಪನ ಛತ್ರದ ಪಕ್ಕ.

ಹಾಂಗ್ ಕಾಂಗಿನಿಂದ ಹಾರಿಬರುತ್ತಿರುವ ವಾಯುಮಾರ್ಗದಲ್ಲೇ ತಮ್ಮ ವಿರುದ್ಧದ ಗುರುತರ ಆರೋಪಗಳ ಗಾರ್ಬೇಜುಗಳನ್ನು ಕ್ಯಾರಿಬ್ಯಾಗಿನಲ್ಲಿ ತುರುಕಿಕೊಂಡೇ ಅವರು ಬೆಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಬಂದ ಕೂಡಲೇ ಅವರ ಪ್ರೀತಿಯ ಆಯ್ದ ಕೆಲವು ಟಿವಿ ಚಾನಲ್ಲುಗಳಿಗೆ ಗಡಿಬಿಡಿ ಸಂದರ್ಶನ ನೀಡಿ ಐಂದ್ರಿತಾ ಅವರ ಆರೋಪಗಳನ್ನು ಅಲ್ಲಗೆಳೆದದ್ದು ಬಿಟ್ಟರೆ ಬೇರಿನ್ನಾವ ಪತ್ರಕರ್ತರನ್ನು ಅವರು ಹತ್ತಿರ ಬಿಟ್ಟುಕೊಂಡಿರಲಿಲ್ಲ.

ನಾಗತಿಯವರನ್ನು ಖುದ್ದಾಗಿ ಕಂಡು, ಅಥವಾ ಫೋನು ಮಾಡಿ ಮುದ್ದಾಂ ವಿವರಗಳನ್ನು ಪಡೆದು ಬರೆಯಬೇಕೆಂದು ಪ್ರಯತ್ನಿಸಿದ ಅನೇಕ ವರದಿಗಾರರ ಬ್ರದರ್ ಗಳಿಗೆ ಅವರು ಗಪ್ ಚುಪ್ ಆಗಿದ್ದರು. ಆದರೆ, ಸುವರ್ಣ ಟಿವಿ ಚಾನಲ್ ಮತ್ತು ಟಿವಿ 9 ಚಾನಲ್ಲಿಗೆ ಮಾತ್ರ ಅವರು ಅದು ಹೇಗೋ ಹೋಗಿ ಐಟಂ ಕೊಟ್ಟಿದ್ದು ಕನ್ನಡದ ಇತರ ಐದಾರು ಚಾನಲ್ಲುಗಳ ಕ್ಯಾಮರಾ ಕಣ್ಣುಗಳನ್ನು ಸೆಪಿಯಾ ಟೋನ್ ಆಗಿಸಿದ್ದವು.

ಟಿವಿ ಮಾಧ್ಯಮದ ಗತಿಯೇ ಹೀಗಿರುವಾಗ ಇನ್ನು ಮುದ್ರಣ ಮಾಧ್ಯಮಗಳ ಪಾಡು ವರ್ಣಿಸಬೇಕಿಲ್ಲ. ನನ್ನ ಅನೇಕ ಸ್ನೇಹಿತರು ಅಂದು ದೂರವಾಣಿ ಕರೆಮಾಡಿ ‘ನಾಗತಿ ಫೋನು ಎತ್ತುತ್ತಿಲ್ಲ ಯಾಕೆ ಶಾಮ್ ‘ ಎಂದು ವಿಚಾರಿಸಿದ್ದುಂಟು. ‘ನನಗೆ ಗೊತ್ತಿಲ್ಲಪ್ಪ, ಆಗಸ್ಟ್ 15ರಂದು ಅವರು ಜೆಎಸ್ ಎಸ್ ಸಭಾಂಗಣದಲ್ಲಿ ಏರ್ಪಡಿಸುವ ಪುಸ್ತಕ ಬಿಡುಗಡೆ ಮತ್ತು ನಾಗತಿಹಳ್ಳಿಯಲ್ಲಿ ಏರ್ಪಡಿಸಿದ್ದ nagatihalli village cultural festival ಆಹ್ವಾನ ಪತ್ರಿಕೆ ಬಿಟ್ಟರೆ ದಟ್ಸ್ ಕನ್ನಡ ಡಾಟ್ ಕಾಂ ತಾಣವನ್ನು ಅವರು ಮೂಸಿಯೂ ನೋಡುವುದಿಲ್ಲ’ ಎಂದು ಹೇಳಿ ಸುಮ್ಮನಾಗಿಸಿದ್ದೆ.

ತಮ್ಮ ಅನೇಕಾನೇಕ ಮುದ್ರಣ ಪತ್ರಕರ್ತ ಮಿತ್ರರನ್ನು ಮಾತನಾಡಿಸಲಾಗಲಿಲ್ಲವಲ್ಲ ಮತ್ತು ಅವರ ಕರೆಗಳನ್ನು ಎತ್ತಲಾಗಿಲ್ಲವಲ್ಲ ಎಂಬ ವ್ಯಥೆ ನಾಗತಿಯವರನ್ನು ಕಾಡುತ್ತಿತ್ತು. ಇದರ ಜತೆಗೆ ಉದಯವಾಣಿ ಪತ್ರಿಕೆಯವರು ಡಿಸೆಂಬರ್ 16ರ ಸಂಚಿಕೆಯಲ್ಲಿ ‘ನಾಗತಿಗೆ ಈ ಗತಿ ಬರಬಾರದಿತ್ತು’ ಎಂಬ ಹೆಂಡ್ಡಿಗ್ ನಲ್ಲಿ ‘ತಮ್ಮ ಚಪ್ಪಡಿ ತಾವೇ ಎಳೆದು ಕೊಂಡರು’ ಎಂಬ ವಿಚಾರವನ್ನು ಸವಿಸ್ತಾರವಾಗಿ ವರ್ಣಿಸಿದ್ದರು. ಇನ್ನು ಲೇಟು ಮಾಡಿದರೆ ಹೆಚ್ಚು ಅಪರಾಧವಾದೀತು ಎಂದು ಎಚ್ಚೆತ್ತುಕೊಂಡ ನಾಗತಿ ಸುದ್ದಿಗೋಷ್ಠಿಗೆ ಮನಸೋತರು.

ನೂರು ಜನ್ಮಕು ಚಿತ್ರಕ್ಕಾಗಿ ಅಲ್ಲದಿದ್ದರೂ ಕೇವಲ ಪತ್ರಿಕಾ ಮಿತ್ರರೊಂದಿಗೆ ಸೌಹಾರ್ದ ಸಂಬಂಧಗಳನ್ನು ಉಳಿಸಿಬೆಳೆಸಬೇಕೆಂಬ ದೃಷ್ಟಿಕೋನದಿಂದ ಇವತ್ತಿನ ಸುದ್ದಿಗೋಷ್ಠಿಗೆ ಎಲ್ಲಾ ಪತ್ರಿಕೆಯ ವರದಿಗಾರರನ್ನು ನಾಗತಿ ಆಹ್ವಾನಿಸಿದ್ದರು. ಅವರ ಪಟ್ಟಿಯಲ್ಲಿ ಅಂತರ್ಜಾಲ ತಾಣಗಳು ಇರಲಿಲ್ಲ. ಆದರೆ, ನಾಗತಿ ಎಂದರೆ ಡೆಟ್ರಾಯಿಟ್, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೊ, ಲಂಡನ್, ಸಿಂಗಾಪುರ, ದುಬೈ, ಏಶಿಯಾ ಪೆಸಿಫಿಕ್ ಮುಂತಾದ ಅಂತಾರಾಷ್ಟ್ರೀಯಮಟ್ಟದ ನಗರಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ತುಂಬಾ ಪ್ರೀತಿ. ಹಾಗಾಗಿ, ಅನಿವಾಸಿ ಕನ್ನಡ ಬಾಂಧವರಿಗೆಲ್ಲ ಸುದ್ದಿ ಮುಟ್ಟಿಸುವ ಕಾಯಕವನ್ನೇ ಅರ್ಧ ಕೈಲಾಸ ಮಾಡಿಕೊಂಡಿರುವ ನಾನು, ಒಬ್ಬ ಆಸಾಮಿಯನ್ನು ತೋಂಟದಪ್ಪ ಛತ್ರಕ್ಕೆ ಛೂ ಬಿಟ್ಟಿದ್ದೆ….